ಚಿಕ್ಕಮಗಳೂರು: ವಿವಾಹ ನೋಂದಣಿಗೆ ಅರ್ಜಿ ಸಲ್ಲಿಸಿದ ಅಂತರ್ಧಮೀಯ ಜೋಡಿ
ಚಿಕ್ಕಮಗಳೂರು, ಸೆ.16: ನಗರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ತಾಲೂಕಿನ ಲಕ್ಷ್ಮೀಪುರ ಗ್ರಾಮದ ನಿವಾಸಿಗಳಾದ ಚೈತ್ರಾ ಹಾಗೂ ಜಾಫರ್ ವಿವಾಹಕ್ಕೆ ಅರ್ಜಿ ಸಲ್ಲಿಸಿದ್ದು, ಅರ್ಜಿ ಸಲ್ಲಿಕೆ ಬಳಿಕ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡ ಸಮ್ಮುಖದಲ್ಲಿ ಪರಸ್ಪರ ಹಾರ ಬದಲಾಯಿಸಿಕೊಂಡರು.
ವಿವಾಹಕ್ಕೆ ಅರ್ಜಿ ಸಲ್ಲಿಸಿಪರಸ್ಪರ ಪ್ರೀತಿಸುತ್ತಿದ್ದು, ಇವರ ಪ್ರೀತಿಗೆ ಇಬ್ಬರ ಪೋಷಕರಿಂದ ಸಮ್ಮತಿ ಇದ್ದ ಹಿನ್ನೆಲೆಯಲ್ಲಿ ಕಳೆದ ಬುಧವಾರ ನಗರದ ಸಬ್ ರಿಜಿಸ್ಟ್ರಾರ್ ಕಚೇರಿಗೆ ವಕೀಲರೊಂದಿಗೆ ಆಗಮಿಸಿ ರಿಜಿಸ್ಟ್ರಾರ್ ವಿವಾಹ ಆಗಲು ಮುಂದಾಗಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಬಜರಂಗದಳ ಕಾರ್ಯಕರ್ತರು ಲವ್ ಜಿಹಾದ್ ಆರೋಪ ಹೊರಿಸಿ ಜೋಡಿಗಳ ಮೇಲೆ ಹಲ್ಲೆ ಮಾಡಿದ್ದರು. ಈ ವೇಳೆ ಪರಸ್ಪರ ಸಮ್ಮತಿಯಿಂದ ವಿವಾಹ ಆಗುತ್ತಿರುವುದಾಗಿ ಹೇಳಿಕೆ ನೀಡಿದ್ದ ಜೋಡಿಗಳು ಹಲ್ಲೆ ಮಾಡಿದ್ದ ಆರೋಪಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.
ಶುಕ್ರವಾರ ಮಧ್ಯಾಹ್ಮ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರೊಂದಿಗೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ಆಗಮಿಸಿದ್ದ ಜೋಡಿಗಳು ರಿಜಿಸ್ಟ್ರಾರ್ ವಿವಾಹಕ್ಕೆ ಅರ್ಜಿ ಸಲ್ಲಿಸಿದರು. ಬಳಿಕ ಸಂಘಟನೆಗಳ ಮುಖಂಡರ ಸಮ್ಮುಖದಲ್ಲಿ ಪರಸ್ಪರ ಹಾರ ಬದಲಾಯಿಸಿಕೊಳ್ಳುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.