ಮಂಡ್ಯ; ಕಾರು ಅಡ್ಡಗಟ್ಟಿ ದರೋಡೆಗೆ ಯತ್ನಿಸಿದ ಆರೋಪ: ಗ್ರಾಮಸ್ಥರಿಂದ ಹಲ್ಲೆ

Update: 2022-09-15 13:56 GMT

ಮಂಡ್ಯ, ಸೆ.15: ಚಿನ್ನದ ವ್ಯಾಪಾರಿಗಳ ಕಾರನ್ನು ಅಡ್ಡಗಟ್ಟಿ ದರೋಡೆ ಮಾಡಲು ಯತ್ನಿಸಿದ ಇಬ್ಬರನ್ನು ಗ್ರಾಮಸ್ಥರು ಮರಕ್ಕೆ ಕಟ್ಟಿಹಾಕಿ ಥಳಿಸಿದ ಘಟನೆ ಪಾಂಡವಪುರ ತಾಲೂಕು ಬನ್ನಘಟ್ಟ ಗ್ರಾಮದ ಬಳಿ ಗುರುವಾರ ಬೆಳಗ್ಗೆ ನಡೆದಿದ್ದು, ಈ ಕುರಿತ ವಿಡೀಯೋ ವೈರಲ್ ಆಗಿದೆ.

ಬೆಳಗಾವಿಯಿಂದ ಮೈಸೂರಿಗೆ ತೆರಳುತ್ತಿದ್ದ ಚಿನ್ನದ ವ್ಯಾಪಾರಿಗಳೆನ್ನಲಾದ ಬಾಲಾಜಿ ಹಾಗೂ ಶಿರಾಜ್ ಎಂಬುವರ ಕಾರನ್ನು ಮತ್ತೊಂದು ಕಾರಿನಲ್ಲಿ ಬಂದ ನಾಲ್ವರು, ಬನ್ನಘಟ್ಟ ಬಳಿ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಯತ್ನಿಸಿದಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಚಿನ್ನದ ವ್ಯಾಪಾರಿಗಳ ಕಿರುಚಾಟ ಕೇಳಿ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಮಾರಕಾಸ್ತ್ರ, ರಿವಾಲ್ವರ್ ಹೊಂದಿದ್ದ ಆಗುಂತಕರ ಕಡೆಗೆ ಕಲ್ಲುತೂರಿದ್ದಾರೆ. ಪರಾರಿಯಾಗುತ್ತಿದ್ದವರಲ್ಲಿ ಇಬ್ಬರನ್ನು ಹಿಡಿದ ಗ್ರಾಮಸ್ಥರು ಅವರಿಂದ ಮಾರಕಾಸ್ತ್ರ, ರಿವಾಲ್ವರ್ ಕಸಿದುಕೊಂಡು ಮರಕ್ಕೆ ಕಟ್ಟಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಸ್ಯಾಂಡಲ್ ವುಡ್ ನಟಿಯ ತಾಯಿ ವಿರುದ್ಧ FIR, ಬಂಧನಕ್ಕೆ ಶೋಧ

ಇಬ್ಬರನ್ನೂ ವಶಕ್ಕೆ ಪಡೆದುಕೊಂಡಿರುವ ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವವರ ಪತ್ತೆಗೆ ಕ್ರಮವಹಿಸಿದ್ದಾರೆ. ಘಟನೆಯಲ್ಲಿ ಚಿನ್ನದ ವ್ಯಾಪಾರಿಗಳೂ ಗಾಯಗೊಂಡಿದ್ದು, ಅವರ ಕಾರು ಜಖಂಗೊಂಡಿದೆ ಎಂದು ತಿಳಿದು ಬಂದಿದೆ.

ಕಳೆದ ವರ್ಷ ಮಂಡ್ಯ ತಾಲೂಕು ಗಂಟಗೌಡನಹಳ್ಳಿ ಬಳಿ ಇದೇ ರೀತಿ ಚಿನ್ನದ ವ್ಯಾಪರಿಗಳನ್ನು ತಡೆದು ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರು ಮಂದಿ ಆರೋಪಿಗಳನ್ನು ಪ್ರಕರಣ ನಡೆದ ನಾಲ್ಕು ದಿನದಲ್ಲಿ ಪೊಲೀಸರು ಬಂಧಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News