ನಕಲಿ ಚಿನ್ನದ ನಾಣ್ಯ ನೀಡಿ ವಂಚನೆ ಆರೋಪ: ಮೂವರ ಬಂಧನ

Update: 2022-10-16 13:30 GMT

ಚಿಕ್ಕಮಗಳೂರು, ಅ.16: ನಗರದ ವ್ಯಕ್ತಿಯೊಬ್ಬರಿಗೆ ಚಿನ್ನದ ನಾಣ್ಯ ತೋರಿಸಿ ನಂತರ ತಾಮ್ರದ ನಾಣ್ಯಕೊಟ್ಟು ಫೋನ್ ಪೇ ಮೂಲಕ ಹಣ ಪಡೆದು ವಂಚಿಸಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಸಿದಾರೆ.

ವಿಜಯನಗರ ಜಿಲ್ಲೆ ಹರಪನಹಳ್ಳಿಯ ಶ್ರೀನಿವಾಸನಾಯ್ಕ(21), ಕೋಟಿನಾಯ್ಕ(28), ವೆಂಕಟೇಶ್‍ನಾಯ್ಕ ಬಂಧಿತರು. ಆರೋಪಿಗಳಿಂದ  5 ಸಾವಿರ ರೂ. ನಗದು, 1ಕಾರು, ಎರಡು ಚಿನ್ನದ ನಾಣ್ಯ, 1.95 ಕೆಜಿ ತಾಮ್ರದ ನಾಣ್ಯ, 3 ಮೊಬೈಲ್ ಫೋನ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಾಫಿ ಎಸ್ಟೇಟ್ ಒಂದರಲ್ಲಿ ನಗರದ ಕೆ.ಮಹೇಶ್ ಮತ್ತು ಹರಪನಹಳ್ಳಿಯ ಶ್ರೀನಿವಾಸ್ ಅವರಿಗೆ ಪರಿಚಯವಾಗಿತ್ತು.ಇತ್ತೀಚೆಗೆ ಮಹೇಶ್ ಅವರಿಗೆ ಫೋನಾಯಿಸಿದ್ದ ಶ್ರೀನಿವಾಸನಾಯ್ಕ ತನ್ನ ಬಳಿ 2 ಕಿಲೋ ಚಿನ್ನದ ನಾಣ್ಯಗಳಿವೆ. ಕಡಿಮೆ ಅಂದರೆ 5 ಲಕ್ಷಕ್ಕೆ ಕೊಡುವುದಾಗಿ ಪುಸಲಾಯಿಸಿದ್ದಾನೆ. ಮೂವರು ಕಾರಿನಲ್ಲಿ ಚಿಕ್ಕಮಗಳೂರಿಗೆ ಬಂದು ಎರಡು ಅಸಲಿ ಚಿನ್ನದ ನಾಣ್ಯಗಳನ್ನು ಮಹೇಶ್ ಅವರಿಗೆ ಕೊಟ್ಟು ಅಸಲಿಯತ್ತು ಪರಿಶೀಲಿಸುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.

ಇದನ್ನು ಪರಿಶೀಲಿಸಿದಾಗ ಅವು ಅಸಲಿ ನಾಣ್ಯ ಎಂದು ಗೊತ್ತಾಗಿದೆ. ನಂತರ ಮಹೇಶ್ ಆರೋಪಿಗಳಿಂದ 20 ನಾಣ್ಯಗಳನ್ನು ಪಡೆದುಕೊಂಡು ಗೂಗಲ್ ಪೇ ಮೂಲಕ 5 ಸಾವಿರ ಹಣ ನೀಡಿದ್ದಾರೆ. ಮಹೇಶ್ ಅವರು 20 ನಾಣ್ಯಗಳನ್ನು ಅಕ್ಕಸಾಲಿಗರಿಗೆ ಕೊಟ್ಟು ಪರೀಕ್ಷೆ ಮಾಡಿಸಿದಾಗ ಅವು ತಾಮ್ರದ ನಾಣ್ಯಗಳು ಎಂದು ಗೊತ್ತಾಗಿದೆ. 

ಈ ಸಂಬಂಧ ವಂಚನೆಗೊಳಗಾದ ಮಹೇಶ್ ನಗರದ ಸಿಇಎನ್ ಠಾಣೆಯಲ್ಲಿ ದೂರು ದಾಖಸಿದ್ದರು. ಸಿಇಎನ್ ಇನ್‍ಸ್ಪೆಕ್ಟರ್ ಮುತ್ತುರಾಜ್, ಪಿಎಸ್ಸೈ ನಾಸಿರ್‍ಹುಸೇನ್ ಮತ್ತು ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News