ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ: ಜನವಾದಿ ಮಹಿಳಾ ಸಂಘಟನೆ ವಿರೋಧ

Update: 2022-09-25 14:45 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.25: ರಾಜ್ಯದ ಶಾಲಾ ಪಠ್ಯದಲ್ಲಿ ಭಗವದ್ಗೀತೆಯನ್ನು ಅಳವಡಿಸುವ ರಾಜ್ಯ ಸರಕಾರದ ಪ್ರಸ್ತಾಪವನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದ್ದು, ಮಕ್ಕಳಲ್ಲಿ ಸಮಾನತೆಯ ಭಾವವನ್ನು ತುಂಬುವ ಮತ್ತು  ದೇಶದಲ್ಲಿ  ಸೌಹಾರ್ದತೆಯನ್ನು  ಪ್ರತಿಪಾದಿಸುವ ಸಂವಿಧಾನವನ್ನು ಪಠ್ಯವಾಗಿ ಅಳವಡಿಸಬೇಕು ಎಂದು ಆಗ್ರಹಿಸಿದೆ.

ಸಂವಿಧಾನದ ಪರಿಚ್ಛೇದ 28ರ ಪ್ರಕಾರ ಸಾರ್ವಜನಿಕ ಶಿಕ್ಷಣದಲ್ಲಿ ಯಾವುದೇ ಧರ್ಮದ ವಿಚಾರಗಳನ್ನು ಒಳಗೊಳ್ಳಬಾರದು ಎಂದು ಸ್ಪಷ್ಟವಾಗಿ ಹೇಳಿದ್ದು, ರಾಜ್ಯ ಬಿಜೆಪಿ ಸರಕಾರ ಈ ದೇಶದ ಸಂವಿಧಾನದ ಆಶಯಗಳ ವಿರುದ್ಧ ಭಗವದ್ಗೀತೆಯನ್ನು ಅಳವಡಿಸಲು ಮುಂದಾಗಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ಇದು ದೇಶದ ಜಾತ್ಯತೀತ ವ್ಯವಸ್ಥೆಯನ್ನು ನಿರ್ನಾಮ ಮಾಡಿ, ಹಿಂದು ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಿರುವ ಸೂಚಕವಾಗಿದೆ. ಹಿಜಾಬ್‍ನ್ನು ಧರ್ಮದ ಗುರುತು ಎಂದು ನಿಷೇಧಿಸಿರುವ ರಾಜ್ಯ ಬಿಜೆಪಿ ಸರಕಾರ ಭಗವದ್ಗೀತೆಯನ್ನು ಪಠ್ಯದಲ್ಲಿ ಅಳವಡಿಸಲು ಹೊರಟಿರುವುದು ಧರ್ಮದ ಗುರುತು ಅಲ್ಲವೇ ಎಂದು ಸಂಘಟನೆ ಪ್ರಶ್ನಿಸಿದೆ.

ದೇಶದ ಜನತೆಯ ಎಲ್ಲ ಸಂಕಷ್ಟಗಳಿಗೆ ಕರ್ಮವೇ ಕಾರಣವೆಂದು ಹೇಳುವ ಕರ್ಮಸಿದ್ಧಾಂತವನ್ನು ಪ್ರತಿಪಾದಿಸುವ ಭಗವದ್ಗೀತೆಯ ಅಳವಡಿಕೆ ಆಳುವ ಕೇಂದ್ರ ರಾಜ್ಯ ಸರಕಾರಗಳ ವೈಫಲ್ಯವನ್ನು ಮುಚ್ಚಿಕೊಳ್ಳುವ ಹುನ್ನಾರವಾಗಿದೆ. ಚಾತುವಣ್ರ್ಯವನ್ನು ಪ್ರತಿಪಾದಿಸುವ ಭಗವದ್ಗೀತೆ ಜಾತಿವ್ಯವಸ್ಥೆಯನ್ನು ಜೀವಂತವಿಡುವ ಕೀಳು ರಾಜಕಾರಣವಾಗಿದೆ. ಈ ಹಿನ್ನಲೆಯಲ್ಲಿ ಶಾಲಾ ಪಠ್ಯದಲ್ಲಿ ಭಗವದ್ಗೀತೆಯನ್ನ ಕೈ ಬಿಡಬೇಕು ಎಂದು ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News