'ಕಮಿಷನ್ ಸರಕಾರ'ವನ್ನು ಕಿತ್ತೊಗೆಯಲು ಬದ್ಧ: ಸರ್ವೋದಯ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕರು ಪಣ..!

Update: 2022-11-06 15:31 GMT

ಬೆಂಗಳೂರು: ಬಿಜೆಪಿ (BJP) ಸರಕಾರದ ಭ್ರಷ್ಟಚಾರ, ಆಡಳಿತ ನೀತಿ, ವಿಫಲತೆಯನ್ನು ರಾಜ್ಯದ ಜನರಿಗೆ ಮುಟ್ಟಿಸುವ ಮೂಲಕ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವಂತೆ ಮಾಡುತ್ತೇವೆ ಎಂದು ರಾಜ್ಯ ಕಾಂಗ್ರೆಸ್ (Congress) ನಾಯಕರು ಪಣತೊಟ್ಟರು.

ರವಿವಾರ ನಗರದ ಅರಮನೆ ಮೈದಾನದಲ್ಲಿ ಕೆಪಿಸಿಸಿ ವತಿಯಿಂದ ಹಮ್ಮಿಕೊಂಡಿದ್ದ, ‘ಸರ್ವೋದಯ ಸಮಾವೇಶ’ದಲ್ಲಿ ಎಐಸಿಸಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸಿದ ಕಾಂಗ್ರೆಸ್ ನಾಯಕರು, ಪಕ್ಷ ಸಂಘಟಿಸಿ, ಆಡಳಿತ ಪಕ್ಷದ ಜನ ವಿರೋಧಿ ನೀತಿಗಳ ವಿರುದ್ಧ ಹೋರಾಟ ನಡೆಸುವುದಾಗಿ ಪ್ರಕಟಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಬರುತ್ತಿದೆ, ಈ ಹಿನ್ನೆಲೆಯಲ್ಲಿ ರಾಜ್ಯದ ಜನ ಬಿಜೆಪಿ ಸರಕಾರವನ್ನು ಕಿತ್ತುಹಾಕಿ ಕಾಂಗ್ರೆಸ್ ಸರಕಾರವನ್ನು ರಚಿಸುವ ಮೂಲಕ ಅಭಿನಂದನೆ ಸಲ್ಲಿಸುತ್ತಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಭರವಸೆ ನೀಡುತ್ತೇನೆ ಎಂದು ಹೇಳಿದರು.

ನಮಗೆ ಇರುವ ಸವಾಲು ಕರ್ನಾಟಕದಲ್ಲಿ ಕೋಮುವಾದಿ, ಬಡವರ ವಿರೋಧಿ, ರೈತರ ಮತ್ತು ಅಲ್ಪಸಂಖ್ಯಾತರ ವಿರೋಧಿ ಸರಕಾರವನ್ನು ಕಿತ್ತುಹಾಕಬೇಕು ಎಂಬುದು. ಅಧಿಕಾರಕ್ಕೆ ಬಂದು ಮೂರು ವರ್ಷಗಳನ್ನು ಕಳೆದಿರುವ ಬಿಜೆಪಿ ಸರಕಾರ ರಾಜ್ಯದ ಬಡವರು. ಯುವಕರು, ರೈತರು, ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡಿಲ್ಲ. ಇದುಕಮಿಷನ್ ಸರಕಾರ ಎಂದು ಗುತ್ತಿಗೆದಾರರ ಸಂಘದವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ದೂರಿದ್ದಾರೆ. ಆದರೂ ಪ್ರಧಾನಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.

ಬಿಜೆಪಿ ಅವರು ಕಾಂಗ್ರೆಸ್‍ನಲ್ಲಿ ವಂಶಪಾರಂಪರ್ಯ ಆಡಳಿತ ಇದೆ, ಬೇರೆಯವರಿಗೆ ಅವಕಾಶ ಇಲ್ಲ ಎಂದು ಮಾತನಾಡುತ್ತಿದ್ದರು. ಆದರೆ ಇಂದು ಖರ್ಗೆಯವರು ಅಧ್ಯಕ್ಷರಾಗಿ ಇಂತಹ ಟೀಕೆಗಳಿಗೆ ಸರಿಯಾದ ಉತ್ತರ ನೀಡಿದ್ದಾರೆ. ಕಾಂಗ್ರೆಸ್‍ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ ಎಂಬುದು ಇದರಿಂದ ಸಾಬೀತಾಗಿದೆ ಎಂದು ಸಿದ್ದರಾಮಯ್ಯ ನುಡಿದರು.

ಖರ್ಗೆ ಅವರು ರಾಜ್ಯದಲ್ಲಿ ಸುದೀರ್ಘ ಕಾಲ ರಾಜಕಾರಣ ಮಾಡಿದವರು, ಆಡಳಿತ ನಡೆಸಿದ ಅನುಭವ ಇದೆ. ಹಲವು ಇಲಾಖೆಗಳಲ್ಲಿ ಅಭಿವೃದ್ಧಿಪರ ಚಿಂತನೆಗಳಿಂದ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್ ಅವರ ಸಿದ್ದಾಂತಗಳಿಗೆ ಬದ್ಧರಾಗಿ, ಯಾವ ರಾಜಿಯಿಲ್ಲದೆ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಖರ್ಗೆಯವರು ಒಬ್ಬ ಸ್ವಾಭಿಮಾನಿ ರಾಜಕಾರಣಿ ಎಂದು ಅವರು ಬಣ್ಣಿಸಿದರು.

ನಾನು ಕಂಡಂತೆ ಕರ್ನಾಟಕದಲ್ಲಿ ಸಮಚಿತ್ತವಿರುವ, ಮೌಢ್ಯವಿರೋಧಿ, ಪ್ರಗತಿಪರ ರಾಜಕಾರಣಿ ಇದ್ದರೆ ಅದು, ಮಲ್ಲಿಕಾರ್ಜುನ ಖರ್ಗೆಯವರು. ಇಷ್ಟು ವರ್ಷಗಳ ಕಾಲ ಲೋಕಸಭೆ, ರಾಜ್ಯಸಭೆಯಲ್ಲಿ ಸೇವೆ ಮಾಡಿ, ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿರೋದು ಹೆಮ್ಮೆಯ ವಿಚಾರ. ಇದು ರಾಜ್ಯ ಕಾಂಗ್ರೆಸ್‍ಗೆ ಶಕ್ತಿಯನ್ನು ತಂದುಕೊಟ್ಟಿದೆ. 2023ರಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ. ಖರ್ಗೆಯವರು ನೀಡಿರುವ ಎಚ್ಚರಿಕೆ ಮಾತುಗಳಂತೆ ನಾವು ನಡೆದುಕೊಳ್ತೇವೆ ಎಂದು ಅವರು ನುಡಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸರ್ಜೇವಾಲ ಮಾತನಾಡಿ, ದೇಶದ ಮೂಲೆ ಮೂಲೆಯ ಕಾರ್ಯಕರ್ತರಿಗೆ ಖರ್ಗೆ ಅವರ ಮೇಲೆ ನಂಬಿಕೆ ಇದೆ. ಈ ಸಮಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ರಾಜ್ಯ ಸರಕಾರ ಕಿತ್ತೊಗೆದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರುವ ಸಂಕಲ್ಪ ಮಾಡೋಣ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಬಿಜೆಪಿ ಸರಕಾರ ಚುನಾವಣೆ ಸಮಯದಲ್ಲಿ 600 ಭರವಸೆ ನೀಡಿದ್ದು, ಅದರಲ್ಲಿ 550 ಈಡೇರಿಸಿಲ್ಲ. ನಾವು ದಿನನಿತ್ಯ ಪ್ರಶ್ನೆ ಹಾಕಿ ಅವರಿಂದ ಉತ್ತರ ಕೇಳುತ್ತಿದ್ದೇವೆ. ಆದರೆ ಇದುವರೆಗೂ ಒಂದೂ ಪ್ರಶ್ನೆಗೂ ಉತ್ತರ ನೀಡಲು ಆಗಿಲ್ಲ ಎಂದರು.

ನಾನು ಅಧ್ಯಕ್ಷ ಸ್ಥಾನ ಅಲಂಕರಿಸಿದ ನಂತರ ಕಾಂಗ್ರೆಸ್ಸಿಗರೆಲ್ಲರೂ ಶಕ್ತಿ ಮೀರಿ ದುಡಿದು ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಾತಾವರಣ ನಿರ್ಮಿಸಿದ್ದೀರಿ. ಜತೆಗೆ, ರಾಹುಲ್ ಗಾಂಧಿ ಅವರು ಯಾತ್ರೆ ಸಮಯದಲ್ಲಿ ಎಲ್ಲ ವರ್ಗದವರ ಜತೆ ಮಾತನಾಡಿ ನಮಗೆ ಶಕ್ತಿ ತುಂಬಿದ್ದಾರೆ. 
ಈಗ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ನಾವು ನೀವೆಲ್ಲ ದುಡಿದು ಉದಯಪುರ ಸಂಕಲ್ಪ ಶಿಬಿರದಲ್ಲಿ ತೀರ್ಮಾನಿಸಿರುವಂತೆ ಪ್ರತಿ ಬೂತ್ ಮಟ್ಟಕ್ಕೆ ಈ ಯಾತ್ರೆ ತಲುಪಿಸಲು ಕಾರ್ಯಕ್ರಮ ಮಾಡಲಾಗುವುದು. ಆ ಮೂಲಕ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶಕ್ತಿ ತುಂಬೋಣ ಎಂದು ಅವರು ತಿಳಿಸಿದರು.

ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮಾತನಾಡಿ, ನಮ್ಮ ಪಕ್ಷ ಎಲ್ಲ ಜಾತಿ ಧರ್ಮದವರನ್ನು ಅಧ್ಯಕ್ಷರನ್ನಾಗಿ ಮಾಡಿದೆ. ಆದರೆ, ಆರೆಸ್ಸೆಸ್ ಕೇವಲ ಒಂದು ಜಾತಿಗೆ ಸೇರಿದ ಸಂಘಟನೆ ಆಗಿದೆ. ಹೀಗಾಗಿ ಬಿಜೆಪಿ, ಖಾಕಿ ಚಡ್ಡಿ ಹಾಗೂ ಕರಿ ಟೋಪಿ ಅವರಿಂದ ಆಂತರಿಕ ಪ್ರಜಾಪ್ರಭುತ್ವದ ನಾವು ಕಲಿಯುವ ಅಗತ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.

ಖರ್ಗೆ ಅವರ ಮುಂದೆ ಈ ತ್ರಿವರ್ಣ ಧ್ವಜ ಮರ್ಯಾದೆ ಕಾಪಾಡುವ ಜವಾಬ್ದಾರಿ ಇದೆ. ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆ ರಕ್ಷಿಸುವ ಸವಾಲು ಇದೆ. ಈ ಹೋರಾಟದಲ್ಲಿ ನಾವೆಲ್ಲರೂ ನಿಮ್ಮ ಜತೆಯಾಗಿ ಹೆಜ್ಜೆ ಹಾಕುತ್ತೇವೆ ಎಂದು ಅವರು ಹೇಳಿದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಮಾತನಾಡಿ, ವಾಜಪೆಯಿ ಅವರು ಪ್ರಧಾನಿ ಹಾಗೂ ಆಡ್ವಾಣಿ ಅವರು ಗೃಹ ಸಚಿವರಾಗಿದ್ದಾಗ ಕಲ್ಯಾಣ ಕರ್ನಾಟಕಕ್ಕೇ ಆರ್ಟಿಕಲ್ 371ಜೆ ನೀಡಲು ಸಾಧ್ಯವಿಲ್ಲ ಎಂದರು. ಆದರೆ ಖರ್ಗೆ ಅವರು ಹೋರಾಟ ಬಿಡದೆ, ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಇದನ್ನು ಸಾಧ್ಯ ಮಾಡಿದರು.ಅವರಲ್ಲಿ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ತತ್ವಗಳನ್ನು ನೋಡಿದ್ದು, ರಾಜ್ಯ ಮಾತ್ರವಲ್ಲ ದೇಶದ ಎಲ್ಲ ಭಾಗದ ಜನ ಅವರಿಗೆ ಗೌರವ ನೀಡುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ಧ್ರುವನಾರಾಯಣ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಕೇಂದ್ರದ ಮಾಜಿ ಸಚಿವ ಕೆ.ರೆಹ್ಮಾನ್ ಖಾನ್, ಮಾಜಿ ಸಚಿವರಾದ ಶ್ಯಾಮನೂರು ಶಿವಶಂಕರಪ್ಪ, ಕೃಷ್ಣಭೈರೇಗೌಡ, ಎಚ್.ಎಂ.ರೇವಣ್ಣ, ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

‘ಇತ್ತೀಚಿಗೆ ಅಮಾನತು ಆಗಿದ್ದ ಕೆಆರ್ ಪುರಂ ಠಾಣೆ ಇನ್ಸ್ ಪೆಕ್ಟರ್ ನಂದೀಶ್ 70-80 ಲಕ್ಷ ರೂ.ಲಂಚ ಕೊಟ್ಟು ವರ್ಗಾವಣೆ ಆಗಿದ್ದರು ಎಂದೂ ಸಚಿವ ಎಂಟಿಬಿ ನಾಗರಾಜ್ ಅವರೇ ಹೇಳಿದ್ದಾರೆ. ಈ ಸಾವಿಗೆ ಮುಖ್ಯಮಂತ್ರಿ ಮತ್ತು ಗೃಹಸಚಿವರೇ ಕಾರಣ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾನ, ಮರ್ಯಾದೆ ಇದ್ದರೆ ರಾಜೀನಾಮೆ ನೀಡಲಿ’
-ಸಿದ್ದರಾಮಯ್ಯ, ವಿಪಕ್ಷ ನಾಯಕ, ವಿಧಾನಸಭೆ

Similar News