ಚಾಮರಾಜನಗರ | ಬಾಲ್ಯ ವಿವಾಹ ಪ್ರಕರಣ: ಇಬ್ಬರು ಅರ್ಚಕರು ಸೇರಿ ಮೂವರು ಆರೋಪಿಗಳಿಗೆ ಜೈಲು ಶಿಕ್ಷೆ

Update: 2022-09-28 15:10 GMT
ಆರೋಪಿಗಳು

ಚಾಮರಾಜನಗರ: ಅಪ್ರಾಪ್ತೆಯನ್ನು ಪರಿಚಯಿಸಿಕೊಂಡು ಬಲವಂತದಿಂದ ವಿವಾಹವಾಗಿದ್ದ ಬಸ್ ಕಂಡಕ್ಟರ್ ಹಾಗೂ ಮದುವೆ ಮಾಡಿಸಿದ್ದ ಇಬ್ಬರು ಅರ್ಚಕರಿಗೆ ಕಠಿಣ ಶಿಕ್ಷೆ ವಿಧಿಸಲಾಗಿದೆ.

ಮಕ್ಕಳ ಸ್ನೇಹಿ ಹಾಗೂ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿ, ಆದೇಶ ಹೊರಡಿಸಿದೆ.

ಕೆಎಸ್ಸಾರ್ಟಿಸಿ ಕಂಡಕ್ಟರ್ ರವಿಕುಮಾರ್, ಅರ್ಚಕರಾದ ಕೆ ಎನ್ ಶಾಸ್ತ್ರಿ ಮತ್ತು ರಾಜೇಶ್ವರ್ ಶಾಸ್ತ್ರಿ ಶಿಕ್ಷೆಗೊಳಗಾದ ಆರೋಪಿಗಳು.‌ ಕಾಲೇಜಿಗೆ ತೆರಳುತ್ತಿದ್ದ ಬಾಲಕಿಯನ್ನು ಪರಿಚಯಿಸಿಕೊಂಡಿದ್ದ ಕಂಡಕ್ಟರ್, 2017 ರ ನವೆಂಬರ್ 23 ರಂದು ಕಾರಿನಲ್ಲಿ ಬಲವಂತವಾಗಿ ಹತ್ತಿಸಿಕೊಂಡು ಶ್ರೀರಂಗಪಟ್ಟಣದಲ್ಲಿ ವಿವಾಹ ಮಾಡಿಕೊಂಡಿದ್ದರು. ಈತನಿಗೆ ಇಬ್ಬರು ಅರ್ಚಕರು ಸಹಕಾರ ಕೊಟ್ಟು ವಿವಾಹ ಮಾಡಿಸಿದ್ದರು ಎನ್ನಲಾಗ್ತಿದೆ.

ವಿವಾಹವಾದ ಬಳಿಕ ಲೈಂಗಿಕ ದೌರ್ಜನ್ಯ ನೀಡಿದ್ದಲ್ಲದೇ ಕೊಲೆ ಬೆದರಿಕೆ ಹಾಕಿದ್ದ ಆರೋಪ ಸಾಬೀತಾಗಿದೆ. ಈ ಹಿನ್ನೆಲೆ ಮೊದಲನೇ ಆರೋಪಿ ರವಿಕುಮಾರ್​ಗೆ 3 ವರ್ಷ ಶಿಕ್ಷೆ, ಇದರಲ್ಲಿ ಒಂದು ವರ್ಷ ಕಠಿಣ ಶಿಕ್ಷೆ ಮತ್ತು ಅರ್ಚಕರಿಗೆ ಒಂದು ವರ್ಷ ಕಠಿಣ ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಧೀಶರಾದ ಎ ಸಿ ನಿಶಾರಾಣಿ ಈ ಆದೇಶ ನೀಡಿದ್ದಾರೆ.

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ ಯೋಗೇಶ್ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News