ಮೈಸೂರು- ಕೊಚ್ಚಿನ್ ವಿಮಾನಯಾನ ಸೇವೆ ಇಂದಿನಿಂದ ರದ್ದು

ಕಾರಣವೇನು ಗೊತ್ತೇ ?

Update: 2022-10-31 02:39 GMT

ಮೈಸೂರು: ಕೆಲ ತಿಂಗಳ ಹಿಂದಷ್ಟೇ ಆರಂಭವಾಗಿದ್ದ ಮೈಸೂರು- ಬೆಂಗಳೂರು- ಕೊಚ್ಚಿನ್  ಅಲಯನ್ಸ್ ಏರ್ ವಿಮಾನಯಾನ ಸೇವೆಯನ್ನು ಪ್ರಯಾಣಿಕರ ಕೊರತೆ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ.

ಸೋಮವಾರದಿಂದ ವಿಮಾನ ರದ್ದುಪಡಿಸಲಾಗಿದೆ. ಇದರಿಂದಾಗಿ ಈ ವಾಯುಮಾರ್ಗದಲ್ಲಿ ಪ್ರಯಾಣ ಕೈಗೊಳ್ಳುತ್ತಿದ್ದ ಹಲವಾರು ಮಂದಿಗೆ ತೊಂದರೆ ಉಂಟಾಗಿದೆ. ಸರ್ಕಾರದ ಪ್ರಾದೇಶಿಕ ವಿಮಾನ ಸಂಪರ್ಕ ಯೋಜನೆ (ಉದಾನ್) ಅಡಿಯಲ್ಲಿ ಈ ವಿಮಾನಯಾನ ಸೇವೆ ಆಂಭಿಸಲಾಗಿತ್ತು. ಇದು ಕೊಚ್ಚಿನ್‍ನಿಂದ ಮೈಸೂರಿಗೆ ಕೇವಲ ಒಂದು ಗಂಟೆಯಲ್ಲಿ ಪ್ರಯಾಣಿಸಲು ಅನುವು ಮಾಡಿಕೊಟ್ಟಿತ್ತು.

2019ರ ಮಾರ್ಚ್ 31ರಿಂದ ಆರಂಭಿಸಿದ್ದ ಈ ಸೇವೆಯನ್ನು ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆದರೆ ಪ್ರವಾಸೋದ್ಯಮ ಸಂಸ್ಥೆಗಳ ಪ್ರಕಾರ ಮೈಸೂರು- ಕೊಚ್ಚಿನ್ ವಿಮಾನ ವ್ಯಾಪಾರಿ ಸಮುದಾಯಕ್ಕೆ ಹಾಗೂ ಪ್ರವಾಸೋದ್ಯಮ ಕ್ಷೇತ್ರಕ್ಕೆ ಲಾಭದಾಯಕ ಮಾರ್ಗವಾಗಿತ್ತು. ಏಕೆಂದರೆ ಮೈಸೂರು- ಕೇರಳ ನಡುವೆ ತಡರಾತ್ರಿ ಬಸ್ ಸೇವೆ ಇರಲಿಲ್ಲ. ಇದರಿಂದಾಗಿ ವಿಮಾನಯಾನ ಉದ್ಯಮಿಗಳಿಗೆ ತೀರಾ ಪ್ರಯೋಜನವಾಗುತ್ತಿತ್ತು.

ಒಂದು ಗಂಟೆಯಲ್ಲಿ ಉಭಯ ನಗರಗಳ ನಡುವೆ ಪ್ರಯಾಣಿಸಬಹುದಾಗಿದ್ದ ಈ ಸೇವೆಯಿಂದ ಭಾರಿ ಅನುಕೂಲವಾಗುತ್ತಿತ್ತು. ಈ ಪ್ರಯಾಣಕ್ಕೆ ಬಸ್‍ನಲ್ಲಿ 8 ಗಂಟೆ ಹಾಗೂ ರೈಲಿನಲ್ಲಿ 12 ಗಂಟೆ ತಗುಲುತ್ತಿತ್ತು. ವಿಮಾನಯಾನ ದರ 2000-2500 ರೂಪಾಯಿ ಮಾತ್ರ ಇತ್ತು ಎಂದು ನಿಯತವಾಗಿ ಪ್ರಯಾಣ ಮಾಡುತ್ತಿದ್ದ ಜೋಮನ್ ವರ್ಗೀಸ್ ಹೇಳಿದ್ದಾರೆ. ಮುಂದಿನ ಆರು ತಿಂಗಳವರೆಗೆ ವಿಮಾನಯಾನ ರದ್ದಪಡಿಸಲಾಗಿದೆ ಎಂದು ಅಲಯನ್ಸ್ ಏರ್ ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ deccanherald.com ವರದಿ ಮಾಡಿದೆ. 

Similar News