ಬುಕ್ಕಿಂಗ್ ರದ್ದು ಮಾಡಿದ ರವೀಂದ್ರ ಕಲಾಕ್ಷೇತ್ರ: ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದಿಂದ ಹೈಕೋರ್ಟ್ ಮೊರೆ
ಬೆಂಗಳೂರು, ಸೆ.6: ಮಹಿಳಾ ಸಾಧಕರು ಮತ್ತು ಯುವ ತಾರೆಯರ ಸನ್ಮಾನ ಕಾರ್ಯಕ್ರಮಕ್ಕಾಗಿ ಬುಕ್ಕಿಂಗ್ ಅನ್ನು ರದ್ದು ಮಾಡಿದ್ದಕ್ಕಾಗಿ ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ ರವೀಂದ್ರ ಕಲಾಕ್ಷೇತ್ರದ ವಿರುದ್ಧ ಹೈಕೋರ್ಟ್ ಮೊರೆ ಹೋಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.
ಕಾರ್ಯಕ್ರಮಕ್ಕಾಗಿ 2022ರ ಜೂನ್ನಲ್ಲಿ ಮುಂಗಡ ಹಣ ನೀಡಿ ರವೀಂದ್ರ ಕಲಾಕ್ಷೇತ್ರ ಸಭಾಂಗಣ ಕಾಯ್ದಿರಿಸಲಾಗಿತ್ತು. ಆದರೆ, ಸಿಎಂ ಬೊಮ್ಮಾಯಿ ಸೂಚನೆ ಮೇರೆಗೆ ಕಾಯ್ದಿರಿಸಿದ ದಿನಾಂಕವನ್ನು ಮುಂದೂಡುತ್ತಿರುವುದಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆ.16 ರಂದು ಸೂಚನೆ ನೀಡಿದೆ.
ಆದರೆ, ಮಹಿಳಾ ಸಾಧಕರನ್ನು ಸನ್ಮಾನಿಸಲು ಕಳೆದ ಕೆಲವು ತಿಂಗಳುಗಳಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯದ ಹೊರ ಭಾಗಗಳಿಂದ ಹಲವು ಮಂದಿ ಸಾಧಕರು ಆಗಮಿಸುತ್ತಿದ್ದಾರೆ. ಇದರಿಂದ ಕಾರ್ಯಕ್ರಮ ಮುಂದೂಡಲು ಸಾಧ್ಯವಿಲ್ಲ. ನಿಗದಿಯಾದ ದಿನಾಂಕದಂದು ಸಮಾರಂಭ ನಡೆಸಲು ಅವಕಾಶ ನೀಡುವಂತೆ ಕೋರಿದರೂ ಪ್ರಯೋಜನವಾಗಿಲ್ಲ. ಆದಕಾರಣ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಇನ್ನಷ್ಟೇ ವಿಚಾರಣೆಗೆ ಬರಬೇಕಾಗಿದೆ ಎಂದು ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷ ಉಮೇಶ ಮಾಹಿತಿ ನೀಡಿದರು. ಸರಕಾರದ ಕ್ರಮ ಪ್ರಶ್ನಿಸಿ ಲೋಕಾಯುಕ್ತಕ್ಕೂ ದೂರು ನೀಡುವುದಾಗಿ ತಿಳಿಸಿದರು.