ದೆವ್ವ ಕರೆಯಿತೆಂದು ಆಣೆ ಪ್ರಮಾಣ ಮಾಡಲು ಹೋಗೋಕೆ ಆಗುತ್ತಾ?: ಸಂಸದೆ ಸುಮಲತಾಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ತಿರುಗೇಟು

Update: 2022-10-19 15:03 GMT
ರವೀಂದ್ರ ಶ್ರೀಕಂಠಯ್ಯ | ಸುಮಲತಾ ಅಂಬರೀಶ್

ಮೈಸೂರು,ಅ.19:  ಜೆಡಿಎಸ್ ಶಾಸಕರನ್ನು ಆಣೆ ಪ್ರಮಾಣ ಮಾಡಲು ದೇವಸ್ಥಾನಕ್ಕೆ ಕರೆದ ಸಂಸದೆ ಸುಮಲತಾ ಅಂಬರೀಶ್ ಹೇಳಿಕೆಗೆ ಶ್ರೀರಂಗಪಟ್ಟಣದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಸಂಸದೆ ಸುಮಲತಾ ಜೆಡಿಎಸ್ ಶಾಸಕರನ್ನು ಆಣೆ ಮಾಡಲು ದೇವಾಲಯಕ್ಕೆ ಕರೆದಿದ್ದಾರೆ. ದೆವ್ವ ಕರೆಯತ್ತದೆ ಎಂದು ದೇವಾಲಯಕ್ಕೆ ಹೋಗೋಕೆ ಆಗುತ್ತದಾ, ಜೆಡಿಎಸ್ ಶಾಸಕರು ದೇವರನ್ನು ನಂಬುವವರು ದಿನ ಬೆಳಗಾದರೆ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ನಮ್ಮನ್ನು ಆಣೆ ಪ್ರಮಾಣಕ್ಕೆ ಕರೆಯೋದಕ್ಕೆ ಇವರು ಯಾರು, ಇದು ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತೆ ಆಗುತ್ತಿದೆ. ದೆವ್ವ ಕರೆದರೆ ನಾವು ಹೋಗಲು ಸಾಧ್ಯವೇ?'' ಎಂದು ತಿರುಗೇಟು ನೀಡಿದರು.

''ಇನ್ನು ಬೆಂಗಳೂರು-ಮೈಸೂರು ಹೈವೇ ಕಾಮಗಾರಿಯಲ್ಲಿ ನೂರಾರು ಕೋಟಿ ಅಕ್ರಮ ನಡೆಸಿರುವವರು ಸುಮಲತಾ ಬೆಂಬಲಿಗರು. ಬೆಂಗಳೂರಿನ ಏಟ್ರಿಯಾ ಹೋಟೆಲ್‍ಗೆ ಸುಮಲತಾ ಏಕೆ ಹೋಗಿದ್ದರು. ಅಲ್ಲಿ ಏನನ್ನು ಡೀಲ್ ಮಾಡಿದರು ಎಂಬ ವಿಡಿಯೋ ದಾಖಲೆ ನಮ್ಮ ಬಳಿಯಿದೆ. ಅದನ್ನು ಸೂಕ್ತ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುವುದು. ಈಗಾಗಲೇ ಸಂಸದೆ ಸುಮಲತಾ ವಿರುದ್ಧ ಮಂಡ್ಯ ಜನರು ತಿರುಗಿ ಬಿದ್ದಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಜನರೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ'' ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News