ದಾವಣಗೆರೆ: ಸಾಲುಮರದ ವೀರಾಚಾರ್ ಆತ್ಮಹತ್ಯೆ

Update: 2022-09-20 05:48 GMT

ದಾವಣಗೆರೆ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ, ಸಾಲುಮರದ ವೀರಾಚಾರ್ (70) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ದಾವಣಗೆರೆ ಮತ್ತು ಹರಿಹರ ತಾಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಲುಮರ ನೆಟ್ಟು ಪೋಷಿಸುತ್ತಿದ್ದ ಅವರ ಪರಿಸರ ಕಾಳಜಿಗೆ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.

ಮಿಟ್ಲಕಟ್ಟೆ ನ್ಯಾಯಬೆಲೆ ಅಂಗಡಿ ವಿಚಾರವಾಗಿ ಗ್ರಾಮಸ್ಥರೊಂದಿಗೆ ಹಲವಾರು ಬಾರಿ ಹೋರಾಟ ನಡೆಸಿದ್ದರು. ನ್ಯಾಯಬೆಲೆ ಅಂಗಡಿಯನ್ನು ಬೇರೆಯವರಿಗೆ ವಹಿಸಬೇಕು ಎಂದು ಅವರ ಒತ್ತಾಯವಾಗಿತ್ತು. ಆದರೆ, ಈಡೇರಲಿಲ್ಲ ಎಂಬ ಕಾರಣಕ್ಕೆ ಮನನೊಂದು ಸೋಮವಾರ ತಡರಾತ್ರಿ ಗ್ರಾಮದ ಮಧ್ಯದಲ್ಲಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸಾಲುಮರದ ವೀರಾಚಾರ್ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೇಡಿಕೆಗೆ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತಹಶೀಲ್ದಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ನ್ಯಾಯ ಒದಗಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗು ಅಪಾರ ಬಂಧು ಬಳಗ ಅಗಲಿದ್ದಾರೆ.

ದಾವಣಗೆರೆಯ ಮಿಟ್ಲುಗಟ್ಟೆ ಸಾಲುಮರದ ವೀರಾಚಾರಿ ಎಂದೇ ಪ್ರಖ್ಯಾತವಾಗಿರುವ ಇವರು 3000ಕ್ಕೂ ಹೆಚ್ಚು ಮರಗಳನ್ನು ಬೆಳೆಸಿ ರಾಜ್ಯೋತ್ಸವ ಪ್ರಶಸ್ತಿ ಇನ್ನು ಹಲವಾರು ನೂರಾರು ಪ್ರಶಸ್ತಿಗಳನ್ನು ಪಡೆದು ನಾಡಿಗೆ ಅನನ್ಯ ಸೇವೆಯನ್ನು ಸಲ್ಲಿಸಿರುತ್ತಾರೆ.

ಇವರು ಮಿಟ್ಲಗಟ್ಟೆ ಊರಿನ ಒಂದು ನ್ಯಾಯಬೆಲೆ ಅಂಗಡಿಯಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿದ್ದರು. "ನ್ಯಾಯಾಲಯದಲ್ಲಿ ನ್ಯಾಯ ಸಿಗದಿದ್ದರೆ, ಜನರಲ್ಲಿ ನ್ಯಾಯ ಸಿಗದಿದ್ದರೆ ದೇವರಲ್ಲಿ ನ್ಯಾಯ ಸಿಗದಿದ್ದರೆ ನೇಣಿಗೆ ಶರಣು" ಎಂಬ ವಾಗ್ದಾನ ಮಾಡಿದ್ದರು. ವಾಗ್ದಾನದಂತೆ ನಿನ್ನೆ ರಾತ್ರಿ 2 ಗಂಟೆಗೆ ನೇಣಿಗೆ ಶರಣಾಗಲಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News