ಹಾವು ಕಡಿತದ ಬಗ್ಗೆ ನಿರ್ಲಕ್ಷವೇಕೆ?

Update: 2022-09-15 04:54 GMT

ಸಾರ್ವಜನಿಕ ಆರೋಗ್ಯ ರಕ್ಷಣೆಯನ್ನು ಬಲಗೊಳಿಸಬೇಕಾಗಿದೆ

ಹಾವು ಕಡಿತದಿಂದ ಸಾವುಗಳ ಸಂಖ್ಯೆಯನ್ನು ತಗ್ಗಿಸುವಲ್ಲಿ ಆಧುನಿಕ ವೈದ್ಯಪದ್ಧತಿಯ ಮಧ್ಯಪ್ರವೇಶವು ನಿರ್ಣಾಯಕವಾಗಿದೆ ಎನ್ನುತ್ತಾರೆ ತಜ್ಞರು, ಆದರೆ ಎರಡು ಕಾರಣಗಳಿಂದ ಇದು ಸಾಧ್ಯವಾಗುತ್ತಿಲ್ಲ ಎಂದು ಅವರು ಬೆಟ್ಟು ಮಾಡಿದ್ದಾರೆ. ಹಾವು ಕಡಿತಕ್ಕೊಳಗಾದವರು ಆಧುನಿಕ ಔಷಧಿಗಿಂತ ಹೆಚ್ಚಾಗಿ ಪರ್ಯಾಯ ಔಷಧಿಗಳಲ್ಲಿ ಹೆಚ್ಚಿನ ನಂಬಿಕೆ ಹೊಂದಿರುವುದು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮತ್ತು ಅವುಗಳಲ್ಲಿ ವೈದ್ಯರ ಕೊರತೆ ಇವು ಈ ಎರಡು ಕಾರಣಗಳಾಗಿವೆ ಎನ್ನುತ್ತಾರೆ ಡಾ.ಭೌಮಿಕ್.

‘‘ಪರಿಹಾರಕ್ಕೆ ಸಂಪನ್ಮೂಲಗಳನ್ನು ಒದಗಿಸಲು ಯಾರೂ ಸಿದ್ಧರಿಲ್ಲದ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದವರ ಸಮಸ್ಯೆ’’

-ಭಾರತದಲ್ಲಿ ಹಾವು ಕಡಿತ ಸಂಬಂಧಿತ ಸಾವುಗಳನ್ನು ಸಾರ್ವಜನಿಕ ಆರೋಗ್ಯ ವಿಶೇಷಜ್ಞರು ಬಣ್ಣಿಸುವುದು ಹೀಗೆ.

2000ದಿಂದ 2019ರ ನಡುವೆ ಕನಿಷ್ಠ 12 ಲಕ್ಷ ಭಾರತೀಯರು ಹಾವು ಕಡಿತದಿಂದಾಗಿ ತಮ್ಮ ಜೀವಗಳನ್ನು ಕಳೆದುಕೊಂಡಿದ್ದಾರೆ, ಅಂದರೆ ವರ್ಷಕ್ಕೆ ಸರಾಸರಿ 58,000 ಸಾವುಗಳು. ವಿಶ್ವಾದ್ಯಂತ ಹಾವು ಕಡಿತದಿಂದ ಸಾವುಗಳ ಪೈಕಿ ಅರ್ಧಕ್ಕೂ ಹೆಚ್ಚು ಭಾರತದಲ್ಲಿ ಸಂಭವಿಸುತ್ತಿವೆ.

ಆದಾಗ್ಯೂ ಹಾವು ಕಡಿತವು ದೇಶದ ಅತ್ಯಂತ ನಿರ್ಲಕ್ಷಿತ ಉಷ್ಣವಲಯ ಕಾಯಿಲೆಗಳಲ್ಲಿ ಒಂದಾಗಿ ಉಳಿದುಕೊಂಡಿದೆ. ಭಾರತದ ಮಹಾ ನೋಂದಣಾಧಿಕಾರಿಗಳ ಕಚೇರಿಯು 10 ಲಕ್ಷ ಸಾವುಗಳ ಕುರಿತು ನಡೆಸಿದ ಅಧ್ಯಯನ ಮತ್ತು ಬಿಹಾರದಲ್ಲಿ ಸಾವುಗಳ ಕುರಿತ ಅಧ್ಯಯನ ಮಾತ್ರ ಈ ಬಗ್ಗೆ ಲಭ್ಯವಿರುವ ಪ್ರಾತಿನಿಧಿಕ ಮಾಹಿತಿಯಾಗಿದೆ.

ಕಳೆದ ವಾರ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯು ಭಾರತದ ಐದು ವಲಯಗಳ 13 ರಾಜ್ಯಗಳಲ್ಲಿಯ 8.4 ಕೋ.ಜನರ ನಡುವೆ ಹಾವು ಕಡಿತದ ಘಟನೆಗಳ ಕುರಿತು ಅಧ್ಯಯನ ವರದಿಯನ್ನು ಪ್ರಕಟಿಸಿದೆ. ಇದು ಇಂತಹ ಮೊದಲ ಅಧ್ಯಯನವಾಗಿದೆ.

 ಹಾವು ಕಡಿತಗಳನ್ನು ನಿರ್ಲಕ್ಷಿಸಿರುವುದು ಏಕೆ?

ವಿಶ್ವ ಆರೋಗ್ಯ ಸಂಸ್ಥೆಯು 2017ರಲ್ಲಷ್ಟೇ ಹಾವು ಕಡಿತಗಳನ್ನು ಅಥವಾ ಹಾವು ಕಡಿತದಿಂದ ವಿಷವೇರುವುದನ್ನು ಹೆಚ್ಚಿನ ಆದ್ಯತೆಯ ನಿರ್ಲಕ್ಷಿತ ಉಷ್ಣವಲಯ ಕಾಯಿಲೆ ಎಂದು ವರ್ಗೀಕರಿಸಿತ್ತು. ಆದರೆ ಹಾವು ಕಡಿತಗಳು ಕಾಲದಷ್ಟೇ ಹಳೆಯದಾಗಿವೆ.

ಭಾರತದಲ್ಲಿ ಪ್ರತೀ ಹತ್ತು ಹಾವು ಕಡಿತ ಘಟನೆಗಳ ಪೈಕಿ ಒಂಭತ್ತು ಹಳ್ಳಿಗಳಲ್ಲಿ ಸಂಭವಿಸುತ್ತವೆ ಎಂದು ಮಹಾರಾಷ್ಟ್ರದ ಸೇವಾಗ್ರಾಮದ ಮಹಾತ್ಮಾ ಗಾಂಧಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡಾ.ಎಸ್.ಪಿ. ಕಲಂತ್ರಿ ಬೆಟ್ಟು ಮಾಡಿದ್ದಾರೆ.

ಭಾರತದ ಬದುಕು ಹಳ್ಳಿಗಳಲ್ಲಿದೆ ಮತ್ತು ಹಾವುಗಳು ಇರುವುದು ಇಲ್ಲಿಯೇ. ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ಅನೇಕ ಜನರಿಗೆ ಹಾವು ಕಡಿತವು ವೃತ್ತಿಪರ ಅಪಾಯವಾಗಿದೆ. ಮಳೆಗಾಲದಲ್ಲಿ ತಮ್ಮ ಗದ್ದೆಗಳಿಗೆ ತೆರಳಿದಾಗ ಅವರು ಹಾವುಗಳ ದಾಳಿಗೆ ಸಿಲುಕುವುದು ಹೆಚ್ಚು. ಅವರು ವಾಸಿಸುವ ಸಣ್ಣ ಗುಡಿಸಲುಗಳಲ್ಲಿ ಹಾವುಗಳು ಸುಲಭವಾಗಿ ನುಗ್ಗುತ್ತವೆ. ಈ ಜನರು ವಾಸವಾಗಿರುವ ಸ್ಥಳಗಳಲ್ಲಿಯ ರಸ್ತೆಗಳಲ್ಲಿ ಬೆಳಕೂ, ವಿಶೇಷವಾಗಿ ಮಳೆಗಾಲದಲ್ಲಿ ಕಡಿಮೆಯಾಗಿರುತ್ತದೆ ಎಂದು ಕಲಂತ್ರಿ ಹೇಳಿದರು.

ಕೃಷಿಕರು, ಕಾರ್ಮಿಕರು, ಬೇಟೆಗಾರರು, ಆದಿವಾಸಿಗಳು ಮತ್ತು ವಲಸಿಗರು, ಉರಗ ರಕ್ಷಕರನ್ನು ಮತ್ತು ಆರೋಗ್ಯ ರಕ್ಷಣೆಯ ಸೀಮಿತ ಸೌಲಭ್ಯವನ್ನು ಹೊಂದಿರುವ ಯಾವುದೇ ಸಮುದಾಯವನ್ನು ಹಾವು ಕಡಿತದ ಹೆಚ್ಚಿನ ಅಪಾಯವಿರುವ ಗುಂಪನ್ನಾಗಿ ವರ್ಗೀಕರಿಸಲಾಗಿದೆ. ಆದರೆ ಮಾನವ-ಪರಿಸರ ಸಂಘರ್ಷವೂ ಇಂತಹ ಘಟನೆಗಳು ಹೆಚ್ಚುತ್ತಿರುವುದಕ್ಕೆ ಇನ್ನೊಂದು ಕಾರಣವಾಗಿದೆ.

ಈ ಎಲ್ಲ ವರ್ಷಗಳಲ್ಲಿ ಹಾವು ಕಡಿತದ ಘಟನೆಗಳು ಹೆಚ್ಚುವುದಕ್ಕೆ ಮಾನವ-ಪರಿಸರ ಸಂಘರ್ಷವು ಕಾರಣವಾಗಿದೆ. ಜನಸಂಖ್ಯೆಯು ಹೆಚ್ಚುತ್ತಿದ್ದಂತೆ ಸಾವಿರ ವರ್ಷಗಳಿಗೂ ಅಧಿಕ ಕಾಲದಿಂದ ಮಾನವರು ಹಾವುಗಳ ಸಾಂಪ್ರದಾಯಿಕ ವಾಸಸ್ಥಳಗಳನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ ಮತ್ತು ಹಾವು ಕಡಿತದ ಘಟನೆಗಳು ಹೆಚ್ಚುತ್ತಿವೆ. ಕ್ಷಿಪ್ರ ನಗರೀಕರಣ ಮತ್ತು ಕೈಗಾರಿಕೀಕರಣ ಭಾರತದಲ್ಲಿ ಇಂತಹ ಘಟನೆಗಳ ಹಿಂದಿನ ಕಾರಣವಾಗಿದೆ ಎಂದು ಜಾರ್ಜ್ ಇನ್‌ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್‌ನ ಡಾ.ಸೌಮ್ಯದೀಪ ಭೌಮಿಕ್ ಹೇಳಿದರು.

ನಿರ್ಲಕ್ಷಕ್ಕೆ ಏಕೆ ಕಾರಣ?

ಹಾವು ಕಡಿತಕ್ಕೆ ಬಲಿಪಶುಗಳಾಗುವ ಹೆಚ್ಚಿನ ಜನರು ಬಡವರಾಗಿರುತ್ತಾರೆ ಮತ್ತು ರಾಜಕೀಯವಾಗಿ ಧ್ವನಿಯಿಲ್ಲದ ಸಮುದಾಯಗಳಿಗೆ ಸೇರಿದವರಾಗಿರುತ್ತಾರೆ. ಇದು ನೀತಿ ಬದಲಾವಣೆಯ ಮೇಲೆ ಪ್ರಭಾವ ಬೀರುವುದು ಬಿಡಿ, ಸಕಾಲಕ್ಕೆ ಆಸ್ಪತ್ರೆಗೆ ತಲುಪುವುದೂ ಅವರಿಗೆ ಕಷ್ಟವಾಗಿಸುತ್ತದೆ ಎಂದು ಹೇಳಿದ ಡಾ.ಭೌಮಿಕ್, ಉದಾಹರಣೆಗೆ ಹಾವು ಕಡಿತಕ್ಕೊಳಗಾದವರಿಗೆ ಚಿಕಿತ್ಸೆ ನೀಡಲು ಪ್ರತಿವಿಷವನ್ನು ತಯಾರಿಸುವ ಪ್ರಕ್ರಿಯೆಯು ವರ್ಷಗಳಿಂದಲೂ ಬದಲಾಗಿಲ್ಲ ಎಂದು ಬೆಟ್ಟು ಮಾಡಿದರು.

ಪ್ರತಿವಿಷವನ್ನು ತಯಾರಿಸಲು ಹಾವಿನಿಂದ ವಿಷವನ್ನು ಪಡೆದುಕೊಂಡು ಕುದುರೆಗೆ ಚುಚ್ಚಲಾಗುತ್ತದೆ. ಕಳೆದ ನೂರು ವರ್ಷಗಳಲ್ಲಿ ಇದು ಬದಲಾಗಿಲ್ಲ. ಏಕೆಂದರೆ ಇದು ಯಾವುದೇ ರಾಜಕೀಯ ಪ್ರಭಾವ ಹೊಂದಿರದ ಜನರ ಸಮಸ್ಯೆಯಾಗಿದೆ. ಔಷಧಿ ಕಂಪೆನಿಗಳಿಗೆ ದೊಡ್ಡ ಮೊತ್ತವನ್ನು ಪಾವತಿಸಲು ಅವರಿಗೆ ಸಾಧ್ಯವಿಲ್ಲ, ಹೀಗಾಗಿ ಇದು ನಿರ್ಲಕ್ಷಿತ ಸಮಸ್ಯೆಯಾಗಿಯೇ ಉಳಿದುಕೊಂಡಿದೆ ಎಂದು ಡಾ.ಭೌಮಿಕ್ ವಿವರಿಸಿದರು.

ಇದನ್ನು ಅನುಮೋದಿಸಿದ ಡಾ.ಕಲಂತ್ರಿ, ಹಾವು ಕಡಿತದ ಬಗ್ಗೆ ಈಗ ಅಧ್ಯಯನ ಮಾಡಲು ಐಸಿಎಂಆರ್ ಯೋಜಿಸುತ್ತಿದೆಯಾದರೂ ಸರಕಾರಿ ಏಜೆನ್ಸಿಗಳು ಮತ್ತು ಔಷಧಿ ಉದ್ಯಮವು ಸಂಶೋಧನೆಗಳನ್ನು ಪ್ರಾಯೋಜಿಸಲು ಯಾವುದೇ ಆಸಕ್ತಿಯನ್ನು ಹೊಂದಿಲ್ಲ, ಏಕೆಂದರೆ ವಾಸ್ತವದಲ್ಲಿ ಇದು ಕಡಿಮೆ ಲಾಭವನ್ನು ತರುತ್ತದೆ ಎಂದು ಹೇಳಿದ್ದಾರೆ.

ಸಮಸ್ಯೆ ಬಗೆಹರಿಸಲು ಏನು ಮಾಡಬೇಕು?

ಭಾರತದಲ್ಲಿ ಹಾವು ಕಡಿತಗಳ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಿರುವ ವಿಜ್ಞಾನಿಗಳು ಮತ್ತು ಸಾರ್ವಜನಿಕ ಆರೋಗ್ಯ ತಜ್ಞರು ಉತ್ತಮ ರೋಗನಿರ್ಣಯಕ್ಕಾಗಿ ಉತ್ತಮ ಸಂಶೋಧನೆಗೆ ಒತ್ತಾಯಿಸುತ್ತಿದ್ದಾರೆ.

ಕ್ಯಾನ್ಸರ್, ಹೃದಯಾಘಾತಕ್ಕೆ ಇರುವಂತೆ ಹಾವು ಕಡಿತಕ್ಕೆ ರೋಗನಿರ್ಣಯ ವಿಧಾನವಿಲ್ಲ. ರೋಗನಿರ್ಣಯ ವಿಧಾನದಲ್ಲಿ ಹಾವು ಕಡಿತವು ವಿಷಪೂರಿತವಾಗಿದೆಯೇ ಇಲ್ಲವೇ ಎನ್ನುವುದನ್ನು ಮತ್ತು ಹಾವು ಕಡಿತವು ವಿಷಪೂರಿತವಾಗಿದ್ದರೆ ಅದು ಯಾವ ರೀತಿಯದು ಎನ್ನುವುದನ್ನು ನಿರ್ಧರಿಸಲು ಸಂಶೋಧನೆಯು ನೆರವಾಗಬಲ್ಲದು. ಇದನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಮಟ್ಟದಲ್ಲಿ ಸಾಧ್ಯವಾಗಿಸಬಹುದು. ತ್ವರಿತ ರೋಗನಿರ್ಣಯವು ಜೀವಗಳನ್ನು ಉಳಿಸಬಲ್ಲದು ಎಂದು ಡಾ.ಕಲಂತ್ರಿ ಹೇಳಿದ್ದಾರೆ.

ಕೈಗೆಟಕುವ ಚಿಕಿತ್ಸೆ

ಕೈಗಟಕುವ ದರಗಳಲ್ಲಿ ಚಿಕಿತ್ಸೆಯ ತೀವ್ರ ಅಗತ್ಯವನ್ನು ಒತ್ತಿ ಹೇಳಿದ ಡಾ.ಕಲಂತ್ರಿ, ಪ್ರತಿವಿಷದ ಮೂರು ಕಿರುಸೀಸೆಗಳಿಗೆ 6,000 ರೂ.ಯಿಂದ 7,000 ರೂ.ವರೆಗೆ ತೆರಬೇಕಾಗುತ್ತದೆ ಮತ್ತು ಹಾವು ಕಡಿತ ರೋಗಿಗೆ ಇಂತಹ ಕನಿಷ್ಠ 10 ಕಿರುಸೀಸೆಗಳು ಅಗತ್ಯವಾಗುತ್ತವೆ. ಅಲ್ಲದೆ ಹೆಚ್ಚಿನ ಪ್ರಕರಣಗಳಲ್ಲಿ ರೋಗಿಗೆ ತೃತೀಯ ಹಂತದ ಚಿಕಿತ್ಸೆಯ ಅಗತ್ಯವಿರುತ್ತದೆ ಮತ್ತು ಅದರ ವೆಚ್ಚವನ್ನು ಭರಿಸಲು ಅವರಿಗೆ ಸಾಧ್ಯವಾಗುವುದಿಲ್ಲ ಎನ್ನುತ್ತಾರೆ.

ಹೆಚ್ಚಿನ ಪ್ರಕರಣಗಳಲ್ಲಿ ಜನರು ವೆಚ್ಚಗಳಿಗೆ ಹೆದರಿ ಆಸ್ಪತ್ರೆಗಳಿಗೆ ಹೋಗುವುದಿಲ್ಲ ಮತ್ತು ಹಾವು ಕಡಿತದ ಗಾಯಗಳಿಂದಾಗಿ ಜೀವವನ್ನು ಕಳೆದುಕೊಳ್ಳುತ್ತಾರೆ ಎಂದೂ ಡಾ.ಕಲಂತ್ರಿ ಹೇಳಿದ್ದಾರೆ.

 ಕೃಪೆ: thequint.com

Writer - ಮೈತ್ರೇಯಿ ರಮೇಶ್

contributor

Editor - ಮೈತ್ರೇಯಿ ರಮೇಶ್

contributor

Similar News