ನವೆಂಬರ್ ಅಂತ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಸಿದ್ದರಾಮಯ್ಯ

ವಿಧಾನಸಭೆ ಚುನಾವಣೆ

Update: 2022-11-03 17:31 GMT

ಚಿಕ್ಕಮಗಳೂರು, ನ.3: 'ನವೆಂಬರ್ ತಿಂಗಳ ಅಂತ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 130ರಿಂದ-159 ಸ್ಥಾನಗಳನ್ನು ಪಡೆಯುವ ಮೂಲಕ ಮತ್ತೆ ಅಧಿಕಾರ ಹಿಡಿಯಲಿದೆ. ರಾಹುಲ್ ಗಾಂಧಿ ರಾಜ್ಯದಲ್ಲಿ ನಡೆಸಿರುವ ಭಾರತ್ ಜೋಡೊ ಪಾದಯಾತ್ರೆ ನಡೆಸಿರುವುದು ಹಾಗೂ ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಆನೆಬಲ ಬಂದಿದೆ' ಎಂದು ಮಾಜಿ ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಗುರುವಾರ ಖಾಸಗಿ ಕಾರ್ಯಕ್ರಮದ ನಿಮಿತ್ತ ನಗಕ್ಕೆ ಆಗಮಿಸಿದ್ದ ವೇಳೆ ಖಾಸಗಿ ಹೋಟೇಲೊಂದರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವ ಅಭ್ಯರ್ಥಿಗಳು, ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ನ.15 ಕಡೆಯ ದಿನವಾಗಿದೆ. ನವೆಂಬರ್ ಅಂತ್ಯದಲ್ಲಿ ಮೊದಲ ಪಟ್ಟಿ ಹೊರಬರಲಿದೆ' ಎಂದರು.

ಮಲ್ಲಿಕಾರ್ಜುನ ಖರ್ಗೆ ಅವರು ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿರುವುದು ಪಕ್ಷಕ್ಕೆ ಆನೆಬಲ ಬಂದಿದೆ. ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿದ್ದು, ಬಿಜೆಪಿ ಸರಕಾರದ ದುರಾಡಳಿತದಿಂದ ಜನರು ಬೇಸತ್ತು ಹೋಗಿದ್ದಾರೆ. ಬಿಜೆಪಿ ಸರಕಾರವನ್ನು ಕಿತ್ತುಹಾಕುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 130ರಿಂದ 150 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಹಳ ಕಡೆಗಳಿಂದ ಆಹ್ವಾನ ಇದೆ. ನಾನಿನ್ನೂ ತೀರ್ಮಾನ  ಮಾಡಿಲ್ಲ. ಬಾದಮಿಯಲ್ಲಿ ಸ್ಪರ್ಧಿಸುವಂತೆ ಅಲ್ಲಿನ ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದಾರೆ. ಕೋಲಾರ, ಚಿಕ್ಕಮಗಳೂರು, ವರುಣಾದಲ್ಲಿ ನಿಲ್ಲುವಂತೆ ಅಲ್ಲಿನ ಕಾರ್ಯಕರ್ತರು ಆಹ್ವಾನ ನೀಡುತ್ತಿದ್ದಾರೆ. ಅಂತಿಮವಾಗಿ ಜನ ಮತ್ತು ಪಕ್ಷ ಏನು ಹೇಳ್ತಾರೋ ನೋಡೋಣ ಎಂದರು.

ಅಭ್ಯರ್ಥಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿ 2ಲಕ್ಷ ರೂ. ದೇಣಿಗೆ ನೀಡುವ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಚುನಾವಣೆಗೆ 40 ಲಕ್ಷ ಖರ್ಚು ಮಾಡುವವರಿಗೆ 2 ಲಕ್ಷ ರೂ. ನೀಡುವುದು ಹೊರೆಯಲ್ಲ. ಡಿ.ಕೆ.ಶಿವಕುಮಾರ್ ಅವರು ಬೇರೆಯವರೂ ಅರ್ಜಿ ಹಾಕಬಹುದು ಎಂದು ಹೇಳಿದ್ದಾರೆ. ಕಾಂಗ್ರೆಸ್ ಸಿದ್ಧಾಂತ ಮತ್ತು ನಾಯಕತ್ವದ ಮೇಲೆ ನಂಬಿಯುಳ್ಳವರು ಅರ್ಜಿ ಹಾಕಬಹುದು. ಅರ್ಜಿ ಹಾಕಿದ ಕೂಡಲೇ ಕಾಂಗ್ರೆಸ್ ಸೇರಿದರು ಅಂತ ಅಲ್ಲ. ಕಾಂಗ್ರೆಸ್ ಮುಖಂಡ ವೀರಭದ್ರಪ್ಪ ಅಧ್ಯಕ್ಷತೆಯ ಕಮಿಟಿ ಇದೆ. ಅಲ್ಲಿ ಅಂತಿಮವಾಗಲಿದೆ ಎಂದು ತಿಳಿಸಿದರು.

ಮಾಜಿ ಸಚಿವೆ ಮೋಟಮ್ಮ ಮಗಳಿಗೆ ಟಿಕೆಟ್ ನೀಡಬಾರದು ಎಂದು ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಸಭೆಯ ಬಗ್ಗೆ ಮಾತನಾಡಿ, ಯಾವ ಪಕ್ಷದಲ್ಲಿ ಆಂತರಿಕ ಡೆಮಾಕ್ರಸಿ ಇದೆಯೋ ಅಲ್ಲಿ ಇದೆಲ್ಲ ಸಾಮಾನ್ಯ, ಬಿಜೆಪಿಯಲ್ಲಿ ಆಂತರಿಕ ಡೆಮಾಕ್ರಸಿ ಇಲ್ಲ. ಹಾಗಾಗೀ ಇವೆಲ್ಲ ಇಲ್ಲ. ಟಿಕೆಟ್ ನೀಡುವ ಬಗ್ಗೆ ಪಕ್ಷ ತೀರ್ಮಾನಿಸಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ, ಜಿಲ್ಲಾಧ್ಯಕ್ಷ ಕೆ.ಪಿ.ಅಂಶುಮಂತ್, ಮಾಜಿ ಸಭಾಪತಿ ಬಿ.ಎಲ್.ಶಂಕರ್, ವಿಧಾನ ಪರಿಷತ್ ಮಾಜಿ ಶಾಸಕಿ ಗಾಯತ್ರಿ ಶಾಂತೇಗೌಡ, ಎಂ.ಶ್ರೀನಿವಾಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಮುಖ್ಯಮಂತ್ರಿ ಸಿದ್ದು ಎಂದು ಘೋಷಣೆ ಮೊಳಗಿಸಿದ ಕಾರ್ಯಕರ್ತರು:

ಗುರುವಾರ ನಗರದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸ್ಥಳದಲ್ಲಿ ನೆರೆದಿದ್ದ ಕಾರ್ಯಕರ್ತರು ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಕೂಗಿದರು. ಸುದ್ದಿಗೋಷ್ಠಿಯ ಬಳಿಕವೂ ಸಿದ್ದರಾಮಯ್ಯ ಮುಂದಿನ ಸಿಎಂ ಎಂಬ ಘೋಷಣೆ ಮುಗಿಲು ಮುಟ್ಟಿತ್ತು.

ಕಾಲುವೆ ದುರಸ್ತಿಗೆ ಆಗ್ರಹಿಸಿ ಶ್ರೀರಾಮುಲು ಅವರ ವಾಸ್ತವ್ಯ ಸಂಬಂಧ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಶ್ರೀರಾಮುಲು ಈ ಸಲ ಮೊಣಕಾಲ್ಮೂರಿನಲ್ಲಿ ನಿಂತು ಗೆಲ್ಲಲಿ ನೋಡೋಣ, ಇವರಿಗೆ ಪಕ್ಷ ಸಿದ್ಧಾಂತ, ಆರೆಸ್ಸೆಸ್ ಬಗ್ಗೆ ಯಾವ ಲಾಯಲ್ಟಿ ಇದೆ. ಶ್ರೀರಾಮುಲು ಆರೆಸೆಸ್ ಗಿರಾಕಿನಾ? ಕಾಂಗ್ರೆಸ್‍ನಿಂದ ಮೊದಲು ಮುನ್ಸಿಪಾಲ್ ಮೆಂಬರ್ ಆಗಿದ್ದ ಶ್ರೀರಾಮುಲು ಈ ಮಧ್ಯೆ ಬಂದು ಬಿಜೆಪಿ ಪಾರ್ಟಿ ಸೇರಿದ್ದ. ಬಿಜೆಪಿ ಸರಕಾರದಲ್ಲಿದ್ದರೂ ಆತ ರೈತರಿಗೆ ಪರಿಹಾರ ನೀಡಿಲ್ಲ, ರೈತರ ಬಗ್ಗೆ ಆತನಿಗೆ ಯಾವ ಕಾಳಜಿ ಇದೆ ತೋರಿಸಲಿ? ಅಧಿಕಾರಕ್ಕೆ ಬಂದು 24ಗಂಟೆಯಲ್ಲಿ ನಾಗಮೋಹನ್ ದಾಸ್ ವರದಿ ಜಾರಿ ಮಾಡುತ್ತೇವೆ. ಈ ಬಗ್ಗೆ ರಕ್ತದಲ್ಲಿ ಬರೆದುಕೊಡ್ತೇನೆ ಎಂದು ಶ್ರೀರಾಮುಲು ಹೇಳಿದ್ದರು, ಏನಾಯ್ತು ಬರೆದು ಕೊಟ್ನೇನಪ್ಪ ಎಂದು ಪ್ರಶ್ನಿಸಿದರು. ಇದೇ ವೇಳೆ ಸಿಟಿ ರವಿ ಅವರ ಬಗ್ಗೆ ಕೇಳಿದ ಪ್ರಶ್ನೆಗೆ ಅವರು, ಸಿ.ಟಿ.ರವಿಯದ್ದು ಬರೀ ಸುಳ್ಳಿನ ಆರೋಪ, ಸಿ.ಟಿ.ರವಿ ಅಂದರೇ ಸುಳ್ಳಿನ ರವಿ ಅಂದರ್ಥ ಎಂದು ಟೀಕಿಸಿದರು.

Full View

Similar News