ಮಂಡ್ಯ: ವಿದ್ಯುತ್​ ಪ್ರವಹಿಸಿ​ ಇಬ್ಬರು ಛಾಯಾಗ್ರಾಹಕರು ಮೃತ್ಯು

Update: 2022-10-22 11:25 GMT
ಮೃತ ಯುವರು

ಮಂಡ್ಯ, ಅ.22: ಅಂಗಡಿಯ ಮುಂಭಾಗ ಬ್ಯಾನರ್ ಕಟ್ಟುವ ವೇಳೆ ವಿದ್ಯುತ್​ ಪ್ರವಹಿಸಿ ಇಬ್ಬರು ಯವಕರು ಸಾವನ್ನಪ್ಪಿದ ಘಟನೆ ಮದ್ದೂರು ತಾಲೂಕು ಬೆಸಗರಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ. 

ಮದ್ದೂರು ತಾಲೂಕು, ಮರಳಿಗ ಗ್ರಾಮದ ವಿವೇಕ್ ಹಾಗೂ ಗೆಜ್ಜಲಗೆರೆ ಗ್ರಾಮದ ಮಧು ಮೃತ ಯುವಕರು ಎಂದು ತಿಳಿದು ಬಂದಿದೆ.

ವಿವೇಕ್, ಬೆಸಗರಹಳ್ಳಿ ಗ್ರಾಮದಲ್ಲಿ ಮಹಡಿ ಮೇಲಿನ ಒಂದರ ಕೊಠಡಿಯಲ್ಲಿ ಫೋಟೋ ಸ್ಟುಡಿಯೋ ನಡೆಸುತ್ತಿದ್ದರು. ಇವರ ಸಹಾಯಕರಾಗಿ ಮಧು ಕೆಲಸ ಮಾಡುತ್ತಿದ್ದರೆನ್ನಲಾಗಿದೆ.

ಶನಿವಾರ ಬೆಳಗ್ಗೆ ಸುಮಾರು 11 ಗಂಟೆ ವೇಳೆಯಲ್ಲಿ ಇಬ್ಬರೂ ತಮ್ಮ ಸ್ಟುಡಿಯೋದ ಮುಂಭಾಗ ಬ್ಯಾನರ್ ಕಟ್ಟುವ ವೇಳೆ ಆಕಸ್ಮಿಕವಾಗಿ ಕೈ ಜಾರಿ ಎದುರಿನ ವಿದ್ಯುತ್ ತಂತಿಯ ಮೇಲೆ ಬಿದ್ದು ಆ ಬ್ಯಾನರ್ ಗೆ ಅಳವಡಿಸಿದ್ದ ಕಬ್ಬಿಣದ ಪಟ್ಟಿಗಳ ಮೂಲಕ ವಿದ್ಯುತ್ ಪ್ರವಹಿಸಿ ಇಬ್ಬರು ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳದಿಂದ ಕೂಡಲೇ ಸಾರ್ವಜನಿಕರು ಇಬ್ಬರನ್ನು ಹತ್ತಿರದಲ್ಲಿ ಇದ್ದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಿದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸಾಗಿಸುವ ವೇಳೆ ಇಬ್ಬರೂ ಮಾರ್ಗಮಧ್ಯದಲ್ಲಿ ಸಾವನಪ್ಪಿದ್ದರು.

 ಈ ಸಂಬಂಧ ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News