ಸರ್ಕಾರಿ ವೈದ್ಯರಿಗೆ ಬಯೋಮೆಟ್ರಿಕ್‌ ಹಾಜರಾತಿ ಕಡ್ಡಾಯ: ಸಚಿವ ಸುಧಾಕರ್‌

Update: 2022-10-28 16:50 GMT

ಮೈಸೂರು,ಅ.28: 'ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು ಕೆಲಸದ ಅವಧಿಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿದರೆ ಅಂತಹವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು' ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಕೆ ನೀಡಿದರು.

ನಗರದ  ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಡಿದ ಅವರು, 'ಸರ್ಕಾರಿ  ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲವು ವೈದ್ಯರುಗಳು ಕೆಲಸದ ಅವಧಿಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ ಎಂದು ಆರೋಪಗಳು ಕೇಳಿ ಬಂದಿವೆ.  ಈ ಹಿನ್ನಲೆಯಲ್ಲಿ ಪ್ರತಿ ಆಸ್ಪತ್ರೆಯಲ್ಲೂ ಬಯೋಮೆಟ್ರಿಕ್‌ ಅಳವಡಿಸಿ ದಿನದ ಮೂರು ಸಮಯದಲ್ಲೂ  ಅವರ ಹಾಜರಾತಿ ಕಡ್ಡಾಯ ಮಾಡಲಾಗುವುದು. ಜೊತೆಗೆ ಜಿಯೋಟೆಕ್ ಅಳವಡಿಕೆಗೂ ಚಿಂತಿಸಲಾಗಿದೆ.  ಇದಕ್ಕೂ ಮೀರಿ ಅವರು ಖಾಸಗಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಲು ಹೊರಟರೆ ಅವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ' ಎಂದು  ಹೇಳಿದರು.

''ಸರ್ಕಾರಿ ಕೆಲಸದ ಸಮಯದಲ್ಲಿ ಕರ್ತವ್ಯ ನಿರ್ವಹಿಸಿ ನಿಮ್ಮ ಕೆಲಸದ ಅವಧಿ ಮುಗಿದ ಬಳಿಕ ನೀವು ಯಾವುದೇ ಖಾಸಗಿ ಆಸ್ಪತ್ರೆಗೆ ಬೇಕಾದರೂ ಹೋಗಿ ಕೆಲಸ ನಿರ್ವಹಿಸಿ ನಿಮ್ಮನ್ನು ಯಾರೂ ಕೇಳುವುದಿಲ್ಲ. ಆದರೆ ಕೆಲಸದ ಅವಧಿಯನ್ನು ಬಿಟ್ಟು ಖಾಸಗಿ ಆಸ್ಪತ್ರೆಗೆ ಹೋಗಿ ಕೆಲಸ ನಿರ್ವಹಿಸಿದರೆ ಸರ್ಕಾರ ಸುಮ್ಮನೆ ಕೂರುವುದಿಲ್ಲ'' ಎಂದು ಹೇಳಿದರು.

ಈ ಹಿಂದೆ ತಜ್ಞ ವೈದ್ಯರ ಮೇಲೆ ಸರ್ಕಾರ ನಿಯಂತ್ರಿಸಲು ಮುಂದಾದರೆ ಅವರು ಕೆಲಸ ಬಿಟ್ಟು ಹೋಗುತ್ತಾರೆ ಎಂಬ ಭಯವಿತ್ತು. ಆದರೆ, ಈಗ ಆ ಭಯ ಇಲ್ಲ. ಯಾವುದೇ ತಜ್ಞ ವೈದ್ಯರು ಕೆಲಸ ಬಿಟ್ಟು ಹೋದರೆ ಹೊಸದಾಗಿ ಸೇರಿಸಿಕೊಳ್ಳಲು ಸರ್ಕಾರ ನೋಟೀಫೀಕೇಶನ್ ಹೊರಡಿಸಿದ 15 ದಿನದಲ್ಲಿ ತಜ್ಞ ವೈದ್ಯರು ನೇಮಕಾತಿ ಗೆ ಬರುತ್ತಾರೆ ಎಂದರು. ತಜ್ಞ ವೈದ್ಯರು ಖಾಸಗಿಯಾಗಿ ಪ್ರಾಕ್ಟಿಸ್ ಮಾಡಲೇ ಬೇಕೆಂಬುದಾದರೆ ಸರ್ಕಾರಿ ಆಸ್ಪತ್ರೆಗಳಲ್ಲೇ ಅವರಿಗೆ ವ್ಯವಸ್ಥೆ ಮಾಡುವುದಾಗಿಯೂ ಹೇಳಿದರು.

ಯಶಸ್ವಿನಿ ಆರೋಗ್ಯಸೇವೆ ಕುರಿತು ಮಾತನಾಡಿ, ಆಯುಷ್ಮಾನ್ ಭಾರತ್ ಕಾರ್ಡ್ ನ್ನು 4 ಕೋಟಿ 80 ಲಕ್ಷ ಮಂದಿಗೆ ವಿತರಿಸಲು ಸರ್ಕಾರ ಮುಂದಾಗಿದೆ. ಈ ಸಂದರ್ಭದಲ್ಲಿ ಒಬ್ಬ ರೋಗಿ ಎರಡು ಆರೋಗ್ಯ ಸೇವೆ ಲಾಭ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಸಹಕಾರ ಇಲಾಖೆಗೆ ಸೂಚನೆ ನೀಡಲಾಗಿದ್ದು,  ಆಯುಷ್ಮಾನ್ ಭಾರತ್ ಸೇವೆ ಪಡೆದವರು ಯಶಸ್ವಿ ನಿ ಸೇವೆ ಪಡೆಯಲು ಅರ್ಹರಾಗುವುದಿಲ್ಲ. ಈ ಬಗ್ಗೆ ಪರಿಶೀಲಿಸಿ ಯಶಸ್ವಿನಿ ಸೇವೆ ಲಭ್ಯ ಆಗುವ ರೀತಿ  ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

438 ನಮ್ಮ ಕ್ಲಿನಿಕ್ ಗಳನ್ನು ಮೊದಲ ಅವಧಿಗೆ ಬಡ, ಮಧ್ಯಮ ಹಾಗೂ ಕೊಳಚೆ ಪೀಡಿತ ಪ್ರದೇಶಗಳಲ್ಲಿ ಪ್ರಾರಂಭಿಸಲು ಸಿದ್ದತೆ ನಡೆದಿದೆ ಎಂದರು.

ಮಕ್ಕಳಲ್ಲಿ ಅನಿಮಿಯ ಖಾಯಿಲೆ ಹೆಚ್ಚಾಗಿ ಕಂಡು ಬರಿತ್ತಿರುವುದರಿಂದ ಅಂಗನವಾಡಿ ಕೇಂದ್ರ, ಆರೋಗ್ಯ ಕೇಂದ್ರದಲ್ಲಿ ಪೌಷ್ಟಿಕ ಆಹಾರ ನೀಡಲು ಸೂಚಿಸಲಾಗಿದೆ. 128 ಮಹಿಳಾ ಸ್ವಾಸ್ಥ ಕೇಂದ್ರ ಪ್ರಾರಂಭಿಸಿ ಮಹಿಳೆಯರ ಚಿಕಿತ್ಸೆ ಗೆ ತಜ್ಞರಿಂದ ಸಲಹೆ ಹಾಗೂ ಸೇವೆ ಒದಗಿಸಲಾಗುವುದು ಎಂದರು.

ತಜ್ಞ ವೈದ್ಯರ ಕೊರತೆ ನೀಗಿಸುವಲ್ಲೂ ಕ್ರಮ ಕೈಗೊಂಡಿದ್ದೇವೆ. ಮೈಸೂರು ಜಿಲ್ಲೆಗೆ ನೂತನ ಕ್ಯಾನ್ಸರ್ ಆಸ್ಪತ್ರೆ ಕೈಗೊಳ್ಳುವ ನಿಟ್ಟಿನಲ್ಲಿ ಕ್ರಮವಹಸಿದ್ದು, 130 ಕೋಟಿ ರೂ. ಗಳಲ್ಲಿ ಪ್ರಾರಂಭ ಆಗಲಿದೆ.ಮುಂದಿನ ಸಂಪುಟ ಸಭೆ ಅನುಮೋದನೆ ಪಡೆದು 50 ಕೋಟಿ ರೂ.ಗಳ ಪ್ರಾರಂಭಿಕ ಅನುದಾನ ಸಹ ನೀಡುವುದಾಗಿ ಹೇಳಿದರು. ಒಟ್ಟಾರೆ ಆರೋಗ್ಯ ಕರ್ನಾಟಕ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪ್ರಧಾನಮಂತ್ರಿ ಗಳ ಆದೇಶದ ಮೇರೆಗೆ ಕ್ಷಯ ಮುಕ್ತ ಭಾರತ ಅಭಿಯಾನ ಕೈಗೊಳ್ಳಲಾಗಿದೆ. ಭಾರತದಲ್ಲಿ 2030 ರ ವೇಳೆಗೆ ಭಾರತ ಕ್ಷಯ ಮುಕ್ತ ಆಗಬೇಕೆಂಬುದು ಪ್ರಧಾನಿಯವರ ಗುರಿಯಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. 2025 ಕ್ಕೆ ಕ್ಷಯ ಮುಕ್ತ ಕರ್ನಾಟಕ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಆರೋಗ್ಯ ಇಲಾಖೆ ನಿರ್ಧೇಶಕಿ ಡಾ.ಇಂದುಮತಿ, ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಚ್.ಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Similar News