ಕಡೂರು | ಬಾಸೂರು ಕಾವಲ್ ಹುಲ್ಲುಗಾವಲು ಸಂರಕ್ಷಣೆಗೆ ಅಧಿಕಾರಿಗಳಿಂದ ನಿರ್ಲಕ್ಷ್ಯ: ಪರಿಸರವಾದಿಗಳ ಆರೋಪ

ಅಮೃತ್ ಮಹಲ್ ಜಾನುವಾರು, ವನ್ಯಜೀವಿಗಳಿಗೆ ಮೇವು ಕೊರತೆ ಆತಂಕ

Update: 2022-10-28 14:21 GMT

ಚಿಕ್ಕಮಗಳೂರು, ಅ.28: ಜಿಲ್ಲೆಯ ಕಡೂರು ತಾಲೂಕಿ ಅಮೃತ್ ಮಹಲ್ ಕಾವಲ್ ಜಾನುವಾರ ಸಂರಕ್ಷಣೆಗೆ ಮೀಸಲಾಗಿರುವ ಪ್ರದೇಶದ ಪೈಕಿ ಬಾಸೂರು ಕಾವಲ್ ಐತಿಹಾಸಿಕ ಹುಲ್ಲುಗಾವಲಾಗಿದ್ದು, ಅದನ್ನು ರಕ್ಷಿಸಬೇಕಾದ ಇಲಾಖೆಗಳ ಉಪೇಕ್ಷೆಯಿಂದಾಗಿ ವನ್ಯಪ್ರಾಣಿಗಳು ಹಾಗೂ ಅಮೃತ್‍ಮಹಲ್ ಜಾನುವಾರು ತಳಿಗಳಿಗೆ ಮೇವು ಸಿಗದ ಪರಿಸ್ಥಿತಿ ತಲೆದೋರುತ್ತಿದೆ ಎಂದು ಭದ್ರಾ ವೈಲ್ಡ್‍ಲೈಫ್ ಕನ್ಸರ್ವೇಶನ್ ಟ್ರಸ್ಟ್‍ನ ಡಿ.ವಿ.ಗಿರೀಶ್, ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಸ.ಗಿರಿಜಾಶಂಕರ, ವೈಲ್ಡ್‍ಕ್ಯಾಟ್-ಸಿ ಸಂಸ್ಥೆಯ ಶ್ರೀದೇವ್ ಹುಲಿಕೆರೆ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,  'ಅಮೃತ್‍ಮಹಲ್ ಕಾವಲ್ ಇಂದು ನಿನ್ನೆಯ ವಿಶೇಷ ಹುಲ್ಲುಗಾವಲಲ್ಲ. ಅದಕ್ಕೆ 400 ವರ್ಷಗಳ ಇತಿಹಾಸವಿದೆ. ವಿಜಯನಗರದ ಅರಸರಿಂದ ಹಿಡಿದು ಮೈಸೂರು ಅರಸರವರೆಗೆ ಕನ್ನಡನಾಡಿನ ವಿಶೇಷ ಗೋವಿನ ತಳಿಯಾದ ಅಮೃತ್‍ಮಹಲ್ ಹಾಗೂ ವನ್ಯಪ್ರಾಣಿಗಳ ಆಹಾರ ತಾಣವಾಗಿದ್ದ ಈ ಹುಲ್ಲುಗಾವಲು ಸಂರಕ್ಷಣಾ ಪ್ರದೇಶವಾಗಿದ್ದು,  ಈಗಲೂ ಸಹ ಆ ತಳಿಗಳ ಮತ್ತು ಹಲವು ವಿಶೇಷ ರೀತಿಯ ವನ್ಯಮೃಗಗಳ ಆವಾಸಸ್ಥಾನವೂ ಆಗಿದೆ' ಎಂದು ತಿಳಿಸಿದ್ದಾರೆ. 

'ಅಮೃತ್‍ಮಹಲ್ ತಳಿಗಳನ್ನು ಸಂರಕ್ಷಣೆ ಮಾಡಿ ಅಭಿವೃದ್ಧಿಪಡಿಸಲು ಈ ಹುಲ್ಲುಗಾವಲನ್ನು ಯಾವುದೇ ರೀತಿಯ ಅನ್ಯ ಚಟುವಟಿಕೆಗಳಿಗೆ ಬಳಸದೆ ಸಂರಕ್ಷಿಸಲಾಗುತ್ತಿದೆ. ಈ ಜಿಲ್ಲೆಯಲ್ಲಿ ಕಾವಲ್‍ಸ್ವರೂಪದಲ್ಲಿ ಉಳಿದಿರುವ ಬಾಸೂರು ಕಾವಲ್ 1820 ಎಕರೆ ವಿಸ್ತೀರ್ಣವಿದ್ದು, ಈ ಕಾವಲ್‍ನಲ್ಲಿ ಅಮೃತ್‍ಮಹಲ್ ತಳಿಗಳ ಜೊತೆಗೆ ಕೃಷ್ಣಮೃಗ, ತೋಳ ಮತ್ತು ನರಿ ಹಾಗೂ ಅತ್ಯಂತ ಅಪರೂಪದ ಪಕ್ಷಿಗಳು ಜೀವಿಸುತ್ತಿವೆ' ಎಂದು ವಿವರಿಸಿದ್ದಾರೆ. 

'ಈ ಹುಲ್ಲುಗಾವಲು ಬಯಲುಸೀಮೆಯ ಮಳೆನೀರು ಹೀರುವ ಸೋಸುಕಗಳೂ ಆಗಿದ್ದು, ಇದನ್ನು ಯಾವುದೇ ರೀತಿ ಅನ್ಯ ಉದ್ದೇಶಕ್ಕೆ ಬಳಸದಂತೆ ನ್ಯಾಯಾಲಯದ ಆದೇಶವೂ ಇದೆ. ಹಿಂದೆ ಈ ಹುಲ್ಲುಗಾವಲನ್ನು ಹಲವರು ಒತ್ತುವರಿ ಮಾಡಿದ್ದು, ನ್ಯಾಯಾಲಯದ ಆದೇಶದ ಅನ್ವಯ ತೆರವುಗೊಳಿಸಲಾಗಿದೆ. ಸರಕಾರವೂ ಸಹ ಈ ಹುಲ್ಲುಗಾವಲನ್ನು `ಸಮುದಾಯ ಸಂರಕ್ಷಿತ ಪ್ರದೇಶ'ವೆಂದು ಘೋಷಣೆ ಮಾಡಿದೆ' ಎಂದು ತಿಳಿಸಿದರು. 

'ವಿಪರ್ಯಾಸವೆಂದರೆ ಇತ್ತೀಚೆಗೆ ನ್ಯಾಯಾಲಯ ಹಾಗೂ ಸರಕಾರ ಆದೇಶ, ಸೂಚನೆಗಳನ್ನು ಲೆಕ್ಕಿಸದೆ ಇದನ್ನು ಸಂರಕ್ಷಿಸಬೇಕಾದ ಪಶು ಸಂಗೋಪನಾ ಇಲಾಖೆ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಈ ಹುಲ್ಲುಗಾವಲಲ್ಲಿ ಖಾಸಗಿ ವ್ಯಕ್ತಿಗಳ ಸಾವಿರಾರು ಕುರಿಗಳನ್ನು ಮೇಯಿಸಲು ಅವಕಾಶ ಮಾಡಿಕೊಡುತ್ತಿದ್ದಾರೆ. ಕುರಿಗ¼ನ್ನು ಮೇಯಿಸಲು ಬಾಸೂರು ಕಾವಲ್ ಹುಲ್ಲುಗಾವಲು ಪ್ರದೇಶದಲ್ಲಿ ಅವಕಾಶವೇ ಇಲ್ಲ. ಜೊತೆಗೆ ಬೇರೆ ಜಾನುವಾರುಗಳನ್ನೂ ಇಲ್ಲಿ ಮೇಯಲು ಬಿಡುವಂತಿಲ್ಲ. ಆದರೆ ಈ ಎರಡೂ ಇಲಾಖೆ ಸಿಬ್ಬಂದಿ ಇದನ್ನು ಲೆಕ್ಕಿಸದೆ ಕುರಿ ಹಿಂಡನ್ನು ಮೇಯಲು ಅನುಮತಿ ನೀಡುತ್ತಿದ್ದು, ಅನುಮತಿ ನೀಡುವಾಗ ಅವರಿಂದ ಒಂದು ಅಥವಾ ಎರಡು ಕುರಿಗಳನ್ನು ಭಕ್ಷೀಸಾಗಿ ಪಡೆಯುತ್ತಿದ್ದಾರೆ' ಎಂದು  ಅವರು ಪರಿಸರವಾದಿಗಳು ಆರೋಪಿಸಿದ್ದಾರೆ. 

'ಈ ಹುಲ್ಲುಗಾವಲಲ್ಲಿ ಅಮೃತ್ ಮಹಲ್ ತಳಿ ಹಾಗೂ ಅಲ್ಲಿರುವ ವನ್ಯಜೀವಿಗಳ ಹೊರತು ಇನ್ಯಾವುದೇ ಖಾಸಗಿ ಜಾನುವಾರುಗಳು ಮೇಯಲು ಬಂದಲ್ಲಿ ಅವುಗಳನ್ನು ವಶಪಡಿಸಿಕೊಂಡು ಅವುಗಳ ಮಾಲಕರ ಮೇಲೆ ದಂಡ ವಿಧಿಸಲು ಅವಕಾಶವಿದೆ. ಆದರೆ ಅರಣ್ಯ ಹಾಗೂ ಪಶುಸಂಗೋಪನಾ ಸಿಬ್ಬಂದಿ ಈ ರೀತಿ ಯಾವುದೇ ನಿಯಂತ್ರಣಕ್ಕೂ ಮುಂದಾಗದೇ ಈ ಹುಲ್ಲುಗಾವಲನ್ನು ಅದರ ಮುಖ್ಯ ಉದ್ದೇಶದಿಂದ ವಿಮುಖವಾಗಿಸಿ ಅದನ್ನೊಂದು ಗೋಮಾಳವಾಗಿ ಪರಿವರ್ತಿಸುತ್ತಿದ್ದಾರೆ. ತಕ್ಷಣ ಇಲಾಖೆಯ ಮುಖ್ಯ ಅಧಿಕಾರಿಗಳು ಹುಲ್ಲುಗಾವಲನ್ನು ರಕ್ಷಿಸದೆ ಬೇಜವಾಬ್ದಾರಿತನದಿಂದ ವರ್ತಿಸುವ ಸಿಬ್ಬಂದಿ ಮೇಲೆ ಸೂಕ್ತ ಕ್ರಮ ಕೈಗೊಂಡು ಈ ಐತಿಹಾಸಿಕ ಹುಲ್ಲುಗಾವಲನ್ನು ನಿಗದಿತ ಉದ್ದೇಶಕ್ಕೆ  ಮಾತ್ರ ಬಳಸಿ ಅಪರೂಪದ ಹುಲ್ಲುಗಾವಲನ್ನು ಸಂರಕ್ಷಿಸಬೇಕು' ಎಂದು ಅವರು ಆಗ್ರಹಿಸಿದ್ದಾರೆ.


 

Similar News