ಖನಿಜ ನಿಕ್ಷೇಪಗಳ ಶೋಧನೆಗೆ ಕೇಂದ್ರದ ಹೆಚ್ಚಿನ ಸಹಕಾರ ಅಗತ್ಯ: ಸಚಿವ ಹಾಲಪ್ಪ ಆಚಾರ್

Update: 2022-09-09 18:22 GMT

ಬೆಂಗಳೂರು, ಸೆ. 9: ‘ರಾಜ್ಯದಲ್ಲಿ ವಿಫುಲ ಖನಿಜ ನಿಕ್ಷೇಪಗಳಿದ್ದು, ಇವುಗಳ ಶೋಧನೆಗೆ ರಾಜ್ಯ ಸರಕಾರ ಅಗತ್ಯ ಕ್ರಮಗಳನ್ನ ಕೈಗೊಂಡಿದೆ. ಆದರೆ, ಈ ಶೋಧನೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಕೇಂದ್ರ ಗಣಿ ಮಂತ್ರಾಲಯ ಹಾಗೂ ಕೇಂದ್ರ ಖನಿಜ ಶೋಧನಾ ಟ್ರಸ್ಟ್‍ನ ಸಹಕಾರ ಅಗತ್ಯ' ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್ ತಿಳಿಸಿದ್ದಾರೆ.

ಶುಕ್ರವಾರ ಹೈದರಬಾದ್‍ನಲ್ಲಿ ಪ್ರಾರಂಭವಾದ ‘ರಾಷ್ಟ್ರೀಯ ಗಣಿಗಾರಿಕೆ ಮಂತ್ರಿಗಳ ಸಮಾವೇಶ'ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಸ್ವಾತಂತ್ರ್ಯಾನಂತರ ಇದುವರೆಗೂ ಯಾವುದೇ ಸರಕಾರಗಳು ಗಣಿ ಕ್ಷೇತ್ರದಲ್ಲಿ ಇಂತಹ ಪಾರದರ್ಶಕ ಹಾಗೂ ಪರಿಸರ ಸ್ನೇಹಿ ಕ್ರಮಗಳನ್ನು ಅಳವಡಿಸಲು ಮುಂದಾಗಿರಲಿಲ್ಲ. ಈ ಸುಧಾರಣೆಗಳು ಸರಕಾರಗಳು ಹೆಚ್ಚು ಆದಾಯವನ್ನು ಪಡೆದುಕೊಳ್ಳಲು ಸಹಾಯವಾಗಿವೆ. ವೈಜ್ಞಾನಿಕ ಹಾಗೂ ಪರಿಸರ ಸ್ನೇಹಿ ಕ್ರಮಗಳು ರಾಜ್ಯಗಳ ಗಣಿ ಕ್ಷೇತ್ರದ ಅಭಿವೃದ್ದಿಗೂ ಸಹಕಾರ ನೀಡಿವೆ' ಎಂದು ಹೇಳಿದರು.

‘ರಾಜ್ಯದಲ್ಲಿ ಗಣಿಗಾರಿಕೆಗೆ ವಿಫುಲ ಅವಕಾಶಗಳಿವೆ. ಲೈಮ್‍ಸ್ಟೋನ್ ಗಣಿಗಾರಿಕೆಯಲ್ಲಿ ದೇಶದಲ್ಲೇ ಮೊದಲ ಸ್ಥಾನ ಹಾಗೂ ಕಬ್ಬಿಣದ ಅದಿರಿನ ಗಣಿಗಾರಿಕೆಯಲ್ಲಿ ಎರಡನೆ ಸ್ಥಾನವನ್ನು ಹೊಂದಿದೆ. 2021-22ರಲ್ಲಿ ರಾಜ್ಯ ಸರಕಾರ 6,308 ಕೋಟಿ ರೂ.ಸಂಗ್ರಹಿಸಿದೆ. ಪ್ರಸ್ತುತ ಸಾಲಿನಲ್ಲಿ ಜುಲೈ ವರೆಗೂ 1,425 ಕೋಟಿ ರೂ. ಆದಾಯ ಸಂಗ್ರಹಿಸಲಾಗಿದ್ದು, ಈ ಬಾರಿ 6,500 ಕೋಟಿ ರೂ.ನಿರೀಕ್ಷೆಯಲ್ಲಿದ್ದೇವೆ. 2015ರಿಂದ ಗಣಿ ಕ್ಷೇತ್ರದಲ್ಲಿ ಆಗಿರುವ ಸುಧಾರಣೆ ಹಿನ್ನಲೆಯಲ್ಲಿ ರಾಜ್ಯದಲ್ಲೂ ಅಭಿವೃದ್ದಿಯಾಗಿದೆ. ಇನ್ನೂ ಹೆಚ್ಚಿನ ಖನಿಜ ನಿಕ್ಷೇಪಗಳಿದ್ದು ಅವುಗಳ ಶೋಧನೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಈಗಾಗಲೇ 113 ಭೂವಿಜ್ಞಾನಿಗಳನ್ನ ನೇಮಕ ಮಾಡಿಕೊಂಡಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸಲು ಕೇಂದ್ರದ ಸಹಕಾರದ ಅಗತ್ಯವಿದೆ ಎಂದರು. 

‘ರಾಜ್ಯ ಕಳೆದ ವರ್ಷ ರಾಷ್ಟ್ರೀಯ ಖನಿಜ ವಿಕಾಸ ಪುರಸ್ಕಾರದಲ್ಲಿ 3ನೆ ಸ್ಥಾನವನ್ನು ಪಡೆದುಕೊಂಡಿದ್ದೇವೆ. ಗಣಿ ಇಲಾಖೆಯಲ್ಲಿ ನೂತನ ಅಂಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಮೊದಲ 2ನೆ ಸ್ಥಾನಕ್ಕೆ ಅಭಿವೃದ್ದಿ ಹೊಂದುವ ಗುರಿಯನ್ನು ಹೊಂದಿದ್ದೇವೆ' ಎಂದ ಅವರು, ‘ರಾಷ್ಟ್ರೀಯ ಗಣಿಗಾರಿಕೆ ಮಂತ್ರಿಗಳ ಸಮಾವೇಶದಲ್ಲಿ ಅಕ್ರಮ ಗಣಿಗಾರಿಕೆಯನ್ನು ತಡೆಗಟ್ಟುವಲ್ಲಿ ಅಳವಡಿಸಿಕೊಂಡಿರುವ ನೂತನ ತಂತ್ರಜ್ಞಾನ ಹಾಗೂ ಗಣಿ ನೀತಿಯ ಸುಧಾರಣೆಯನ್ನು ಅಳವಡಿಸಿಕೊಳ್ಳುವ ಮೂಲಕ ಗಣಿ ಬ್ಲಾಕ್‍ಗಳನ್ನು ಹರಾಜು ಮಾಡುವ ನಿಟ್ಟಿನಲ್ಲಿ ದೇಶದಲ್ಲಿ ಎರಡನೆ ಸ್ಥಾನ ಹೊಂದಿರುವ ಬಗ್ಗೆಯೂ ಶ್ಲಾಘನೆ ವ್ಯಕ್ತವಾಯಿತು. 

ಕೇಂದ್ರ ಗಣಿ ಸಚಿವ ಪ್ರಹ್ಲಾದ್ ಜೋಷಿ, ದೇಶದ ಹಲವು ರಾಜ್ಯಗಳ ಗಣಿ ಇಲಾಖೆಯ ಸಚಿವರು, ಗಣಿ ಮಂತ್ರಾಲಯದ ಹಿರಿಯ ಅಧಿಕಾರಿಗಳು, ರಾಜ್ಯದ ಗಣಿ ಇಲಾಖೆಯ ನಿರ್ದೇಶಕ ಡಿ.ಎಸ್.ರಮೇಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News