ವಿರಾಜಪೇಟೆ: ನಾಪತ್ತೆಯಾಗಿದ್ದ ಅರಣ್ಯ ವೀಕ್ಷಕ ಮೃತದೇಹ ಪತ್ತೆ

Update: 2022-09-26 10:37 GMT
ಒಳ ಚಿತ್ರದಲ್ಲಿ ಮೃತ ಅರಣ್ಯ ವೀಕ್ಷಕ ತರುಣ್ ಕುಮಾರ್ 

ಮಡಿಕೇರಿ ಸೆ.26 : ವಿರಾಜಪೇಟೆ ತಾಲೂಕಿನ ಮಾಕುಟ್ಟ ಅರಣ್ಯ ವ್ಯಾಪ್ತಿಯಲ್ಲಿ ಕರ್ತವ್ಯದಲ್ಲಿದ್ದ ವೇಳೆ ನಾಪತ್ತೆಯಾಗಿದ್ದ ಅರಣ್ಯ ವೀಕ್ಷಕ ಮೂಲತಃ ಬಾಳೆಲೆ ಗ್ರಾಮದ ನಿವಾಸಿ ತರುಣ್ ಕುಮಾರ್(23) ಮೃತ ದೇಹ ಪತ್ತೆಯಾಗಿದೆ.

ಮಾಕುಟ್ಟ ಮೀಸಲು ಅರಣ್ಯ ವ್ಯಾಪ್ತಿಗೆ ಒಳಪಡುವ ವಿ.ಬಾಡಗ ಭಾಗದಲ್ಲಿ ಸೆ.23ರ ಸಂಜೆ ವೇಳೆ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾಗ ತರುಣ್ ನಾಪತ್ತೆಯಾಗಿದ್ದರು. ಕಳೆದ ನಾಲ್ಕು ದಿನಗಳಿಂದ ಪತ್ತೆ ಕಾರ್ಯ ನಡೆಸಲಾಗಿದ್ದು, ಇಂದು ಬೆಳಗ್ಗೆ ವಿ.ಬಾಡಗದ ಕೊಕ್ಕೆಹೊಳೆಯ ನೀರು ಗುಂಡಿ ಎಂಬಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಮಂಗಳೂರಿನಿಂದ ಆಗಮಿಸಿದ್ದ ಈಜು ತಜ್ಞರು ಹಾಗೂ ಎನ್.ಡಿ.ಆರ್.ಎಫ್ ಸಬ್ಬಂದಿಗಳು ಕಾರ್ಯಾಚರಣೆ ನಡೆಸಿದರು. ಅರಣ್ಯ ಇಲಾಖೆ, ಅಗ್ನಿ ಶಾಮಕದಳ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಸಹಕರಿಸಿದರು.

ವಿ.ಬಾಡಗದಲ್ಲಿರುವ ಅರಣ್ಯ ಇಲಾಖೆಯ ಶಿಬಿರದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತರುಣ್ ಕುಮಾರ್ ಗೆ ಅಂತಿಮ ನಮನ ಸಲ್ಲಿಸಿದರು. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಪೋಷಕರಿಗೆ ಹಸ್ತಾಂತರಿಸಲಾಯಿತು. ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳೀಯ ಜನಪ್ರತಿನಿಧಿಗಳು ಭೇಟಿ ನೀಡಿ ಸಾಂತ್ವನ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News