ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ: ಮಂಡ್ಯ ಜೆಲ್ಲೆಯಲ್ಲಿ ಟ್ಯೂಷನ್ ಕೇಂದ್ರಗಳ ನಿಯಂತ್ರಣಕ್ಕೆ ಆಗ್ರಹ
ಮಂಡ್ಯ, ಅ.18: ಜಿಲ್ಲೆಯಾದ್ಯಂತ ನಾಯಿಕೊಡೆಯಂತೆ ತಲೆ ಎತ್ತಿರುವ ಟ್ಯೂಷನ್ ಕೇಂದ್ರಗಳನ್ನು ನಿಯಂತ್ರಿಸಲು ಸರಕಾರ ಹಾಗೂ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಅಂಜನಾ ಶ್ರೀಕಾಂತ್ ಆಗ್ರಹಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳವಳ್ಳಿ ಪಟ್ಟಣದಲ್ಲಿ ನಡೆದ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಟ್ಯೂಷನ್ ಕೇಂದ್ರಗಳ ಮೇಲೆ ಸರಕಾರದ ಯಾವುದೇ ಹಿಡಿತ ಇಲ್ಲದಿರುವುದೇ ಕಾರಣವಾಗಿದೆ ಎಂದು ಆರೋಪಿಸಿದರು.
ಈಗಿನ ಪರಿಸ್ಥಿತಿಯಲ್ಲಿ ಯಾರು ಬೇಕಾದರೂ ಬೋರ್ಡ್ ಹಾಕಿಕೊಂಡು ಟ್ಯೂಷನ್ ನಡೆಸಬಹುದಾಗಿದೆ. ಇದರ ಅರಿವಿಲ್ಲದ ಪೋಷಕರು, ಮಕ್ಕಳು ಮೋಸಕ್ಕೊಳಗಾಗುತ್ತಿದ್ದಾರೆ. ಆದ್ದರಿಂದ ಟ್ಯೋಷನ್ ಕೇಂದ್ರಗಳ ಮೇಲೆ ಸರಕಾರ ಜಾಗ್ರತೆವಹಿಸಬೇಕು ಎಂದು ಅವರು ಹೇಳಿದರು.
ಮಳವಳ್ಳಿಯ ಬಾಲಕಿಯನ್ನು ಅತ್ಯಾಚಾರವೆಸಗಿ ಹತ್ಯೆ ಮಾಡಿರುವ ಅತ್ಯಂತ ಅಮಾನುಷ ಕೃತ್ಯವಾಗಿದೆ. ಆರೋಪಿಗೆ ಗರಿಷ್ಠ ಶಿಕ್ಷೆ ಕೊಡಿಸುವ ಕೆಲಸವನ್ನು ಸರಕಾರ ಮಾಡಬೇಕು. ಹಾಗೆಯೇ ಕಠಿಣ ಕಾನೂನನ್ನು ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಬೇಲೂರು ಗ್ರಾಪಂ ಸದಸ್ಯೆ ಸುವರ್ಣಾವತಿ, ಮಹಿಳಾ ಮುಖಂಡರಾದ ಗೀತಾ, ಪವಿತ್ರ, ಶಕುಂತಲಾ, ಹೀನಾ ಹಾಗೂ ಮಂಗಳಗೌಡ ಉಪಸ್ಥಿತರಿದ್ದರು.