ಚನ್ನರಾಯಪಟ್ಟಣ: ಶಾಲೆಗೆ ಹೋಗುತ್ತಿದ್ದಾಗ ನೀರಿನಲ್ಲಿ ಕೊಚ್ಚಿ ಹೋಗಿ ಬಾಲಕಿ ಮೃತ್ಯು

Update: 2022-10-20 14:21 GMT
ರಂಜಿತಾ - ಮೃತ ಬಾಲಕಿ

ಚನ್ನರಾಯಪಟ್ಟಣ: ಬಾಗೂರು ಹೋಬಳಿಯ ದಡ್ಡಿಹಳ್ಳಿ ಕೆರೆ ಕೋಡಿ ಬಿದ್ದಿದ್ದು,  ಬೈಕ್ ನಲ್ಲಿ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಕೊಚ್ಚಿ ಹೋಗಿರುವ ಘಟನೆ ವರದಿಯಾಗಿದೆ. 

ಹೆಗ್ಗಡಗೆರೆ ಗ್ರಾಮದ ರಾಜಾಭೋವಿ ಎಂಬುವರ ಪುತ್ರಿ 5ನೇ ತರಗತಿಯ ರಂಜಿತಾ ಮೃತಪಟ್ಟಿರುವ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ.  

ಗುರುವಾರ ತನ್ನ ಸಂಬಂಧಿಯ ಜೊತೆಗೆ ಬಾಲಕಿ ಬೈಕ್ ನಲ್ಲಿ ಶಾಲೆಗೆ ತೆರಳುತ್ತಿದ್ದಳು. ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಕೆರೆ ಕೋಡಿಯಲ್ಲಿ ರಭಸವಾಗಿ ನೀರು ಹರಿಯುತಿತ್ತು. ನೀರಿನ ರಭಸಕ್ಕೆ ಬೈಕ್ ಕೊಚ್ಚಿಕೊಂಡು ಹೋಗಿದೆನ್ನಲಾಗಿದೆ. ಈ ವೇಳೆ ಬೈಕ್ ಜಾರಿಬಿದ್ದು ರಂಜಿತಾ ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ ಎಂದು ಹೇಳಲಾಗಿದೆ.

ಗ್ರಾಮಸ್ಥರು ಬೈಕ್ ಓಡಿಸುತ್ತಿದ್ದ ಯುವಕನನ್ನು ರಕ್ಷಿಸಿದ್ದಾರೆ. ಆದರೆ, ಬಾಲಕಿ ರಂಜಿತಾ ನೀರಿನಲ್ಲಿ ಮುಳುಗಿ‌ ಮೃತಪಟ್ಟಿದ್ದಾಳೆನ್ನಲಾಗಿದೆ.

ಕೂಡಲೇ ಸ್ಥಳೀಯರು ಕಾರ್ಯಪ್ರವೃತ್ತರಾಗಿ ಮೃತ ದೇಹವನ್ನು ಹೊರ ತೆಗೆದಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಹಾಗೂ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News