ಇಂದು ರಾಷ್ಟ್ರಪತಿಯಿಂದ ಮೈಸೂರು ದಸರಾಗೆ ಚಾಲನೆ

Update: 2022-09-26 02:30 GMT
ರಾಷ್ಟ್ರಪತಿ ದ್ರೌಪತಿ ಮುರ್ಮು

ಮೈಸೂರು: ಕೋವಿಡ್-19 ಸಾಂಕ್ರಾಮಿಕದಿಂದಾಗಿ ಎರಡು ವರ್ಷಗಳಿಂದ ಕಳೆಗುಂದಿದ್ದ ಸಾಂಪ್ರದಾಯಿಕ ಮೈಸೂರು ದಸರಾ ಈ ಬಾರಿ ಪೂರ್ಣ ಪ್ರಮಾಣದಲ್ಲಿ ಆಯೋಜನೆಯಾಗಿದ್ದು, ಸೋಮವಾರ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಬೆಳಗ್ಗೆ 9.45ರಿಂದ 10.05ರ ನಡುವೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಿದ್ದಾರೆ.

ಮುಂದಿನ ಹತ್ತು ದಿನಗಳಲ್ಲಿ ಪ್ರತಿದಿನ ಈ ವೈಭವೋಪೇತ ಆಚರಣೆಯನ್ನು ಕಣ್ತುಂಬಿಕೊಳ್ಳಲು ನಾಲ್ಕು ಲಕ್ಷಕ್ಕೂ ಅಧಿಕ ಮಂದಿ ಆಗಮಿಸುವ ನಿರೀಕ್ಷೆ ಇದೆ. ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮತ್ತು ಶೋಭಾ ಕರಂದ್ಲಾಜೆಯವರು ಬೆಟ್ಟದ ತುದಿಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ದಸರಾ ಮಹೋತ್ಸವಕ್ಕೆ ರಾಷ್ಟ್ರಪತಿಗಳು ಚಾಲನೆ ನೀಡುತ್ತಿರುವುದು ಇದೇ ಮೊದಲು ಎಂದು ಉನ್ನತ ಮೂಲಗಳು ಹೇಳಿವೆ. ದಸರಾ ಕಾರ್ಯಕಾರಿ ಸಮಿತಿ ಈ ಬಾರಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಕೈಗಾರಿಕಾ ದಸರಾ, ಚಲನಚಿತ್ರೋತ್ಸವ, ಫಲ ಪುಷ್ಪ ಮೇಳ, ಕುಸ್ತಿ ಪಂದ್ಯಾಟ, ಕಲಾ ಪ್ರದರ್ಶನ, ಮೈಸೂರು ದೀಪಾಲಂಕಾರ, ದಸರಾ ವಸ್ತುಪ್ರದರ್ಶನಗಳು ಉದ್ಘಾಟನೆಗೊಳ್ಳಲಿವೆ.

ಇತರ ಪ್ರಮುಖ ಕಾರ್ಯಕ್ರಮಗಳಲ್ಲಿ ಮಹಿಳಾ ಉದ್ಯಮಿಗಳು ತಯಾರಿಸಿದ ಕೈಗಾರಿಕಾ ಉತ್ಪನ್ನಗಳ ಪ್ರದರ್ಶನ, ಅರಮನೆಯ ಎದುರು ಯೋಗ ಸಂಭ್ರಮ, ಕೋಟೆ ಆಂಜನೇಯ ದೇವಾಲಯದಲ್ಲಿ ದಸರಾ ದರ್ಶನ, ಟೌನ್‍ಹಾಲ್‍ನಲ್ಲಿ ಹೆರಿಟೇಜ್ ಸೈಕ್ಲಿಂಗ್, ಜಗನ್ಮೋಹನ ಪ್ಯಾಲೇಸ್‍ನಲ್ಲಿ ಮಕ್ಕಳ ದಸರಾ, ಕ್ಲಾಸಿಕ್ ಸಭಾಗೃಹದಲ್ಲಿ ಉರ್ದು ಕವಿಗೋಷ್ಠಿಯಂಥ ಕಾರ್ಯಕ್ರಮಗಳು ನಡೆಯಲಿವೆ.

ಸೆಪ್ಟೆಂಬರ್ 30ರಂದು ಸಾಂಪ್ರದಾಯಿಕ ಟೋಂಗಾ ಸವಾರಿ, ಅರಮನೆ ಆವರಣದಲ್ಲಿ ಯೋಗ ಪ್ರದರ್ಶನ ನಡೆಯಲಿದೆ. ಅಕ್ಟೋಬರ್ 2ರಂದು ಹೆರಿಟೇಜ್ ವಾಕ್, ಕೃಷಿಕರ ಕ್ರೀಡಾಕೂಟ, ಪೊಲೀಸ್ ಬ್ಯಾಂಡ್ ನಡೆಯಲಿದೆ. ಅಕ್ಟೋಬರ್ 30ರಂದು ಚಾಮುಂಡಿ ಬೆಟ್ಟದಲ್ಲಿ ಯೋಗ ಚಾರಣ ನಡೆಯಲಿದೆ. ಒಟ್ಟು 50 ಲಕ್ಷ ಮಂದಿ ಹತ್ತು ದಿನಗಳ ಉತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ದಸರಾ ವಿಶೇಷಾಧಿಕಾರಿ ಮತ್ತು ಜಿಲ್ಲಾಧಿಕಾರಿ ಬಗದಿ ಗೌತಮ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News