ಶಿವಮೊಗ್ಗ: ಚಾಕುವಿನಿಂದ ದಾಳಿಗೆ ಯತ್ನಿಸಿದ ಆರೋಪಿಯ ಕಾಲಿಗೆ ಗುಂಡು ಹಾರಿಸಿದ ಪೊಲೀಸರು

Update: 2022-11-05 03:19 GMT

ಶಿವಮೊಗ್ಗ: ಪ್ರಕರಣವೊಂದರ ಆರೋಪಿಯನ್ನು ಬಂಧಿಸಲು ತೆರಳಿದ್ದ ವೇಳೆ ಆತ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದ್ದು,  ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.

ಅಸ್ಲಂ ಎಂಬಾತನ ಎಡಗಾಲಿಗೆ ಗುಂಡು ಹಾರಿಸಲಾಗಿದೆ. ಪುರಲೆ ರಸ್ತೆಯಲ್ಲಿ ನಿರ್ಮಾಣವಾಗಿರುವ ಬಡಾವಣೆಯೊಂದರಲ್ಲಿ ಅಸ್ಲಂ ಅವಿತುಕೊಂಡಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದೊಡ್ಡಪೇಟೆ ಠಾಣೆ ಪೊಲೀಸರು ಆತನ ಬಂಧನಕ್ಕೆ ತೆರಳಿದ್ದರು.

ದೊಡ್ಡಪೇಟೆ ಠಾಣೆ ಪಿಎಸ್‌ಐ ವಸಂತ್ ಅವರ ನೇತೃತ್ವದ ತಂಡ ಅಸ್ಲಂ ಬಂಧನಕ್ಕೆ ತೆರಳಿತ್ತು. ಈ ಸಂದರ್ಭ ಅಸ್ಲಂ, ಪೊಲೀಸ್ ಸಿಬ್ಬಂದಿ ರಮೇಶ್ ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ದಾಳಿಯಲ್ಲಿ ಪೊಲೀಸ್ ಸಿಬ್ಬಂದಿ ರಮೇಶ್ ಅವರು ಗಾಯಗೊಂಡಿದ್ದಾರೆ.

ಪರಾರಿಯಾಗಲು ಯತ್ನಿಸಿದ ಅಸ್ಲಂಗೆ ಪಿಎಸ್‌ಐ ವಸಂತ್ ಅವರು ಎಚ್ಚರಿಕೆ ನೀಡಿ, ಬಳಿಕ ಗುಂಡು ಹಾರಿಸಿದ್ದಾರೆ. ಅಸ್ಲಂನ ಎಡಗಾಲಿಗೆ ಗುಂಡು ತಾಗಿದ್ದು, ಆತ ಗಾಯಗೊಂಡಿದ್ದಾನೆ.

ಪೊಲೀಸ್ ಸಿಬ್ಬಂದಿ ರಮೇಶ್ ಮತ್ತು ಆರೋಪಿ ಅಸ್ಲಂನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಬ್ಬರಿಗೂ ಚಿಕಿತ್ಸೆ ನೀಡಲಾಗಿದೆ. ಅಸ್ಲಂ ಅಪರಾಧ ಹಿನ್ನೆಲೆ ಇದೆ. ಈತನ ವಿರುದ್ಧ ವಿವಿಧ ಠಾಣೆಗಳಲ್ಲಿ 9 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಏನಿದು ಪ್ರಕರಣ: ಆ.30ರಂದು ರಾತ್ರಿ ಬಿ.ಎಚ್.ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದ ಅಶೋಕ್ ಪ್ರಭು ಎಂಬವರ ಜೊತೆಗೆ ನಾಲ್ವರು ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿದ್ದರು. ಹರಿತವಾದ ಆಯುಧದಿಂದ ಅಶೋಕ್ ಪ್ರಭುವಿಗೆ ಹಲ್ಲೆ ಮಾಡಿದ್ದರು. ಗಾಯಗೊಂಡಿದ್ದ ಅಶೋಕ್ ಪ್ರಭು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.

Similar News