ಗಂಟು ರೋಗದಿಂದ ಮೃತಪಟ್ಟ ದನಗಳಿಗೆ 20 ಸಾವಿರ ರೂ.ಪರಿಹಾರ: ಸಿಎಂ ಬೊಮ್ಮಾಯಿ ಘೋಷಣೆ

Update: 2022-09-29 11:23 GMT

ಹಾವೇರಿ, ಸೆ. 29: 'ಗಂಟು ರೋಗದಿಂದ ದನಗಳು  ಮೃತಪಟ್ಟರೆ ಪಟ್ಟರೆ 20 ಸಾವಿರ ರೂ.ಗಳ ಪರಿಹಾರ ಒದಗಿಸಲಾಗುವುದು ಹಾಗೂ  ಗಂಟು ರೋಗಕ್ಕೆ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. 

ಹಾವೇರಿಯ ಗುರುಭವನದಲ್ಲಿ  ಹಾವೇರಿ ಜಿಲ್ಲೆ ರಚನೆಗೊಂಡು 25 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ “ *ರಜತ ಮಹೋತ್ಸವ ಸಮಾರಂಭ”ವನ್ನು ಉದ್ಘಾಟಿಸಿ ಮಾತನಾಡಿದ ಅವರು, 'ಈ ಭಾಗದಲ್ಲಿ ದನಕರುಗಳಿಗೆ ಗಂಟು ರೋಗ ಕಂಡುಬಂದಿದೆ. ಗಂಟುರೋಗ  ಹರಡದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಅದಕ್ಕೆ ಈಗಾಗಲೇ ಸೂಚನೆ ನೀಡಿ ವಿಶೇಷ ತಂಡವನ್ನು ಕಳಿಸಲಾಗುವುದು' ಎಂದು ತಿಳಿಸಿದರು.  

ಏಳು ಗಂಟೆಗಳ ಕಾಲ ವಿದ್ಯುಚ್ಛಕ್ತಿ ಸರಬರಾಜು : ವಿದ್ಯುಚ್ಛಕ್ತಿ ಸರಬರಾಜು ಐದು ಗಂಟೆಗಳ ಕಾಲವಿದ್ದು ಇದನ್ನು ಏಳು ಗಂಟೆಗಳಿಗೆ ವಿಸ್ತರಿಸಬೇಕು ಎಂಬ ರೈತರ ಬೇಡಿಕೆಯನ್ನು ಈಡೇರಿಸಲಾಗುವುದು ಎಂದರು. ಈ ಬಗ್ಗೆ ಕೂಡಲೇ ಆದೇಶ ಹೊರಡಿಸಲಾಗುವುದು.  ವಿದ್ಯುತ್  ಸಂಸ್ಥೆಗಳ ಖಾಸಗೀಕರಣವನ್ನು ನಮ್ಮ ಸರ್ಕಾರ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.  

ದುಡಿಯುವ ವರ್ಗಕ್ಕೆ ಹೆಚ್ಚಿನ ಮಹತ್ವ : ದುಡಿಯುವ ವರ್ಗಕ್ಕೆ ಹೆಚ್ಚಿನ ಮಹತ್ವ ನೀಡಿದ್ದೇವೆ. 11,137  ಪೌರ ಕಾರ್ಮಿಕರ ಸೇವೆಯನ್ನು ಕರ್ನಾಟಕ  ಇತಿಹಾಸದಲ್ಲಿ ಪ್ರಥಮ ಬಾರಿಗೆ ಕಾಯಂಗೊಳಿಸಲಾಗಿದೆ. ಇನ್ನೆರಡು ಹಂತಗಳಲ್ಲಿ ಖಾಯಂ ಮಾಡುವ ಕೆಲಸವನ್ನು ಮಾಡಲಾಗುವುದು.   ಅಂಗನವಾಡಿ, ಆಶಾ ಕಾರ್ಯಕರ್ತರಗೆ ಕೆಲಸಕ್ಕೆ ಸುರಕ್ಷತೆ, ಭದ್ರತೆ ನೀಡುವ ಕೆಲಸಗಳ ಬಗ್ಗೆ ನಿರ್ಧಾರಗಳನ್ನು ಕೈಗೊಳ್ಳಲಾಗುವುದು. ದುಡಿಮೆಗೆ ಗೌರವ ಬರುವ ರೀತಿಯಲ್ಲಿ  ನಿರ್ಣಯ ತೆಗೆದುಕೊಳ್ಳಲಾಗುವುದು ಎಂದರು.  ರೈತ ವಿದ್ಯಾನಿಧಿ ಯೋಜನೆಯನ್ನು ಮುಖ್ಯಮಂತ್ರಿಯಾದ ನಾಲ್ಕು ಗಂಟೆಗಳ ಅವಧಿಯಲ್ಲಿ ಘೋಷಿಸಿದೆ. 14 ಲಕ್ಷ ಜನ ಈ ವರ್ಷ ಪಡೆದಿದ್ದಾರೆ. ಬೇರ್ಯಾವ ವಿದ್ಯಾರ್ಥಿವೇತನ ಪಡೆದರೂ ಇದನ್ನು ನೀಡಲಾಗುತ್ತಿದೆ. ದುಡಿಯುವ ವರ್ಗಕ್ಕೆ ಮನ್ನಣೆ ನೀಡಲಿ ಆದತ್ಯೆ ನೀಡಲಾಗುತ್ತಿದೆ.  ದುಡಿಮೆಯೇ ದೊಡ್ಡಪ್ಪ ಎಂಬುದು ನಮ್ಮ ಘೋಷವಾಕ್ಯ. ಹಾವೇರಿ ಜಿಲ್ಲೆ ನಮ್ಮ ಹೃದಯದಲ್ಲಿದೆ. ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ.  ಹಾವೇರಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಅಭಿವೃದ್ಧಿ ಮಾಡಲು ಬದ್ಧನಾಗಿದ್ದೇನೆ ಎಂದರು.

ಪರಿಹಾರದ ಭಾಗವಾಗಬೇಕು : ಈಗಿರುವ ಸಮಸ್ಯೆಗಳು  ಹುಟ್ಟುಹಾಕಿರುವ ಸಮಸ್ಯೆಗಳಲ್ಲ.  ಹತ್ತಾರು ವರ್ಷಗಳ ಸಮಸ್ಯೆಯಾಗಿದೆ.  ಸಮಸ್ಯೆಯನ್ನು ಚರ್ಚೆ ಮಾಡದೆ  ಅಧಿಕಾರವಿದ್ದಾಗ ಪರಿಹಾರದ ಭಾಗವಾಗಿ ನಾವು ಕೆಲಸ ಮಾಡಬೇಕು. ಸಮಸ್ಯೆಗಳನ್ನು ಹಾಗೆಯೇ  ಬಿಟ್ಟರೆ ಅದು ಉತ್ತಮ ಆಡಳಿತಗಾರರ ಲಕ್ಷಣವಲ್ಲ.  ನಾನು ದಿನಕ್ಕೆ 16-17 ತಾಸು ಕೆಲಸ ಮಾಡುತ್ತಿದ್ದು, ಜನಪರವಾಗಿರುವ ತೀರ್ಮಾನಗಳನ್ನು ಮಾಡುತ್ತಿದ್ದೇನೆ. ಬಹಳ ವರ್ಷಗಳಿಂದ ಆಗದೇ ಇರುವಂಥ ಹಲವಾರು ತೀರ್ಮಾನಗಳನ್ನು  ಕೈಗೊಂಡಿದ್ದೇನೆ.

 ಪ್ರವಾಹ, ಬರಗಾಲ, ಏನೇ ಬಂದರೂ ಕನ್ನಡ ನಾಡಿನ  ಜನತೆಯ ಜೀವನವನ್ನು ಕಷ್ಟಕ್ಕೆ ಈಡು ಮಾಡದೇ ಅವರ ಕಷ್ಟಗಳಿಗೆ ಸಹಾಯ ಮಾಡುವ  ಕೆಲಸ ಮಾಡುತ್ತಿದ್ದೇವೆ. ಪ್ರವಾಹ ಬಂದಾಗ ಜನ ತೊಂದರೆಗೀಡಾಗುತ್ತಾರೆ. ಬೆಳೆ ಪರಿಹಾರವನ್ನು ಕೇಂದ್ರ ಸರ್ಕಾರದ ಪರಿಹಾರದ ಜೊತೆಗೆ ರಾಜ್ಯ ಸರ್ಕಾರವೂ ಹೆಚ್ಚುವರಿಯಾಗಿ ಒದಗಿಸುವ ಮೂಲಕ ಎರಡು  ಪಟ್ಟು ಪರಿಹಾರ  ನೀಡಲಾಗಿದೆ. ನವಂಬರ್ ನಲ್ಲಿ  ಪ್ರವಾಹವಾದ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 1400 ಕೋಟಿ ರೂ. ಗಳ ಪರಿಹಾರವನ್ನು  ರೈತರಿಗೆ ನೀಡಲಾಗಿದೆ.. ಕೇಂದ್ರ ಸರ್ಕಾರಕ್ಕಿಂಥ ಹೆಚ್ಚಿನ ಪರಿಹಾರವನ್ನು ನೀಡಲಾಗುತ್ತಿದೆ. ಹಾವೇರಿಯಲ್ಲಿ ಮನೆಗಳಿಗೆ ಹಾನಿಗೊಳಗಾಗಿರುವ ಮನೆಗಳಿಗೆ ಪರಿಹಾರ ನೀಡಲಾಗುತ್ತಿದೆ ಎಂದರು.

ಜೆ.ಹೆಚ್.ಪಟೇಲರು ಕರ್ನಾಟಕ ರಾಜಕಾರಣದ ದಂತಕಥೆ : ರಾಜಕಾರಣಗಳಾಗಿ ಹೆಜ್ಜೆ ಗುರುತು ಬಿಟ್ಟು ಹೋಗಿರುವವರಲ್ಲಿ ಪ್ರಮುಖರಾದ ಜೆ.ಹೆಚ್ ಪಟೇಲರು ದೂರದೃಷ್ಟಿಯ ನಾಯಕ. ಜನಸಾಮಾನ್ಯರಿಗೆ ಒಳಿತು ಮಾಡುವ ವಿಚಾರವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡ ಧೀಮಂತ ನಾಯಕರಾಗಿದ್ದರು. ಪ್ರತಿಪಕ್ಷದಲ್ಲಿದ್ದಾಗ ಮಾಡಿದ ಹೋರಾಟಕ್ಕೆ ಅಧಿಕಾರಕ್ಕೆ ಬಂದಾಗ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದರು. ಜೆ.ಹೆಚ್. ಪಟೇಲರು ಕರ್ನಾಟಕ ರಾಜಕಾರಣದ ಒಂದು ದಂತಕಥೆ.  ಅವರ ರಾಜ್ಯದ ಬಗೆಗಿನ ಕಳಕಳಿ, ಸಮಸ್ಯೆಗಳ ಬಗ್ಗೆ ಆಳವಾದ ಜ್ಞಾನ, ತತ್ವಜ್ಞಾನಿಯಾಗಿದ್ದ  ಮುತ್ಸದ್ದಿ ರಾಜಕಾರಣಿಯಾಗಿದ್ದರು. ಒಬ್ಬ ರಾಜಕಾರಣಿಯ ಕಣ್ಣು ಮುಂದಿನ ಚುನಾವಣೆಯ ಮೇಲೆ‌‌ ಇದ್ದರೆ, ಮುತ್ಸದ್ದಿಯ ಕಣ್ಣು ಮುಂದಿನ ಜನಾಂಗದ ಮೇಲೆ ಇರುತ್ತದೆ. ಪಟೇಲರು ಎರಡನೇ ವರ್ಗದ ನಾಯಕರು ಎಂದರು.ರಾಜ್ಯದಲ್ಲಿ ದೊಡ್ಡ ಜನಸಂಖ್ಯೆ ಹೆಚ್ಚಿದಾಗ ಉತ್ತಮ ಆಡಳಿತ ನಡೆಸಲು ಅನುಕೂಲವಾಗುವಂತೆ ಪಟೇಲರು ಏಳು ಜಿಲ್ಲೆಗಳ ರಚನೆ, ಕರ್ನಾಟಕದ ಪ್ರಗತಿಯಲ್ಲಿ ಪ್ರಮುಖ ಮೈಲಿಗಲ್ಲು.ಈ ಎಲ್ಲ ಏಳು ಜಿಲ್ಲೆಗಳ ಜನತೆ ಇಂದಿಗೂ ಜೆ.ಹೆಚ್.ಪಟೇಲರನ್ನು ನೆನೆಯುತ್ತಾರೆ ಎಂದರು. 

ಹಾವೇರಿ ಜಿಲ್ಲೆಯ ಸಮಗ್ರ ಅಭಿವೃದ್ಧಿ : ಹಾವೇರಿ ಜಿಲ್ಲೆಯ ನೀರಾವರಿ, ಶಿಕ್ಷಣ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಸಾಧ್ಯವಾಗಿದೆ. ಜಿಲ್ಲೆಯಲ್ಲಿ ಎಂಜನಿಯರಿಂಗ್ ಕಾಲೆಜು, ಮೆಡಿಕಲ್ ಕಾಲೇಜು, ಮೆಗಾ ಡೈರಿ, ಇಂಡಸ್ಟ್ರಿಯಲ್ ಪಾರ್ಕ್, ಟೆಕ್ಸ್ಟೈಲ್ ಪಾರ್ಕ್ ಗಳ ನಿರ್ಮಾಣವಾಗುತ್ತಿದೆ. ಜನರ ಆಶೋತ್ತರಗಳು ಹೆಚ್ಚುತ್ತಿವೆ. ಜಿಲ್ಲೆಯ ಸ್ವರೂಪ ಪಡೆದುಕೊಂಡು ಅಭಿವೃದ್ಧಿಯ ಆಯಾಮ ದೊರೆತು 25 ವರ್ಷಗಳು ಸಂದಿರುವ ಸಂದರ್ಭದಲ್ಲಿ ಜಿಲ್ಲೆ ಹಾಗೂ ರಾಜ್ಯದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದರು.

ಟೀಕೆಟಿಪ್ಪಣಿಗಳೇ ಯಶಸ್ಸಿನ ಮೆಟ್ಟಿಲು: ಅಭಿವೃದ್ದಿ ರಾಜಕಾರಣ ಮಾಡಬೇಕು. ಒಂದು ತಿಂಗಳು ಚುನಾವಣೆ ಮಾಡೋಣ. ಘೋಡಾ ಹೈ ಮೈದಾನ್ ಹೈ.‌ ಜನ ಯಾರಿಗೆ ಆಶಿರ್ವಾದ ಮಾಡುತ್ತಾರೊ ಅವರು ಜನಪರ ಕೆಲಸ ಮಾಡೋಣ.ನಾನು ಯಾವುದೇ ಟೀಕೆ ಟಿಪ್ಪಣಿಗೆ ತಲೆ‌ ಕೆಡಿಸಿಕೊಳ್ಳದೆ ಅಭಿವೃದ್ದಿಪರ ಕೆಲಸ ಮಾಡುತ್ತಿದ್ದೇನೆ. 

ಜನಕಲ್ಯಾಣದ ಗುರಿ ವಿಚಲಿತವಾಗದಂತೆ ಕೆಲಸ ಮಾಡುತ್ತಿದ್ದೇನೆ.  ರಾಜಕಾರಣದಲ್ಲಿ ವಿರೋಧಿಗಳಿರಬೇಕು. ಟೀಕೆಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇನೆ. ಟೀಕೆಟಿಪ್ಪಣಿಗಳನ್ನ ಮೆಟ್ಟಿಲುಗಳನ್ನಾಗಿ ಯಶಸ್ಸು ಕಾಣುತ್ತೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News