ಬುಲ್‌ಬುಲ್‌ ಹಕ್ಕಿ ಮೇಲೆ ಸಾವರ್ಕರ್ ಸವಾರಿ: ಪಠ್ಯ ವಿವಾದದ ಕುರಿತು ಲೇಖಕರ ಪತ್ನಿಯ ಪ್ರತಿಕ್ರಿಯೆ

Update: 2022-09-08 18:26 GMT

ಬೆಂಗಳೂರು, ಸೆ.8: ಎಂಟನೆ ತರಗತಿಯ ಪಠ್ಯದಲ್ಲಿ ಸಾವರ್ಕರ್ (Savarkar) ಅವರು ಬುಲ್ ಬುಲ್ ಪಕ್ಷಿಗಳ ರೆಕ್ಕೆಗಳ ಮೇಲೆ ಕಾರಾಗೃಹದಿಂದ ತಾಯ್ನಾಡಿಗೆ ಬಂದು ಹೋಗುತ್ತಿದ್ದರು ಎಂಬ ಉಲ್ಲೇಖ ಒಂದು ರೂಪಕ ಎಂದು ಲೇಖಕ ಕೆ.ಟಿ.ಗಟ್ಟಿ ಅವರ ಪತ್ನಿ ಯಶೋಧಾ ಅಮ್ಮೆಂಬಳ ಸಮರ್ಥಿಸಿಕೊಂಡಿದ್ದಾರೆ.

ಎಂಟನೆ ತರಗತಿಯ ಪಠ್ಯ ಸಾಕಷ್ಟು ದೊಡ್ಡ ವಿವಾದ ಸೃಷ್ಟಿಸಿರುವ ಸಂದರ್ಭದಲ್ಲಿ ಈ ಪ್ರತಿಕ್ರಿಯೆ ನೀಡಿರುವ ಅವರು, ಅದೊಂದು ರೂಪಕವಷ್ಟೇ ಬೇರೇನೂ ಅಲ್ಲ. ಪತಿ ಕೆ.ಟಿ. ಗಟ್ಟಿ ಅವರು ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆ ಅವರಿಗೆ ಪ್ರತಿಕ್ರಿಯೆ ನೀಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಅವರ ಪರವಾಗಿ ತಾವು ಈ ಮಾಹಿತಿ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಸ್ವಾತಂತ್ರ‍್ಯ ಹೋರಾಟಗಾರನ ವೈಭವೀಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಸಾವರ್ಕರ್ ಅವರ 8ನೆ ತರಗತಿಯ ಕನ್ನಡ ದ್ವಿತೀಯ ಭಾಷೆಯ ಪಠ್ಯಪುಸ್ತಕ ವಿವಾದದ ನಂತರ ಲೇಖಕರ ಪತ್ನಿ ಈ ಮಾಹಿತಿ ಬಿಡುಗಡೆ ಮಾಡಿದ್ದಾರೆ.

ಕಾಲವನ್ನು ಗೆದ್ದವರು ಎಂಬ ಪಾಠವು ಲೇಖಕ ಕೆ.ಟಿ.ಗಟ್ಟಿ ಅವರು ಬರೆದ ಪ್ರವಾಸ ಕಥನವಾಗಿದ್ದು, ಹಿಂದುತ್ವವಾದಿ ನಾಯಕನನ್ನು ಬಂಧಿಸಿರುವ ಅಂಡಮಾನ್ ಸೆಲ್ಯುಲರ್ ಜೈಲಿಗೆ ಭೇಟಿ ನೀಡಿದ ಅನುಭವವನ್ನು ವಿವರಿಸುತ್ತದೆ. ಇದು ಕೇವಲ ರೂಪಕವಾಗಿದೆ. ಆದರೆ ಪಠ್ಯವಾಗಿ ಅಂಗೀಕರಿಸುವ ಸಂದರ್ಭದಲ್ಲಿ ಹೋಲಿಕೆ ಅಥವಾ ಸನ್ನಿವೇಶವನ್ನು ಉಲ್ಲೇಖಿಸಲು ಮರೆತಿರುವುದರಿಂದಲೂ ಈ ಗೊಂದಲ ಉಂಟಾಗಿರಬಹುದು. ಲೇಖಕರ ಕಣ್ತಪ್ಪಿನಿಂದ ಅಥವಾ ಸಂಪಾದಕೀಯ ದೋಷದಿಂದ ತಪ್ಪು ಸೇರಿರಬಹುದು ಎಂದು ಯಶೋಧಾ ವಿವರಿಸಿದ್ದಾರೆ.

ಇದನ್ನೂ ಓದಿ>>> 'ಬುಲ್ ಬುಲ್ ಪಕ್ಷಿ ಮೇಲೆ ಕೂತು ಹಾರಲು ಸಾಧ್ಯವೇ?': ಸಾವರ್ಕರ್ ಪಠ್ಯದ ಕುರಿತು ಮತ್ತೊಂದು ವಿವಾದ ಸೃಷ್ಟಿ

ಬುಲ್‌ಬುಲ್ ಹಕ್ಕಿಯ ಮೇಲೆ ತಾಯ್ನಾಡಿಗೆ ಸಾವರ್ಕರ್ ಭೇಟಿ ನೀಡುತ್ತಿದ್ದರು ಎಂಬ ರೂಪಕವು ಲೇಖಕರೇ ಬರೆದಿದ್ದೋ, ಬೇರೆ ಪುಸ್ತಕದಿಂದ ತೆಗೆದುಕೊಂಡಿದ್ದೋ ಅಥವಾ ಸಾವರ್ಕರ್ ಬಂಧಿಯಾಗಿದ್ದ ಪ್ರದೇಶದಲ್ಲಿ ಬುಲ್‌ಬುಲ್ ಹಕ್ಕಿಗಳ ಸಂಖ್ಯೆ ಹೆಚ್ಚಿದ್ದುದ್ದರಿಂದ ಹಾಗೆ ಹೋಲಿಕೆ ಮಾಡಲಾಗಿದೆಯೋ ಹೇಳಲು ನಮಗೆ ಸಾಧ್ಯವಿಲ್ಲ. ಆದರೆ, ಇದು ಲೇಖಕರ ಕಲ್ಪನೆಯಿಂದ ಮೂಡಿದ್ದಾಗಿರಲು ಸಾಧ್ಯವಿಲ್ಲ. ಪಠ್ಯಕ್ರಮವು ಭಾಷೆಯ ಕುರಿತದ್ದಾಗಿದೆ. ಇತಿಹಾಸದ ಪಠ್ಯವಲ್ಲ. ಇದು ಪ್ರವಾಸ ಕಥನವಾಗಿರುವುದರಿಂದ ಇತಿಹಾಸದ ಕುರುಹುಗಳನ್ನು ಹುಡುಕಬೇಕೆಂದಿಲ್ಲ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News