ಜೋಡೊ ಯಾತ್ರೆಯಲ್ಲಿ ಸಿದ್ದರಾಮಯ್ಯ ಕ್ಷೇತ್ರ ಹುಡುಕುತ್ತಿದ್ದಾರೆ: ನಳಿನ್ ಕುಮಾರ್ ಕಟೀಲ್ ವ್ಯಂಗ್ಯ
ಗದಗ: 'ಸಿದ್ದರಾಮಯ್ಯ ತಿರುಕನ ಕನಸು ಕಾಣುತ್ತಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ಇಬ್ಬರನ್ನು ಜೋಡಿಸುವ ಯಾತ್ರೆ ಇದಾಗಿದೆ. ಸಿದ್ದರಾಮಯ್ಯ ರಾಹುಲ್ ಗಾಂಧಿ ಜೊತೆ ಕ್ಷೇತ್ರ ಹುಡುಕುವ ಯಾತ್ರೆ ಮಾಡುತ್ತಿದ್ದಾರೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಗದಗ ಜಿಲ್ಲೆಯ ರೋಣ ವಿಧಾನಸಭೆ ಕ್ಷೇತ್ರದಲ್ಲಿ 'ಬಿಜೆಪಿ ಜನ ಸಂಪರ್ಕ ಯಾತ್ರೆ'ಯ ಪೂರ್ವಭಾವಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
'ಸಿದ್ದರಾಮಯ್ಯ ಅವರು ವರುಣ ಕ್ಷೇತ್ರದಿಂದ ಓಡಿ ಹೋಗಿದ್ದಾರೆ. ಕೋಲಾರ ಭಾಗಕ್ಕೆ ಹೋದರೆ ಜನ ಓಡಿಸುತ್ತಾರೆ. ಮೈಸೂರಿನವರು ಬರಬೇಡಿ ಅಂತ ಹೇಳಿದ್ದಾರೆ. ಹೀಗಾಗಿ ಜೋಡೊ ಯಾತ್ರೆ ಜೊತೆ ಎಲ್ಲಾದರೂ ಸೀಟ್ ಸಿಗುತ್ತಾ ಅಂತ ಕ್ಷೇತ್ರ ಹುಡುಕುತ್ತಿದ್ದಾರೆ. ಮುಂದೆ ಕರ್ನಾಟಕದಲ್ಲಂತೂ ಅವರಿಗೆ ಸೀಟ್ ಸಿಗೋದು ಕಷ್ಟ, ರಾಹುಲ್ ಗಾಂಧಿ ಜೊತೆ ಉತ್ತರ ಪ್ರದೇಶಕ್ಕೆ ಹೋಗಲಿ' ಎಂದು ವ್ಯಂಗ್ಯವಾಡಿದರು.
'ಮುಂಬರುವ ಚುನಾವಣೆಗೂ ಮೊದಲೇ ರಾಜ್ಯದಲ್ಲಿ ಕಾಂಗ್ರೆಸ್ 2 ಹೋಳಾಗಲಿವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪಕ್ಷ ಅಂತ ಆಗಲಿದೆ. ಮೂರನೇ ಶಕ್ತಿ ಕೇಂದ್ರವೂ ನಿರ್ಮಾಣವಾಗುತ್ತಿದೆ. ಅದು ಖರ್ಗೆ ಗ್ಯಾಂಗ್. ಖರ್ಗೆ ಅಧ್ಯಕ್ಷರಾದ ಮೇಲೆ ಸಿದ್ದರಾಮಯ್ಯಗೆ ಕಾಂಗ್ರೆಸ್ನಲ್ಲಿ ಜಾಗವಿಲ್ಲ' ಎಂದು ಹೇಳಿದರು.