ಬಿಐಟಿ, ಬೀಡ್ಸ್ ಮತ್ತು ಬಿಐಇಎಸ್ ಗಳಿಂದ ಹಸಿರು ಕಟ್ಟಡ ಸಪ್ತಾಹ: ಸೆ.11 ರಂದು 'ಗ್ರೀನ್ ವಾಕಥಾನ್' ಆಯೋಜನೆ
ಮಂಗಳೂರು: ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ), ಬ್ಯಾರೀಸ್ ಎನ್ವಿರೋ-ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ (ಬೀಡ್ಸ್), ಮತ್ತು ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಎಮರ್ಜಿಂಗ್ ಸೈನ್ಸ್ (ಬಿಐಇಎಸ್) ವತಿಯಿಂದ ಮಂಗಳೂರಿನಲ್ಲಿ ವಿಶ್ವ ಹಸಿರು ಕಟ್ಟಡ ಸಪ್ತಾಹವನ್ನು ಆಚರಿಸಲಾಗುತ್ತಿದ್ದು, ಅದರ ಭಾಗವಾಗಿ ಸೆ.11 ರಂದು ಮಂಗಳೂರಿನ ನೆಹರು ಮೈದಾನದಿಂದ ಮಂಗಳಾ ಸ್ಟೇಡಿಯಂ ಮೈದಾನದವರೆಗೆ ಗ್ರೀನ್ ವಾಕಾಥಾನ್ ಅನ್ನು ಆಯೋಜಿಸಲಾಗಿದೆ ಎಂದು ಬ್ಯಾರೀಸ್ ಸಂಸ್ಥೆ ಸಮೂಹ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.
ಬೆಳಗ್ಗೆ 7.30ಕ್ಕೆ ನೆಹರೂ ಮೈದಾನದಲ್ಲಿ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ್ ಕಾಮತ್ ಮತ್ತು ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಉದ್ಘಾಟನಾ ಧ್ವಜಾರೋಹಣ ನೆರವೇರಿಸಲಿದ್ದು, ಸಮಾರೋಪ ಸಮಾರಂಭವು ಮಂಗಳಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಬ್ಯಾರಿಸ್ ಗ್ರೂಪ್ನ ಡೆಪ್ಯೂಟಿ ಎಂಡಿ ಅಬೂಬಕ್ಕರ್ ಸಿದ್ದೀಕ್ ಬ್ಯಾರಿ ಅವರು ವಿಶೇಷ ಭಾಷಣ ಮಾಡಲಿದ್ದಾರೆ.
ಸುಸ್ಥಿರ ಅಭಿವೃದ್ಧಿ, ಇಂಧನ ಉಳಿತಾಯ, ಮರುಬಳಕೆ, ಸ್ವಚ್ಛತೆಗಾಗಿ ಉತ್ತೇಜಿಸುವ ಮೂಲಕ ಹಸಿರು ನಗರದ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶವೆಂದು ಪ್ರಕಟನೆಯು ತಿಳಿಸಿದೆ.