ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 5 ಸಾವಿರ ಕೋಟಿ ರೂ.: ಸಿಎಂ ಬೊಮ್ಮಾಯಿ ಘೋಷಣೆ

Update: 2022-09-17 10:47 GMT

ಕಲಬುರಗಿ, ಸೆಪ್ಟೆಂಬರ್ 17 - ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮುಂದಿನ ವರ್ಷದಿಂದ 5000 ಕೋಟಿ ರೂ.ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. 

ಕಲಬುರ್ಗಿ ಎನ್ ವಿ ಮೈದಾನ ಸಾರ್ವಜನಿಕ ಸಮಾವೇಶದಲ್ಲಿ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಕಾರ್ಯಕ್ರಮ ಹಾಗೂ  ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮದಲ್ಲಿ ಅವರು ಇಂದು ಮಾತನಾಡುತ್ತಿದ್ದರು. 

ಈ ಭಾಗದ ಐತಿಹಾಸಿಕ ಘಟನೆಗಳಿಗೆ  ಸಾಕ್ಷಿಯಾಗಿದೆ. ಕಲ್ಯಾಣ ಕರ್ನಾಟಕವನ್ನು ಮುಖ್ಯ ವಾಹಿನಿಗೆ ಸೇರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಇದರ ಅಭಿವೃದ್ಧಿಗೆ ನಾವು ಸಂಕಲ್ಪ ಮಾಡಿದ್ದೇವೆ. ಹಲವಾರು ಜನರು ಭರವಸೆ ಕೊಟ್ಟು ಹೋಗಿದ್ದಾರೆ. ಆದರೆ ನಾವು ನಿರಂತರವಾಗಿ ಕೆಲಸ ಮಾಡುವ ಮೂಲಕ ಈ ಭಾಗದ ಸಂಪೂರ್ಣ ಅಭಿವೃದ್ದಿ ಮಾಡಲಾಗುವುದು ಎಂದರು. 

ಜನಸಮಸ್ಯೆಗಳೊಂದಿಗೆ ಜೀವನ ಮಾಡುತ್ತಾರೆ. ಸಮಸ್ಯೆಯ ಬಗ್ಗೆ ಚರ್ಚೆ ಮಾಡುವುದಕ್ಕೂ, ಅದರೊಂದಿಗೆ ವಾಸ ಮಾಡುವುದಕ್ಕೂ ವ್ಯತ್ಯಾಸವಿದೆ. ಸಮಸ್ಯೆಗಳ ಪರಿಹಾರ ಜನರ ನಡುವೆಯೇ ಇದೆ.   ಜನರ ಮಧ್ಯ್ರ್ ಓಡಾಡಿ, ಸಮಸ್ಯೆ ಗೆ ಪರಿಹಾರ ಕಂಡುಕೊಂಡು ಅದರ ಅನುಷ್ಠಾನ ಮಾಡಬೇಕು. ಅದೇ ನಿಜವಾದ ಜನಪರ ಸರ್ಕಾರ ಎಂದರು. 

ಬದಲಾವಣೆಯ ಕಾಲ: ಇದೀಗ ಬದಲಾವಣೆಯ ಕಾಲ ಬಂದಿದೆ. ಜನಜಾಗೃತರಾಗಿದ್ದಾರೆ. ಈ ಭಾಗದಲ್ಲಿ ಎಲ್ಲಾ ವರ್ಗದ ಜನ ವಾಸಿಸುತ್ತಾರೆ. ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಅವರೆಲ್ಲರಿಗೂ ಮನೆ, ಗ್ರಾಮಗಳಿಗೆ  ರಸ್ತೆ ಸಂಪರ್ಕ, ಶಾಲೆಗಳು, ಆಸ್ಪತ್ರೆ ಗಳನ್ನು ಒಡಗಿಸಿದಾಗ ಆರೋಗ್ಯ ಕರ, ವಿಶ್ವಾಸಯುತ ಜೀವನ ನಡೆಸಲು ಸಾಧ್ಯ. ನಮ್ಮ ಸರ್ಕಾರ ಈ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸಂಕಲ್ಪ ಮಾಡಿದೆ. ಕಳೆದ ಸೆಪ್ಟೆಂಬರ್ 17 ರಂದು 3000 ಕೋಟಿ ರೂ.ಗಳನ್ನು ನೀಡುವುದಾಗಿ ಭರವಸೆ ನೀಡಿದಂತೆ ಈ ಬಾರಿಯ ಬಜೆಟ್ ನಲ್ಲಿ ಅನುದಾನ ಒದಗಿಸಲಾಗಿದೆ.  ಅನುಮೋದನೆ ನೀಡಿ ಕಾಮಗಾರಿಗಳಿಗೆ ಚಾಲನೆ ನೀಡಲು ಇಲ್ಲಿಗೆ ಬಂದಿರುವುದಾಗಿ ತಿಳಿಸಿದರು. ಇದು ಜನಪರ ಸರ್ಕಾರ ಎಂದು ತಿಳಿಸಿದರು. 

'ಪ್ರತಿ ಮನೆಯಲ್ಲಿಯೂ ಕಲ್ಯಾಣವಾಗಬೇಕು': ಕಲ್ಯಾಣ ಕರ್ನಾಟಕದ ಉದ್ದಗಲಕ್ಕೂ 2100 ಶಾಲಾ ಕೊಠಡಿಗಳಿಗೆ ಚಾಲನೆ ನೀಡುತ್ತಿದ್ದೇವೆ. ಕರ್ನಾಟಕ ಉದಾಯವಾದ ಮೇಲೆ ಇಷ್ಟು ಶಾಲಾ ಕೊಠಡಿಗಳು ನಿರ್ಮಾಣ ವಾಗಿರಲಿಲ್ಲ. ರಾಜ್ಯದಲ್ಲಿ ಒಟ್ಟು 8000 ಕೊಠಡಿ ಕಟ್ಟಲಾಗುತ್ತಿದೆ. ಮುಂದಿನ ಆಗಸ್ಟ್ 15 ರೊಳಗೆ ಶೇ 100 ರಷ್ಟು ಪ್ರಾಥಮಿಕ ಮತ್ತು ಪ್ರೌಢ ಶಾಲೆ ಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಆದೇಶಿಸಲಾಗಿದೆ. 2500 ಅಂಗನವಾಡಿಗಳಿಗೆ ಮಂಜೂರಾತಿ ನೀಡಿ, ಚಾಲನೆ ನೀಡಲಾಗಿದೆ.  ಪೌಷ್ಟಿಕ ಆಹಾರ ಹಾಗೂ ಶಿಕ್ಷಣದ ಸಶಕ್ತೀಕರಣವನ್ನು  ಮಾಡಲಾಗುತ್ತಿದೆ. 

ಸರ್ಕಾರಿ ಕಲ್ಯಾಣ ಕರ್ನಾಟಕದ ಅಭಿವೃದ್ದಿ ಮಾಡುವ ಮೂಲಕ ಈ ಭಾಗದ ಪ್ರತಿ ಮನೆಯಲ್ಲಿಯೂ ಕಲ್ಯಾಣವಾಗಬೇಕು. ರಾಜ್ಯದ ಬೇರೆ ಭಾಗಗಳು  ಅಭಿವೃದ್ದಿ ಆಗುತ್ತಿರುವಂತೆಯೇ   ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಾಡಲಾಗುವುದು. ನವ ಕರ್ನಾಟಕದ ಮೂಲಕ ನವ ಭಾರತ ನಿರ್ಮಾಣ ಮಾಡುವುದು ನಮ್ಮ ಘೋಷವಾಕ್ಯ ಹಾಗೂ ಗುರಿ. ಈ ಭಾಗದ ಅಭಿವೃದ್ದಿಯೊಂದಿಗೆ ಜನರನ್ನು ಪಾಲುದಾರರನ್ನಾಗಿ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು. 

ಕಲ್ಯಾಣ ಕರ್ನಾಟಕದಲ್ಲಿ ವಿಶೇಷ ಅನುದಾನ ನೀಡಿ 1000  ಗ್ರಾಮಗಳ ಸ್ತ್ರೀ ಶಕ್ತಿ ಸಂಘಕ್ಕೆ 1.50 ಲಕ್ಷ ಅನುದಾನ ನೀಡಿ ಸ್ವಯಂ ಉದ್ಯೋಗ ನೀಡಲು  ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ಪ್ರಥಮ ಬಾರಿಗೆ  ಮಹಿಳೆಯರಿಗಾಗಿ  ಜಾರಿಗೊಳಿಸಲಾಗುತ್ತಿದೆ.  ಸ್ವಾಮಿ ವಿವೇಕಾನಂದ ಯುವ ಸಂಘಗಳ ಮೂಲಕ ಪ್ರತಿ ಗ್ರಾಮದಲ್ಲಿ ಯುವಕರ ಸಂಘಟನೆ ಮಾಡಲಾಗುವುದು. 

ನೀರಾವರಿ ಯೋಜನೆಯಡಿ ನಾರಾಯಣಪುರ ಬಲದಂಡೆ ಯೋಜನೆ ಅಡಿಯಲ್ಲಿ ಹಿಂದೆ  ಜಲ ಸಂಪನ್ಮೂಲ ಸಚಿವನಾಗಿದ್ದಾಗ 3000 ಕೋಟಿ ಒಡಗಿಸಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿಗಳು, ಈಗ ಅದನ್ನು ಅನುಷ್ಠಾನಗೊಳಿಸುವ ಕೆಲಸ ಮಾಡುತ್ತಿದ್ದೇವೆ ಎಂದರು. 

5000 ಶಿಕ್ಷಕರ ನೇಮಕಾತಿ ಯನ್ನು ಮುಂದಿನ ಮಾರ್ಚ್ ಒಳಗೆ ಮಾಡಲಾಗುವುದು. 11000 ಶಿಕ್ಷಕರ  ನೇಮಕ ಮಾಡುವ ಬದ್ಧತೆ ನಮ್ಮದು. ವ್ಯವಸ್ಥೆಯಲ್ಲಿ  ನಂಬಿಕೆ ಪುನರ್ ಸ್ಥಾಪನೆಗೆ ಬದ್ಧತೆಯಿಂದ ಕೆಲಸ ಮಾಡಲಾಗುವುದು. 

ಬೀದರ್ ಜಿಲ್ಲೆಗೆ ನೀರು ಕೊಡುವ ಕಾಗಿಣಾ ಯೋಜನೆ,  ಕಲ್ಯಾಣ ಕರ್ನಾಟಕದಲ್ಲಿ  ಏತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲಾಗುವುದು.

ಕ್ರಾಂತಿಪುರುಷ ಬಸವಣ್ಣನವರ ಹೋರಾಟದ ನಾಡು ಇದು. ನಮ್ಮ ನಾಯಕರಾದ ಯಡಿಯೂರಪ್ಪ ಅವರು ಅನುಭವ ಮಂಟಪ ಸ್ಥಾಪನೆಗೆ ಚಾಲನೆ ನೀಡಿದ್ದಾರೆ.  ಜಗತ್ತಿನ ಮೊದಲ ಪಾರ್ಲಿಮೆಂಟು ಅನುಭವ ಮಂಟಪವನ್ನು ಸ್ಥಾಪಿಸಿ ಜಗತ್ತಿಗೆ ಶರಣರು ಸಾರಿದ ಸಂದೇಶವನ್ನು ಸಾರುವ ಕೆಲಸವನ್ನು ಮಾಡಲಾಗುವುದು ಎಂದರು. 

ರಾಯಚೂರಿಗೆ ಒಂದು ಉನ್ನತ ಮಟ್ಟದ ಮೈದ್ಯಕೀಯ ಸಂಸ್ಥೆ: ಕಲಬುರ್ಗಿಯಲ್ಲಿ ಟೆಕ್ಸ್‌ಟೈಲ್ ಪಾರ್ಕ್ ರಾಯಚೂರಿನ ಜನರು ಏಮ್ಸ್ ಬಗ್ಗೆ ಕನಸು ಕಂಡಿದ್ದಾರೆ. ರಾಯಚೂರಿಗೆ ಒಂದು ಉನ್ನತ ಮಟ್ಟದ ಮೈದ್ಯಕೀಯ ಸಂಸ್ಥೆ ಸ್ಥಾಪಿಸಲಾಗುವುದು. ಕಲಬುರ್ಗಿಯಲ್ಲಿ ಸ್ಥಾಪಿಸುವ ಜಯದೇವ ಆಸ್ಪತ್ರೆಯನ್ನು  ಪ್ರಧಾನಿಯವರಿಂದ ಉದ್ಘಾಟನೆ ಮಾಡಿಸಲಾಗುವುದು ಎಂದು ತಿಳಿಸಿದರು. 

ಗುಳೇ ಹೋಗುವುದನ್ನು ತಪ್ಪಿಸಲಾಗುವುದು: ಈ ಭಾಗದಲ್ಲಿ ಗುಳೆ ಹೋಗುವುದು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಾನು ಗುಳೆ ಹೋಗುವುದನ್ನು ತಡೆಯಲಾಗುವುದು. ಸ್ಥಳೀಯವಾಗಿ ಉದ್ಯೋಗ ದೊರಕಿಸಲು ಕೈಗಾರಿಕೆಗಳನ್ನು ಸ್ಥಾಪಿಸಲಾಗುವ  ಕೆಲಸ  ಮಾಡಲಾಗುವುದು ಎಂದರು. ಕೂಲಿ ಕಾರ್ಮಿಕರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ವಿಸ್ತರಿಸಿದ್ದೇವೆ. ಜನರ ಕೈಗೆ ಉದ್ಯೋಗ ದೊರೆತಲ್ಲಿ ಗುಳೇ  ಹೋಗುವುದನ್ನು ತಡೆಯಬಹುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News