ಪತ್ರಕರ್ತರು ವೃತ್ತಿ ಧರ್ಮ ಮರೆಯಬಾರದು: ಗೃಹ ಸಚಿವ ಆರಗ ಜ್ಞಾನೇಂದ್ರ

Update: 2022-10-30 18:11 GMT

ಶಿವಮೊಗ್ಗ: ಪತ್ರಕರ್ತರು ವೃತ್ತಿ ಧರ್ಮ ಮರೆಯಬಾರದು ಮತ್ತು ಹಪಾಹಪಿತನದ ಸುದ್ದಿಗಳಿಗೆ ಬಲಿಯಾಗಬಾರದು, ಸಮಾಜ ಒಳಿತಾಗಿ ಶ್ರಮಿಸಬೇಕು  ಎಂದು ಗೃಹ ಸಚಿವರಾದ ಆರಗ ಜ್ಞಾನೇಂದ್ರ ಹೇಳಿದರು.

ಅವರು ಕರ್ನಾಟಕ ಪತ್ರಿಕಾ ಸಂಪಾದಕರ ಸಂಘ ಹಾಗೂ ದಿ ಎಡಿಟರ್ಸ್ ಕ್ಲಬ್ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಾ  ಪತ್ರಕರ್ತರು ಸಮಾಜದ ಅಭಿವೃದ್ಧಿಯ ಧ್ವನಿಯಾಗಿ ಕೆಲಸ ಮಾಡಬೇಕು. ಕರ್ತವ್ಯ ನಿರ್ವಹಣೆಯಲ್ಲಿ ಎಡರು-ತೊಡರುಗಳನ್ನು ಮಾಡಿದಾಗ ಎಚ್ಚರಿಸುವ ಕೆಲಸವನ್ನು ಮಾಡಬೇಕು ಎಂದರು.

ಸಮಾಜಕ್ಕೆ ವಸ್ತು ನಿಷ್ಠೆಯನ್ನು ಚೆಲ್ಲುವ ನೇರ ನಿಷ್ಠುರ ಪತ್ರಕರ್ತರಿಂದ ಸಾಮಾಜಿಕ ಜನ ಜೀವನ ಬದಲಾವಣೆ ಕಾಣುತ್ತಿದೆ. ಅದರಂತೆಯೇ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಮೇಲಿನ ನಂಬಿಕೆ ಜೊತೆಗೆ ಪತ್ರಿಕಾಂಗದ ಕಾರ್ಯದ ಮೇಲೆ ಜನರು ಹೆಚ್ಚಿನ ನಂಬಿಕೆ ಇಟ್ಟಿದ್ದಾರೆ. ಇಂದಿನ ದಿನಮಾನಗಳಲ್ಲಿ ಪತ್ರಕರ್ತರ ಬದುಕು ಅನಿಶ್ಚಿತ ಅಗಿದೆ. ಬದುಕಿಗೆ ಯಾವುದೇ ಆಸರೆ ಇಲ್ಲದಂತಾಗಿದೆ. ಸಮಾಜದ ಕೈಗನ್ನಡಿಯಂತೆ ಹಗಲಿರುಳು ಶ್ರಮಿಸುತ್ತಿರುವ ಪತ್ರಕರ್ತರ ಬದುಕು ಸಂಕಷ್ಟದಲ್ಲಿದೆ ಎಂದರು.

ಇಂತಹ ಸಂಘಟನೆಗಳಿಂದ ಪತ್ರಕರ್ತರು ಒಂದೆಡೆ ಸೇರಿ ವಿಚಾರ-ಸುದ್ದಿ ವಿನಮಯ ಮಾಡಿಕೊಳ್ಳುವ ಒಂದು ಉತ್ತಮ ವೇದಿಕೆಯಾಗಲಿ, ಇದರಿಂದ ಪತ್ರಕರ್ತರ ಸಂಕಷ್ಟಗಳು ದೂರವಾಗಲಿ ಎಂದು ಆಶಿಸಿದರು.

ಪತ್ರಿಕೆಗಳ ಬಗ್ಗೆ ನನಗೆ ಬಹಳ ಗೌರವ ಮತ್ತು ವಿಶ್ವಾಸವಿದೆ. ನನ್ನಂತಹ ಹಲವಾರು ಜನಪ್ರತಿನಿಧಿಗಳನ್ನು ಈ ಮಟ್ಟಕ್ಕೆ ಬೆಳೆಸಿದ ಕೀರ್ತಿ ಪತ್ರಿಕೆಗಳಿಗೆ ಸಲ್ಲುತ್ತದೆ. ಒಂದು ಸಣ್ಣ ಮಟ್ಟದ ಪ್ರತಿಭಟನೆಯನ್ನು ದೊಡ್ಡಮಟ್ಟದಲ್ಲಿ ಸುದ್ದಿ ಮಾಡಿ, ಸರ್ಕಾರದ ಕಣ್ಣು ತೆರೆಸುವ ತಾಕತ್ತು ಪತ್ರಿಕೆಗಳಿಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷ ಪದ್ಮನಾಭ, ಪತ್ರಿಕೋದ್ಯಮ ಸಂಕಷ್ಟದ ಸ್ಥಿತಿಯಲ್ಲಿದೆ. ಒಬ್ಬ ಸಂಪಾದಕ ಇಂತಹ ಪರಿಸ್ಥಿತಿಯಲ್ಲಿ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುವವರಿಗೆ ಸಂಭಾವನೆ ಕೊಟ್ಟು ಪತ್ರಿಕೆ ಹೊರತರುವ ಕಷ್ಟದ ದಿನಗಳಲ್ಲಿ ಈ ಸಂಘ ಮತ್ತು ಕ್ಲಬ್ ವತಿಯಿಂದ ಏನಾದರೂ ಒಂದು ಸಹಕಾರ ಮಾಡಬೇಕು ಎನ್ನುವ ಅಲೋಚನೆಯಲ್ಲಿ ಈ ಕ್ಲಬ್ ರಚನೆ ಮಾಡಿಕೊಂಡಿದ್ದೇವೆ. ಕ್ಲಬ್ ವತಿಯಿಂದ ಮುಂದಿನ ದಿನಗಳಲ್ಲಿ ಮುದ್ರಣ ಹಾಗೂ ಪತ್ರಕರ್ತರಿಗೆ ಹಲವಾರು ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವ ಹಿಸಲಿದೆ. ಹಾಗೂ ಪ್ರತಿ ವರ್ಷವೂ ಹಿರಿಯ ಪತ್ರಕರ್ತರಿಗೆ ಗೌರವಿಸುದರ ಜೊತೆಗೆ ಎಲ್ಲಾ ಸಿಬ್ಬಂದಿ ವರ್ಗಕ್ಕೆ ಇಎಸ್‌ಐ ಹಾಗೂ ಇನ್ನೀ ತರ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಜಿಲ್ಲೆಯ ನಾಲ್ಕು ಮಹಿಳಾ ಸಂಪಾದಕರಾದ ಲತಾ ರಂಗಸ್ವಾಮಿ, ಶಾಂತಿ ಕಣ್ಣಪ್ಪ, ಭಾಗ್ಯ ಅನಿಲ್, ಸುಶಿಲಾ ಸುಬ್ರಹ್ಮಣ್ಯರವರಿಗೆ ಗೌರವ ಸಮರ್ಪಿಸಲಾಯಿತು ಹಿರಿಯ ಡಿಟಿಪಿ ಆಪರೇಟರ್‌ಗಳಾದ ಎಸ್.ವಿ. ಗೀತಾ, ಪಿ.ಹೆಚ್. ರಾಜೇಶ್ವರಿ, ಪತ್ರಿಕಾ ವಿತರಕರಾದ ಎನ್. ಮಾಲತೇಶ್, ಮಾರುತಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಡಿ.ಎಸ್.ಅರುಣ್,  ಮಾಜಿ ವಿಧಾನ ಪರಿಷತ್ ಸದಸ್ಯರಾದ ಪ್ರಸನ್ನಕುಮಾರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಾಕ್ಷರಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಗೋಪಾಲ್ ಯಡಗೆರೆ,  ದಿ.ಎಡಿಟರ್‍ಸ್ ಕ್ಲಬ್ ಅಧ್ಯಕ್ಷರಾದ ಹೆಚ್.ಎನ್.ಮಂಜುನಾಥ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯರಾದ ಭಂಡಿಗಡಿ ನಂಜುಂಡಪ್ಪ.  ಸಂಪಾದಕರಾದ ಗಾ.ರಾ.ಶ್ರೀನಿವಾಸ್, ಎ.ಭರತೇಶ್, ಕಣ್ಣಪ್ಪ, ಜಿ.ಚಂದ್ರಶೇಖರ್, ಎಸ್.ಕೆ.ಗಜೇಂದ್ರಸ್ವಾಮಿ, ಶಿ.ಜು.ಪಾಶ. ರಘರಾಜ್ ಹೆಚ್.ಕೆ. ಅಣ್ಣಪ್ಪ, ಉಪಸ್ಥಿತರಿದ್ದರು.

Similar News