ರಾಜ್ಯ ವಿಶ್ವ ವಿದ್ಯಾಲಯಗಳ (ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆ ಅಸ್ತು
ಬೆಂಗಳೂರು, ಸೆ. 21: ‘ರಾಜ್ಯದ ವಿಶ್ವ ವಿದ್ಯಾಲಯಗಳಲ್ಲಿನ ಶೈಕ್ಷಣಿಕ ಗುಣಮಟ್ಟ ಕುಸಿತ, ಉಪ ಕುಲಪತಿಗಳ ನೇಮಕದಲ್ಲಿನ ಮಿತಿ ಮೀರಿದ ಭ್ರಷ್ಟಾಚಾರ, ವಿವಿಗಳಲ್ಲಿನ ಅತಿಥಿ ಉಪನ್ಯಾಸಕರು ಹಾಗೂ ಹೊರಗುತ್ತಿಗೆ ಸಿಬ್ಬಂದಿ ನೇಮಕಾತಿ ಅಕ್ರಮ ಸಂಬಂಧ ವಿಧಾನಸಭೆಯಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರು ಗಂಭೀರ ಸ್ವರೂಪದ ಚರ್ಚೆ ನಡೆಯಿತು.
ಬುಧವಾರ ವಿಧಾನಸಭೆಯಲ್ಲಿ ಶಾಸನ ರಚನೆ ಕಲಾಪದಲ್ಲಿ ‘2022ನೆ ಸಾಲಿನ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ (ತಿದ್ದುಪಡಿ) ವಿಧೇಯಕ'ವನ್ನು ಮಂಡಿಸಿ ಪರ್ಯಾಲೋಚನೆಗೆ ಕೋರಿದರು. ಈ ವೇಳೆ ಮಾತನಾಡಿದ ಸ್ಪೀಕರ್ ಕಾಗೇರಿ, ‘ರಾಜ್ಯದ ವಿವಿಗಳ ಶಿಕ್ಷಣ ಗುಣಮಟ್ಟ ಅಗತ್ಯ ಕೆಳಮಟ್ಟದಲ್ಲಿದೆ. ಭವಿಷ್ಯದ ಪ್ರಜೆಗಳನ್ನು ರೂಪಿಸಬೇಕಾದ ನಮ್ಮ ವಿವಿಗಳಲ್ಲಿ ಶೈಕ್ಷಣಿಕ ಗುಣಮಟ್ಟವಿಲ್ಲ. ನನಗೆ ಬರುವ ದೂರು, ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯ ನೋಡಿದರೆ ನನಗೆ ಆಶ್ಚರ್ಯವಾಗುತ್ತಿದೆ. ನಿರೀಕ್ಷಿತ ಮಟ್ಟದಲ್ಲಿ ನಮ್ಮ ವಿವಿಗಳ ಇಲ್ಲ. ಇದನ್ನು ನಾನು ಬಹಳ ಬೇಸರದಲ್ಲಿ ಹೇಳ್ತಿದ್ದೇನೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಧ್ವನಿಗೂಡಿಸಿದ ಜೆಡಿಎಸ್ನ ಹಿರಿಯ ಸದಸ್ಯ ಎ.ಟಿ.ರಾಮಸ್ವಾಮಿ, ‘ರಾಜ್ಯದಲ್ಲಿ ಎಂಟು ಹೊಸ ವಿವಿಗಳ ಸ್ಥಾಪನೆ ಸ್ವಾಗತ. ಇದರಿಂದ 8 ಮಂದಿ ವಿಸಿ, 8 ಮಂದಿ ರಿಜಿಸ್ಟ್ರಾರ್ಗಳು ಹಾಗೂ ಸಿಬ್ಬಂದಿ ನೇಮಕ ಮಾಡಬಹುದು. ಖಾಸಗಿ ವಿವಿಗಳು ಹೆಚ್ಚಿನ ಡೊನೇಷನ್ ಪಡೆದು ಹೇಗೆಲ್ಲ ಪರೀಕ್ಷೆ ನಡೆಸುತ್ತಿದ್ದಾರೆಂಬುದು ಯಾರಿಗೂ ಗೊತ್ತಿಲ್ಲವೇ? ಹಿಂದೆ ಸರಕಾರ ಕುಲಪತಿಗಳನ್ನು ಹುಡುಕಿಕೊಂಡು ಹೋಗಿ ಮಾಡುತ್ತಿದ್ದರು. ಆದರೆ, ಇಂದು ಕುಲಪತಿಗಳಾಗಲು ಸರಕಾರದ ಕಾಲಿಗೆ ಬೀಳುವ ಸ್ಥಿತಿ ನಿಜಕ್ಕೂ ಶೋಚನೀಯ' ಎಂದು ಟೀಕಿಸಿದರು.
ತನಿಖೆ ಆಗಬೇಕು: ಉಪನಾಯಕ ಯು.ಟಿ.ಖಾದರ್ ಮಾತನಾಡಿ, ‘ಮಂಗಳೂರು ವಿವಿ ‘ಎ' ಗ್ರೇಡ್ನಿಂದ ‘ಬಿ' ಗ್ರೇಡ್ಗೆ ಕುಸಿದಿದೆ. ಮಂಗಳೂರು ವಿವಿ ಸಿಂಡಿಕೇಟ್ ಸಭೆಯನ್ನು ಬೆಂಗಳೂರಿನ ಫೈವ್ ಸ್ಟಾರ್ ಹೊಟೇಲ್ನಲ್ಲಿ ಮಾಡಲಾಗುತ್ತಿದೆ. ಸಿಂಡಿಕೇಟ್ ಸದಸ್ಯರು ತಮ್ಮ ಭತ್ತೆ ಹೆಚ್ಚು ಮಾಡಿಕೊಳ್ಳಲಿಕ್ಕೆ ಸೀಮಿತವಾಗಿದ್ದು, ವಿವಿ ಗುಣಮಟ್ಟ ಕಾಪಾಡಲು ಸೂಕ್ತ ನಿಯಮ ರೂಪಿಸಬೇಕು. ಕುಲಪತಿಗಳು ಅಕ್ರಮವಾಗಿ ನೇಮಕ ಮಾಡುತ್ತಿದ್ದು ಈ ಕುರಿತು ಸಮಗ್ರ ತನಿಖೆ ಅಗತ್ಯವಿದೆ' ಎಂದು ಸಲಹೆ ನೀಡಿದರು.
ಇದಕ್ಕೆ ಧ್ವನಿಗೂಡಿಸಿದ ಪ್ರಿಯಾಂಕ್ ಖರ್ಗೆ, ಅರವಿಂದ ಬೆಲ್ಲದ್, ಕೃಷ್ಣಬೈರೇಗೌಡ, ಎನ್.ಮಹೇಶ್, ಜಿ.ಟಿ.ದೇವೇಗೌಡ, ವೀರಣ್ಣ ಚರಂತಿಮಠ ಸೇರಿದಂತೆ ಹಲವು ಸದಸ್ಯರು, ‘ವಿವಿಗಳ ಗುಣಮಟ್ಟ ಕಾಪಾಡುವ ದೃಷ್ಟಿಯಿಂದ ನೇಮಕಾತಿ ಮತ್ತು ಕಟ್ಟಡ ನಿರ್ಮಾಣದ ಅಧಿಕಾರವನ್ನು ಉಪಕುಲಪತಿಗಳ ಬದಲಿಗೆ ಸರಕಾರವೇ ಉಳಿಸಿಕೊಳ್ಳಬೇಕು. ಗುಣಮಟ್ಟ ಹಾಗೂ ವಿವಿಗಳ ಗ್ರೇಡ್ ಹೆಚ್ಚಳಕ್ಕೆ ಸರಕಾರ ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದರು.
ಹೊಸ ವಿವಿ ಸ್ಥಾಪನೆ ವಿಧೇಯಕಕ್ಕೆ ಒಪ್ಪಿಗೆ: ಹೊಸದಾಗಿ ಬೀದರ್, ಹಾವೇರಿ, ಕೊಡಗು, ಚಾಮರಾಜನಗರ, ಹಾಸನ, ಕೊಪ್ಪಳ ಮತ್ತು ಬಾಗಲಕೋಟೆ ವಿವಿಗಳನ್ನು ಸ್ಥಾಪಿಸುವ ‘ಕರ್ನಾಟಕ ರಾಜ್ಯ ವಿಶ್ವ ವಿದ್ಯಾಲಯಗಳ (ತಿದ್ದುಪಡಿ) ವಿಧೇಯಕ-2022'ನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮತಕ್ಕೆ ಹಾಕಿದ ವೇಳೆ ಧ್ವನಿಮತದ ಅಂಗೀಕಾರ ದೊರೆಯಿತು.