SDPI ಚುನಾವಣಾ ಆಯೋಗದಲ್ಲಿ ನೋಂದಣಿಯಾಗಿರುವ ಪಕ್ಷ, ನಿಷೇಧದ ಬಗ್ಗೆ ನಿರ್ಧಾರವಿಲ್ಲ: ಸಿಎಂ ಬೊಮ್ಮಾಯಿ

Update: 2022-09-29 10:10 GMT

ಹಾವೇರಿ, ಸೆಪ್ಟೆಂಬರ್ 29:  'ಎಸ್ ಡಿಪಿಐ ಭಾರತ ಚುನಾವಣಾ ಆಯೋಗದಲ್ಲಿ ನೋಂದಣಿಯಾಗಿರುವ ಪಕ್ಷ. ಇದರ ನಿಷೇಧದ ಬಗ್ಗೆ  ಯಾವುದೇ ನಿರ್ಧಾರ  ಕೇಂದ್ರ ಸರ್ಕಾರ ತೆಗೆದುಕೊಂಡಿಲ್ಲ' ಎಂದು ಮುಖ್ಯಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ಸಿ.ಬಿ. ಕೊಳ್ಳಿ ಪಾಲಿಟೆಕ್ನಿಕ್ ಕಾಲೇಜು ಮೈದಾನದ ಹೆಲಿಪ್ಯಾಡ್‍ಗೆ ಬಂದಿಳಿದು ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು,  'ಎಸ್ ಡಿಪಿಐ ನಿಷೇಧದ ಬಗ್ಗೆ ಬರುವ ದಿನಗಳ ಬೆಳವಣಿಗೆಯ ಆಧಾರದ ಮೇಲೆ ಕ್ರಮ ವಹಿಸಲಾಗುವುದು' ಎಂದು ತಿಳಿಸಿದರು. 

'ಯಾರು ಭಾರತ್ ಜೋಡೋ ಮಾಡಿದ್ದಾರೆ, ಯಾರು  ತೋಡೋ ಮಾಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಡಿ.ಕೆ.ಶಿವಕುಮಾರ್ ಏನಾದರೂ ಹೇಳಲಿ. ಯಾರೇ ಫ್ಲೆಕ್ಸ್ ಹಾಕಬೇಕಾದರೂ ಅನುಮತಿ ಪಡೆಯಬೇಕು. ಯಾವುದೇ ರಾಜಕೀಯ ಪಕ್ಷದ ಫ್ಲೆಕ್ಸ್ ಹರಿಯುವ ಅವಶ್ಯಕತೆ  ಬಿಜೆಪಿಗೆ ಇಲ್ಲ. ಎಲ್ಲ ಜನರಿಗೂ ಎಲ್ಲಾ ವಿಚಾರಗಳು ಗೊತ್ತಿದೆ.  ಹೀಗಾಗಿ ಅದರ ಅವಶ್ಯಕತೆ ಇಲ್ಲ ಎಂದು  ಭಾರತ್ ಜೋಡೋ ಫ್ಲೆಕ್ಸ್ ಗಳನ್ನು ಹರಿದುಹಾಕಿರುವ ಬಗ್ಗೆ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.  

ಗಿಮಿಕ್ ಎನ್ನುವುದು ಸರಿಯಲ್ಲ: ಪಿ.ಎಫ್.ಐ ನಿಷೇಧ ರಾಜಕೀಯ ಸ್ಟಂಟ್ ಹಾಗೂ ಚುನಾವಣಾ ಗಿಮಿಕ್  ಎಂದಿರುವ ಬಿ.ಕೆ.ಹರಿಪ್ರಸಾದ್ ಅವರಿಗೆ ಬೇರೇನೂ ವ್ಯಾಖ್ಯಾನ ಮಾಡಲು ಸಾಧ್ಯ. ಇಷ್ಟು ವರ್ಷ ವಿಧ್ವಂಸಕ ಕೃತ್ಯಗಳು ನಮ್ಮೆದುರಿಗೆ ನಡೆದಿದೆ. ಕೊಲೆ, ಭಯೋತ್ಪಾದನೆ ಚಟುವಟಿಗೆ ಬೆಂಬಲ ನೀಡಿದ್ದಾರೆ. ಇದೆ ಕಾಂಗ್ರೆಸ್ ವಿಧಾನ ಸಭೆ ಒಳಹೊರಗೆ  ನಿಷೇಧಿಸಿ ಅಂತ ಹೇಳುತ್ತಿದ್ದವರು, ಈಗ ಗಿಮಿಕ್ ಎಂದು ಕರೆಯುವುದು ಎಷ್ಟರ ಮಟ್ಟಿಗೆ ಸರಿ ಎಂದು ಹರಿಪ್ರಸಾದ್ ಯೋಚಿಸಬೇಕು ಎಂದರು. 

ಕನ್ನಡ ಭವನಕ್ಕೆ ಎರಡು ಎಕರೆ ಸ್ಥಳ ನಿಗದಿ ಮಾಡಲು ಗೋವಾ ಮುಖ್ಯ ಮಂತ್ರಿಗಳಿಗೆ ಪತ್ರ ಬರೆಯಲಾಗಿದೆ ಹಾಗೂ ಅವರೊಂದಿಗೆ ಮಾತನಾಡಲಾಗಿದೆ. ಸ್ಥಳ ನಿಗದಿ ಮಾಡುವುದಾಗಿ ಹೇಳಿದ್ದಾರೆ ಎಂದರು. 

ಸಾಹಿತಿಗಳು ಎರಡೂ ಕಡೆ ಇದ್ದಾರೆ: ಭಾರತ್ ಜೋಡೋ  ಕಾರ್ಯಕ್ರಮಕ್ಕೆ     ಸಾಹಿತಿಗಳ ಬೆಂಬಲ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ,  ದೇಶದಲ್ಲಿ ಸಾಹಿತಿಗಳು ಎರಡೂ ಕಡೆ ಇದ್ದಾರೆ.  ಹಾಗಾಗಿ ಕೆಲವರು ಅಲ್ಲಿ, ಕೆಲವರು ಇಲ್ಲಿ ಬೆಂಬಲ ನೀಡುತ್ತಾರೆ ಎಂದರು. 

ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ: ನವೆಂಬರ್ ನಲ್ಲಿ ನಡೆಯಲಿರುವ ಹಾವೇರಿ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲಾ ಸಿದ್ಧತೆಗಳು ನಡೆಯುತ್ತಿದೆ. ಅದ್ದೂರಿಯಾಗಿ ಸಮ್ಮೇಳನ ಮಾಡಿ ತೀರುತ್ತೇವೆ ಎಂದರು. 

ಕಾರ್ಯಕ್ರಮಗಳಿಗೆ ಚಾಲನೆ: ಕೆಎಂಎಫ್ ಕಚೇರಿ ಉದ್ಘಾಟನೆ ಹಾಗೂ ಮೆಗಾ ಡೈರಿ ಶಂಕು ಸ್ಥಾಪನೆ ಪ್ರಮುಖ ಕಾರ್ಯಕ್ರಮ. ಹಾಲು ಉತ್ಪಾದನೆ ಹಾಗೂ ಹಾಲು ಉತ್ಪಾದಕರಿಗೆ ಬಹಳಷ್ಟು ಅನುಕೂಲ ಕೊಡುವ ಕಾರ್ಯಕ್ರಮ ಇದಾಗಿದೆ. ಇದರ ಜೊತೆಗೆ ಹಲವಾರು ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತಿದೆ. ಬಜೆಟ್ ನಲ್ಲಿ ಹೇಳಲಾಗಿರುವ ಕಾರ್ಯಕ್ರಮಗಳ ಪ್ರಾರಂಭವಾಗುತ್ತಿದೆ ಎಂದರು.

ಸಚಿವರಾದ  ಶಿವರಾಂ ಹೆಬ್ಬಾರ್, ಬಿ.ಸಿ. ಪಾಟೀಲ್, ಸಂಸದ ಶಿವಕುಮಾರ್ ಉದಾಸಿ, ಶಾಸಕ ನೆಹರೂ ಓಲೇಕಾರ್, ಮಾಜಿ ಶಾಸಕ ಮಹಿಮಾ ಪಟೇಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News