ಚಿಂತಾಮಣಿ | ಕಳ್ಳತನದ ಆರೋಪ; ದಲಿತ ಬಾಲಕನನ್ನು ವಿದ್ಯುತ್‌ ಕಂಬಕ್ಕೆ ಕಟ್ಟಿ ಥಳಿತ

Update: 2022-10-01 09:46 GMT

ಚಿಕ್ಕಬಳ್ಳಾಪುರ: ಕಳ್ಳತನ ಆರೋಪ ಹೊರಿಸಿ ದಲಿತ ಬಾಲಕನೋರ್ವನನ್ನು ವಿದ್ಯುತ್‌ ಕಂಬಕ್ಕೆ ಕಟ್ಟಿ ಥಳಿಸಿರುವ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಜಿಲ್ಲೆಯ ಚಿಂತಾಮಣಿ ತಾಲೂಕಿನ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯ ಅಂಬಾಜಿ ದುರ್ಗ ಹೋಬಳಿಯ ಕೆಂಪದೇನಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ: ಚಾಮರಾಜನಗರ: ಭಾರತ್ ಜೋಡೊ ಯಾತ್ರೆಯಲ್ಲಿ 'PayCM' ಟೀಶರ್ಟ್ ಧರಿಸಿದ್ದ ಯುವಕನ ಬಂಧನ

ದೌರ್ಜನ್ಯಕ್ಕೆ ಒಳಗಾದ ಬಾಲಕನನ್ನು ಗ್ರಾಮದ ಆನಂದ ಎಂಬುವರ ಪುತ್ರ ಯಶ್ವಂತ್(16) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಅದೇ ಗ್ರಾಮದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ಗ್ರಾಮದಲ್ಲಿ ಮಕ್ಕಳೊಂದಿಗೆ ಬಾಲಕ ಯಶ್ವಂತ್ ಆಟವಾಡುತ್ತಿರುವಾಗ ನಾಗರಾಜ್‌ ಎಂಬುವರ ಪುತ್ರಿಯ ಓಲೆಯನ್ನು ಕದ್ದಿದ್ದಾನೆ ಎಂದು ಆರೋಪಿಸಿ ಬಾಲಕನನ್ನು ಗ್ರಾಮದ ಹಾಲಿನ ಡೇರಿ ಬಳಿ ವಿದ್ಯುತ್‌ ಕಂಬಕ್ಕೆ ಕಟ್ಟಿ ಹಾಕಿ ಗ್ರಾಮದ ಸವರ್ಣಿಯರಾದ ನಾರಾಯಣಸ್ವಾಮಿ, ನವೀನ, ನಂಜೆಗೌಡ, ಹರೀಶ್‌, ನಾಗರಾಜ್‌, ಅಂಬಿಕಾ, ದೊಡ್ಡೇಗೌಡ ಸೇರಿದಂತೆ ಹಲವರು ಹಿಗ್ಗಾಮಗ್ಗ ಥಳಿಸಿದ್ದಾರೆ ಎಂದು ಬಾಲಕನ ತಾಯಿ  ದೂರಿನಲ್ಲಿ ತಿಳಿಸಿದ್ದಾರೆ.

ಹಲ್ಲೆಯಿಂದ ತೀವ್ರ ಅಸ್ವಸ್ಥಗೊಂಡಿದ್ದ ಬಾಲಕನನ್ನು ಆತನ ತಾಯಿ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News