ಜನರ ಶ್ರೇಯೋಭಿವೃದ್ಧಿಗೆ ದಿನದ 24 ಗಂಟೆ ಕೆಲಸ ಮಾಡುತ್ತೇವೆ: ಸಿಎಂ ಬೊಮ್ಮಾಯಿ‌

Update: 2022-09-25 17:25 GMT
photo credit- twitter

ಮೈಸೂರು: 'ಟೀಕೆಗಳೇ ನನಗೆ ಟಾನಿಕ್, ಅಪಮಾನ, ಅವಮಾನಗಳನ್ನು ಮೆಟ್ಟಿಲು ಮಾಡಿಕೊಂಡು ಜನರ ಶ್ರೇಯೋಭಿವೃದ್ಧಿಗೆ ದಿನದ 24 ಗಂಟೆ ಕೆಲಸ ಮಾಡುತ್ತೇವೆ. ‌ನಾನು ರಾಜ್ಯದಲ್ಲಿ ಮತ್ತೊಮ್ಮೆ ಜನಪರ ಸರ್ಕಾರವನ್ನು ಸ್ಥಾಪನೆ ಮಾಡಿಯೇ ತೀರುತ್ತೇನೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಇಂದು ಚಾಮರಾಜ ಕ್ಷೇತ್ರದ ಫಲಾನುಭವಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತಾಡಿದರು.

ಈ ಕ್ಷೇತ್ರದ ಶಾಸಕ ನಾಗೇಂದ್ರ ಅವರು ಪಾದರಸದಂತೆ‌‌, ಪ್ರೀತಿ, ವಿಶ್ವಾಸದಿಂದ ಕೆಲಸ ಮಾಡುವ ಶಾಸಕ.‌ ಯಾವುದಾದರೂ ಕೆಲಸ ಹಿಡಿದರೆ ಅದನ್ನು ಮಾಡುವವರೆಗೂ ಬಿಡುವುದಿಲ್ಲ. ರಾಜಕಾರಣದಲ್ಲಿ ಎರಡು ವಿಧವಿದೆ. ಒಂದು ಪೀಪಲ್ಸ್ ಪೊಲಿಟಿಕ್ಸ್.  ಜನರ ಒಳಿತಿಗಾಗಿ ಮಾಡುವುದು.  ಇನ್ನೊಂದು ಪವರ್ ಪೊಲಿಟಿಕ್ಸ್. ಕೇವಲ ಅಧಿಕಾರಕ್ಕಾಗಿ ಕೆಲಸ ಮಾಡುವುದು. ನಾವು ಪ್ರತಿಪಕ್ಷದಲ್ಲಿದ್ದಾಗ ಮಾಡಿದ ಹೋರಾಟಕ್ಕೆ ಅಧಿಕಾರ ಬಂದಾಗ ಮೈಮುರಿದು ಕೆಲಸ ಮಾಡಬೇಕು ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

ನಾವು ಮಾಡುವ ಕೆಲಸ ಇಡೀ ರಾಜ್ಯದ ಅಭಿವೃದ್ಧಿಗೆ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಬೇಕು. ಸ್ವಾಭಿಮಾನದ ಬದುಕು, ಸ್ವಾವಲಂಬನೆಯ ಬದುಕಿಗಾಗಿ ನಮ್ಮ ಯೋಜನೆಗಳು ಇರಬೇಕು. ಯೋಜನೆಗಳು ಕೇವಲ ಘೋಷಣೆ ಆಗಬಾರದು. ಅವುಗಳ ಅನುಷ್ಠಾನ ಆಗಬೇಕು. ಆ ಭಾಗ್ಯ, ಈ ಭಾಗ್ಯ ಅಂತ ದಿನಕ್ಕೊಂದು ಭಾಗ್ಯ ಕೊಟ್ಟು ರಾಜ್ಯವನ್ನು ದೌರ್ಭಾಗಕ್ಕೆ ತಳ್ಳಿದರು. ಅದಕ್ಕಾಗಿ ಆ ಭಾಗ್ಯಗಳನ್ನು ಕೊಟ್ಟವರಿಗೆ ಜನ ಬೆಂಬಲ ಸಿಗಲಿಲ್ಲ. ಕೆಲವರನ್ನು ಕೆಲವು ಸಮಯ ಮೋಸ ಮಾಡಬಹುದು. ಎಲ್ಲರನ್ನು ಎಲ್ಲ ಸಮಯದಲ್ಲಿ ಮೋಸ ಮಾಡಲು ಸಾಧ್ಯವಿಲ್ಲ. ಜನರು ಜಾಗೃತರಾಗಿದ್ದಾರೆ ಎಂದರು.

ಸುಳ್ಳು ಕಥೆಗಳು, ಅಪಪ್ರಚಾರಗಳಿಂದ ಜನರ ಮನಸ್ಸು ಗೆಲ್ಲಲು ಸಾಧ್ಯವಿಲ್ಲ. ರಾಜಕಾರಣಿಗಳಿಗೆ ಅಧಿಕಾರದ ಹಪಾಹಪಿಯಿರುತ್ತದೆಮ ಯಾವಾಗ ಅಧಿಕಾರಕ್ಕೆ ಬರುತ್ತೇವೆ ಅಂತ. ಆದರೆ, ಜನರ ಹೃದಯದಲ್ಲಿ ಸ್ಥಾನ ಪಡೆದುಕೊಂಡವರಿಗೆ ಅಧಿಕಾರ ಬೇಕು ಅಂತ ಏನಿಲ್ಲ.‌ ಕೆಲವರು ಅಧಿಕಾರ ಕಳೆದುಕೊಂಡ ಮೇಲೆ ನೀರಿನಿಂದ ಹೊರಗೆ ಬಿದ್ದ ಮೀನಿನಂತೆ ಒದ್ದಾಡುತ್ತಾರೆ. ಜನ ಬೆಂಬಲ ಇದ್ದರೆ ಏನಾದರೂ ಆಗಬಹುದು. ಆದರೆ, ವಾಮ ಮಾರ್ಗ, ಮೋಸದ ಮಾರ್ಗದಿಂದ ಕರ್ನಾಟಕದ ಜನರ ಆಶೀರ್ವಾದವನ್ನು ಪಡೆಯುವುದಕ್ಕೆ ಸಾಧ್ಯವಿಲ್ಲ ಎಂದರು.‌

ಎರಡು ರೀತಿ ವ್ಯಕ್ತಿತ್ವಗಳು ಇರುತ್ತವೆ. ಒಬ್ಬರು ಅರ್ಜುನ, ಇನ್ನೊಬ್ಬರು ಕರ್ಣ. ಅರ್ಜುನನಿಗೆ ಬಾಣ ಹೂಡಬೇಕಾದರೆ ಬಹಳ ಹೊಗಳಬೇಕು. ನೀನು ಶೂರ, ಧೀರ ಅಂತ ಹೊಗಳಿದಾಗ ಬಾಣ ಹೂಡುತ್ತಾನೆ. ಆದರೆ, ಕರ್ಣ ಹಾಗಲ್ಲ. ಅವನಿಗೆ ಗುರಿಯಿಲ್ಲ.‌ ನಿನ್ನ ಕೈಯಲ್ಲಿ ಆಗುವುದಿಲ್ಲ ಅಂತ ಎಂದು ಟೀಕೆ ಮಾಡಿದರೆ ಅವನು ಮೈ ಕೊಡವಿ ನಿಖರಾವಾಗಿ ಬಾಣ ಹೂಡುತ್ತಾನೆ. ನಾನು ಕರ್ಣನಂತೆ, ನೀವು ಎಷ್ಟು ಟೀಕೆ ಮಾಡುತ್ತೀರಿ. ಅಷ್ಟು ನನಗೆ ಶಕ್ತಿ ಬರುತ್ತದೆ. ರಾಜ್ಯದಲ್ಲಿ ನಿರಂತರ ಅಭಿವೃದ್ದಿ ಮಾಡಿ, ರಾಜ್ಯದಲ್ಲಿ ಮತ್ತೆ ನಾವು ಅಧಿಕಾರಕ್ಕೆ ಬರುತ್ತೇವೆ. ನೀವು ಈಗ ಪೋಸ್ಟರ್ ಹಚ್ಚಲು ಯಾವ ಜಾಗದಲ್ಲಿ ನಿಂತಿದ್ದೀರಿ ನೀವು ಅಲ್ಲಿಯೇ‌ ನಿಲ್ಲುವಂತೆ ಮಾಡುತ್ತೇನೆ‌ ಎಂದರು.

14 ಲಕ್ಷ ರೈತರ ಮಕ್ಕಳಿಗೆ ನಾವು‌ 600 ಕೋಟಿಗಿಂತ ಹೆಚ್ಚು ಅನುದಾನವನ್ನು ಕೊಡುತ್ತಿದ್ದೇವೆ. ಕಾರ್ಮಿಕರ ಮಕ್ಕಳು, ಮೀನುಗಾರರ ಮಕ್ಕಳು, ನೇಕಾರರ ಮಕ್ಕಳು ಎಲ್ಲರಿಗೂ ವಿದ್ಯಾನಿಧಿ ಯೋಜನೆ ಕೊಟ್ಟಿದ್ದೇವೆ‌. ಈ ರೀತಿಯ ಯೋಜನೆಗಳನ್ನು ಇದುವರೆಗೆ ಯಾಕೆ ನೀವು ಮಾಡಲಿಲ್ಲ. ನಾವು ಎಲ್ಲ ವರ್ಗದ ಜನರಿಗೆ ಯೋಜನೆಗಳನ್ನು ಜಾರಿಗೆ ತಂದಿದ್ದೆವೆ.

ಮೈಸೂರಿನಲ್ಲಿ ಪ್ರತಿಯೊಂದು ವಾರ್ಡ್ ನಲ್ಲಿ ಎರಡು ಸ್ತ್ರೀ ಶಕ್ತಿ ಸಂಘ, ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಯುವಕರ ಸಂಘ ಮಾಡುತ್ತೇವೆ.‌ ಪ್ರತಿ ಸಂಘಕ್ಕೆ ಐದು ಲಕ್ಷ ರೂ ಕೊಡುವ ಯೋಜನೆಯನ್ನು ಪ್ರತಿಯೊಂದು ವಾರ್ಡ್ ನಲ್ಲಿ ಮಾಡುತ್ತಿದ್ದೇವೆ. ಯವಕರು ಮತ್ತು ಮಹಿಳೆಯರಿಗೆ ಕೆಲಸ ಸಿಗಬೇಕು. ಎಲ್ಲ ವರ್ಗದ ಜನರ ಅಭಿವೃದ್ಧಿ ಆದಾಗ ರಾಜ್ಯ ಶ್ರೀಮಂತ ಆಗುತ್ತದೆ ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

ನಾಗೇಂದ್ರ ಅವರು ಚಾಮರಾಜ ಕ್ಷೇತ್ರದಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದಾರೆ. ‌ಇದನ್ನು ಸಕಾರಾತ್ಮಕವಾಗಿ ಪರಿಶಿಲಿಸಲಾಗುವುದು‌ ಎಂದು ಮುಖ್ಯಮಂತ್ರಿ ಬಸವರಾಜ  ಬೊಮ್ಮಾಯಿ‌ ಹೇಳಿದರು. 

ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಶಾಸಕ ನಾಗೇಂದ್ರ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News