‘ಕಾಕನಕೋಟೆ ಸಫಾರಿ ಕೇಂದ್ರ'ವನ್ನು ಪ್ರವಾಸಿ ತಾಣ ಎಂದು ಘೋಷಿಸಲು ಕ್ರಮ: ಸಚಿವ ಆರ್.ಅಶೋಕ್
Update: 2022-09-15 17:37 GMT
ಬೆಂಗಳೂರು, ಸೆ. 15: ‘ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕು ದಮ್ಮನಕಟ್ಟೆಯಲ್ಲಿರುವ ಕಾಕನಕೋಟೆ ಸಫಾರಿ ಕೇಂದ್ರವನ್ನು ಪ್ರವಾಸಿ ತಾಣ ಎಂದು ಘೋಷಿಸಲು ಕ್ರಮ ಕೈಗೊಳ್ಳಲಾಗುವುದು' ಎಂದು ಮುಖ್ಯಮಂತ್ರಿಗಳ ಪರವಾಗಿ ಕಂದಾಯ ಸಚಿವ ಆರ್.ಅಶೋಕ್ ಅವರು ಇಂದಿಲ್ಲಿ ಭರವಸೆ ನೀಡಿದ್ದಾರೆ.
ಗುರುವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಅನಿಲ್ ಚಿಕ್ಕಮಾದು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ‘ಪ್ರವಾಸಿ ತಾಣವನ್ನು ನಿರ್ಮಾಣ ಮಾಡುವ ವಿಷಯವು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಅಧೀನ ಸಂಸ್ಥೆಯಾದ ಜಂಗಲ್ ಲಾಡ್ಜ್ ಮತ್ತು ರೆಸಾಟ್ರ್ಸ್ಗೆ ಸಂಬಂಧಿಸಿದೆ. ಪ್ರವಾಸೋದ್ಯಮ ಇಲಾಖೆಯು ಸದರಿ ಪ್ರದೇಶದಲ್ಲಿ ಸೂಕ್ತ ಸ್ಥಳಗಳನ್ನು ಗುರುತಿಸಿ, ಪ್ರಸ್ತಾವನೆ ಸಲ್ಲಿಸಿದರೆ ಕೇರಳ ಪ್ರವಾಸೋದ್ಯಮ ಮಾದರಿಯಲ್ಲಿ ವಾಟರ್ ಸಫಾರಿ ಕೇಂದ್ರ, ದೋಣಿ ವಿಹಾರ ಕೇಂದ್ರ ಪ್ರಾರಂಭಿಸಲು ಪರಿಶೀಲಿಸಲಾಗುವುದು' ಎಂದು ಹೇಳಿದರು.