ಪರೇಶ್ ಮೇಸ್ತಾ ಸಾವನ್ನು 'ಹಿಂದೂಗಳ ಹತ್ಯೆ' ಎಂದು ಅರಚಾಡಿದ್ದ ಬಿಜೆಪಿಯವರು ಈಗ ಏನು ಹೇಳುತ್ತಾರೆ?: ಎಚ್.ಸಿ. ಮಹದೇವಪ್ಪ

Update: 2022-10-04 10:32 GMT

ಬೆಂಗಳೂರು: 'ಪರೇಶ್ ಮೇಸ್ತಾ ಸಾವನ್ನು ಹಿಂದೂಗಳ ಹತ್ಯೆ ಎಂದು ಮಾಧ್ಯಮಗಳ ಮೂಲಕ ಅರಚಾಡಿದ್ದ ಬಿಜೆಪಿ ಯವರು ಈಗ ಏನು ಹೇಳುತ್ತಾರೆ?' ಎಂದು ಮಾಜಿ ಸಚಿವ ಡಾ.ಎಚ್.ಸಿ ಮಹದೇವಪ್ಪ ಪ್ರಶ್ನೆ ಮಾಡಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಅವರು, ''ಇತ್ತೀಚೆಗೆ ಪರೇಶ್ ಮೇಸ್ತಾ ಕೊಲೆ ಆರೋಪಿ ಎನ್ನಲಾದ ವ್ಯಕ್ತಿಯೋರ್ವನಿಗೆ ಸರ್ಕಾರದ ಒಳಗೆ ಸ್ಥಾನ ಕೊಟ್ಟ ಸುದ್ದಿ ವರದಿಯಾಗಿರುವುದು ಸಿಬಿಐ ನೀಡಿರುವ ರಿಪೋರ್ಟ್ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ'' ಎಂದು ಹೇಳಿದ್ದಾರೆ. 

''ಈ ಸಂಗತಿಯ ಆಚೆಗೆ ಹಿಂದೂಗಳ ಹತ್ಯೆ ಎನ್ನುತ್ತಾ ಶವ ರಾಜಕೀಯ ಮಾಡುವ ಶೋಭಾ ಕರಂದ್ಲಾಜೆ, ಅನಂತಕುಮಾರ್ ಹೆಗಡೆ, ಸಿಟಿ ರವಿ, ಡಾಲರ್ ತಜ್ಞ ನಳಿನ್ ಕುಮಾರ್ ಕಟೀಲ್ ಅವರು ಈ ವೇಳೆ ರಾಜ್ಯದ ಜನರ ಮುಂದೆ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸುತ್ತೇನೆ!'' ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. 

ಇದನ್ನೂ ಓದಿ: ಪರೇಶ್ ಮೇಸ್ತಾ ಹತ್ಯೆ ಆರೋಪಿಗೆ ಜಿಲ್ಲಾ ವಕ್ಘ್ ಮಂಡಳಿ ಉಪಾಧ್ಯಕ್ಷ ಸ್ಥಾನ; ವಿರೋಧದ ಬಳಿಕ ಆದೇಶಕ್ಕೆ ತಡೆ

ಹೊನ್ನಾವರ ಪರೇಶ್ ಮೇಸ್ತಾ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ತನಿಖಾ ವರದಿಯನ್ನು ಹೊನ್ನಾವರ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ವರದಿಯಲ್ಲಿ ಪರೇಶ್ ಮೇಸ್ತಾ ಸಾವು ಹತ್ಯೆಯಲ್ಲ, ಆಕಸ್ಮಿಕವಾಗಿ ಸಾವು ಎಂದು ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News