ನಾಳೆ (ಸೆ.22) ಸದನದಲ್ಲಿ ಸಚಿವರೊಬ್ಬರ ಅಕ್ರಮ ಬಯಲು ಮಾಡುವೆ: ಎಚ್.ಡಿ ಕುಮಾರಸ್ವಾಮಿ
ಕಲಬುರಗಿ: ರಾಜ್ಯ ಸರಕಾರದ ಸಚಿವರೊಬ್ಬರ ಅಕ್ರಮವನ್ನು ನಾಳೆ ಸದನದಲ್ಲಿ ದಾಖಲೆ ಸಹಿತ ಬಿಡುಗಡೆ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಇಂದು (ಬುಧವಾರ) ಚಿಂಚೋಳಿಯಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಪಾದಯಾತ್ರೆ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, 'ನನ್ನನ್ನು ಏಕವಚನದಲ್ಲಿ ಮಾತನಾಡಿದ ಆ ಸಚಿವರಿಗೆ ಸ್ಯಾಂಪಲ್ ನಾಳೆ ದಾಖಲೆ ಬಿಡುಗಡೆ ಮಾಡುವೆ. ಇನ್ನೂ ಹಲವು ದಾಖಲೆಗಳು ಇವೆ. ನಾನು ಗಾಳಿಯಲ್ಲಿ ಗುಂಡು ಹೊಡೆಯಲ್ಲ' ಎಂದಿದ್ದಾರೆ.
'ರಾಜ್ಯ ಸರ್ಕಾರದ ಭ್ರಷ್ಟಚಾರದ ಬಗ್ಗೆ ಜನರೇ ಮಾತನಾಡುತ್ತಿದ್ದಾರೆ. ಪ್ರತಿಯೊಬ್ಬ ಮಂತ್ರಿಗಳೂ ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂಬುದನ್ನ ಜನರೇ ಹೇಳುತ್ತಿದ್ದಾರೆ' ಎಂದು ಇದೇ ವೇಳೆ ಹೇಳಿದರು.
''ರೈತರ ಸಬ್ಸಿಡಿಯಲ್ಲೂ ಕಮಿಷನ್'': ರಾಜ್ಯದ ಈಗಿನ ಸರ್ಕಾರದಲ್ಲಿ ಭ್ರಷ್ಟ ವ್ಯವಸ್ಥೆ ಬಗ್ಗೆ ಜನಸಾಮಾನ್ಯರು ಚರ್ಚೆ ಮಾಡುತ್ತಿದ್ದಾರೆ. ನಲವತ್ತು ಪರ್ಸೆಂಟೇಜ್ ಚರ್ಚೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ರೈತರಿಗೆ ನೀಡುವ ಸಬ್ಸಿಡಿಯಲ್ಲಿ ಕೂಡಾ ಕಮಿಷನ್ ಪಡೆಯುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.