ಶಿವಮೊಗ್ಗ | ಹರ್ಷ ಸಹೋದರಿ ಸಹಿತ 15 ಮಂದಿಯ ವಿರುದ್ಧ ಎಫ್ಐಆರ್ ದಾಖಲು

Update: 2022-10-26 09:05 GMT

ಶಿವಮೊಗ್ಗ, ಅ.24: ಮನೆ ಎದುರು ನಿಲ್ಲಿಸಿದ್ದ ಕಾರನ್ನು ಗುಂಪೊಂದು ಜಖಂಗೊಳಿಸಿದ ಘಟನೆ ಆಝಾದ್ ನಗರದಲ್ಲಿ ರವಿವಾರ ನಡೆದಿದ್ದು, ಈ ಬಗ್ಗೆ ಕೆಲ ತಿಂಗಳ ಹಿಂದೆ ಕೊಲೆಯಾದ ಹರ್ಷ ಅವರ ಸಹೋದರಿ ಸಹಿತ 15 ಮಂದಿಯ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಆಝಾದ್ ನಗರದ ಸೈಯದ್ ಫರ್ವೀಝ್ ಎಂಬವರಿಗೆ ಸೇರಿದ ಕಾರನ್ನು ದುಷ್ಕರ್ಮಿಗಳು ಹಾನಿಗೀಡು ಮಾಡಿದ್ದಾರೆ.

ಅ.22 ರಂದು ಸಂಜೆ ಗುಂಪೊಂದು 'ಸಾವರ್ಕರ್ ಸಾಮ್ರಾಜ್ಯ' ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಆ ಪ್ರಯುಕ್ತ ನಗರದಲ್ಲಿ  ಬೈಕ್ ಜಾಥಾ ಆಯೋಜಿಸಿತ್ತು. ನಗರದ ಅಮೀರ್ ಅಹ್ಮದ್ ವೃತ್ತದಿಂದ ಹೊರಟ ಬೈಕ್ ಜಾಥಾ, ಕಲ್ಲಪ್ಪನ ಕೇರಿಯಲ್ಲಿ ಸಾಗಿದೆ. ಜಾಥಾವು ಫರ್ವೀಝ್ ಮನೆ ಮುಂದೆ ಹಾದು ಹೋಗಿದ್ದು, ಈ ವೇಳೆ ಮನೆ ಮುಂದೆ ನಿಲ್ಲಿಸಿದ್ದ ಫರ್ವೀಝ್ ರ ಕಾರನ್ನು ಜಖಂಗೊಳಿಸಿದ್ದಾರೆ. ಕೇಸರಿ ಬಾವುಟ ಹಿಡಿದುಕೊಂಡು ಬಂದಿದ್ದ 10ರಿಂದ 15 ಜನರಿದ್ದ ಗುಂಪು 'ಜೈ ಶ್ರೀರಾಮ್' ಎಂದು ಘೋಷಣೆ ಕೂಗುತ್ತಾ ತನ್ನ ಕಾರಿನ ಎಡಭಾಗದ ಹೆಡ್ ಲೈಟ್, ಸೈಡ್ ಡೋರ್, ಬ್ಯಾಕ್ ಸೈಡ್ ಮಡ್ ಗಾರ್ಡ್ ನ್ನು ಜಖಂಗೊಳಿಸಿದೆ. ಈ ಜಾಥಾದಲ್ಲಿ ಕೆಲ ತಿಂಗಳ ಹಿಂದೆ ದುಷ್ಕರ್ಮಿಗಳಿಂದ ಕೊಲೆಯಾದ ಹರ್ಷ ಅವರ ಸಹೋದರಿ, ಸೀಗೆಹಟ್ಟಿ ನಿವಾಸಿ ಅಶ್ವಿನಿ ಕೂಡ ಭಾಗಿಯಾಗಿದ್ದರು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಫರ್ವೀಝ್ ತಿಳಿಸಿದ್ದಾರೆ.

ಈ ದೂರಿನಂತೆ ಆರೋಪಿಗಳ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News