ದೇಶಾದ್ಯಂತ ಕಾಂಗ್ರೆಸ್ ಪಕ್ಷ ಅಸ್ತಿತ್ವ ಕಳೆದುಕೊಳ್ಳುತ್ತಿದೆ: ಶೋಭಾ ಕರಂದ್ಲಾಜೆ

Update: 2022-11-06 18:22 GMT

ಚಿಕ್ಕಮಗಳೂರು: ದೇಶದಲ್ಲಿ ಕಾಂಗ್ರೆಸ್ ಅಸ್ತಿತ್ವವನ್ನು ಕಳೆದುಕೊಂಡಿದೆ. ಭಾರತ್ ಜೋಡೋ ಯಾತ್ರೆ ಮೂಲಕ ರಾಹುಲ್‍ಗಾಂಧಿ ಏನನ್ನು ಸಾಬೀತು ಮಾಡಲು ಹೊರಟಿದ್ದಾರೆಂದು ನನಗೆ ಅರ್ಥವಾಗುತ್ತಿಲ್ಲ. ಕಾಂಗ್ರೆಸ್ ಮುಕ್ತ ದೇಶ ಆಗುವುದು ನಿಶ್ಚಿತ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಚುನಾವಣೆ ಘೋಷಣೆಯಾಗಿದೆ. ಸ್ವಾತಂತ್ರ್ಯ ಭಾರತದ ನಂತರ ಅನೇಕ ವರ್ಷಗಳ ಕಾಲ ಕಾಂಗ್ರೆಸ್ ದೇಶಾದ್ಯಂತ ಆಡಳಿತ ನಡೆಸಿತ್ತು. ಆದರೆ ಪ್ರಸಕ್ತ ಎರಡು ರಾಜ್ಯಗಳನ್ನು ಹೊರತುಪಡಿಸಿ ಉಳಿದಂತೆ  ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಹುಡುಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದರು.

ರಾಹುಲ್ ಗಾಂಧಿಯವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದರೂ ಸಂಪೂರ್ಣವಾಗಿ ವಿಫಲರಾದರು. ಪ್ರಿಯಾಂಕ ಗಾಂಧಿಯವರನ್ನು ಉತ್ತರ ಪ್ರದೇಶದಲ್ಲಿ ಚುನಾವಣೆಗೆ ನೇಮಕ ಮಾಡಲಾಗಿತ್ತು, ಆದರೆ ಅಲ್ಲಿ ಅವರು ಒಂದು ಸೀಟನ್ನೂ ಗೆಲ್ಲಲು ಸಾಧ್ಯವಾಗಲಿಲ್ಲ, 25-30ವರ್ಷದಿಂದ ಒಂದು ಕುಟುಂಬದ ಅಧ್ಯಕ್ಷತೆಯನ್ನು ಬಿಡಿಸಿ ನಮ್ಮ ರಾಜ್ಯದವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಅವರು ಕಾಣಿಸಿಕೊಳ್ಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಮೂಲಕ ಏನನ್ನು ಸಾಬೀತು ಮಾಡಲು ಹೊರಟಿದ್ದಾರೆಂದು ಅರ್ಥವಾಗುತ್ತಿಲ್ಲ ಎಂದರು.

ಭಾರತ ಜೋಡಿಸಬೇಕಿರುವುದು ಭಾರತದ ಒಳಗಲ್ಲ, ಭಾರತದ ಸೀಮೆಗಳಲ್ಲಿ, ಭಾರತದ ಗಡಿಪ್ರದೇಶದಲ್ಲಿರುವ ಗೊಂದಲಕ್ಕೆ, ಭಯೋತ್ಪಾದನೆ ಹೆಚ್ಚಾಗಲು ಅಂದು ಕಾಂಗ್ರೆಸ್ ಪಕ್ಷ ತಗೆದುಕೊಂಡ ತಪ್ಪು ನಿರ್ಧಾರಗಳು ಕಾರಣ ಎಂದ ಅವರು, ಭಾರತ್ ಜೋಡೋ ಅಗತ್ಯವಿರುವುದು ಗಡಿ ಪ್ರದೇಶದಲ್ಲಿ ಎಂದು ತೀರುಗೇಟು ನೀಡಿದರು.

ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಹಿಡಿಯಲಿದೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ತಮ್ಮ ಮನೆಯನ್ನು ಮೊದಲು ಸರಿಮಾಡಿಕೊಳ್ಳಬೇಕಿದೆ. ಭಾರತ್ ಜೋಡೋ ಯಾತ್ರೆಯಲ್ಲಿ ಎರಡು ಗುಂಪುಗಳಲ್ಲಿ ಜನರನ್ನು ಕರೆ ತರಲಾಗಿದೆ. ಕಾಂಗ್ರೆಸ್‍ನಲ್ಲಿ ನಾಯಕತ್ವದ ಬಗ್ಗೆ ಗೊಂದಲವಿದೆ. ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಲು ಬಿಡುತ್ತಾರ? ಎಂದು ಪ್ರಶ್ನಿಸಿದರು. 

ನೀವೇ ಮುಖ್ಯಮಂತ್ರಿ ಎಂದು ಯಾರು ಘೋಷಣೆ ಮಾಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಹಿರಿಯ ನಾಯಕರಾದ ಪರಮೇಶ್ವರ್ ಅವರು ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿಲ್ಲ, ಒಂದು ವರ್ಗವನ್ನು ಬಿಟ್ಟು ಎಲ್ಲಾವನ್ನು ಮಾಡುತ್ತಿದ್ದಾರೆ ಆದ್ದರಿಂದ ರಾಜ್ಯದ ಜನತೆ ಕಾಂಗ್ರೆಸ್‍ನ ಮುಖ್ಯಮಂತ್ರಿ ಕನಸನ್ನು ನನಸಾಗಲು ಬಿಡುವುದಿಲ್ಲ. ಕಾಂಗ್ರೆಸ್‍ನ ತುಘಲಕ್ ದರ್ಬಾರ್, ಟಿಪ್ಪು ದರ್ಬಾರ್ ಆಡಳಿತವನ್ನು ಜನರು ನೋಡಿದ್ದಾರೆ, ಆದ್ದರಿಂದ ಮತ್ತೆ ಅಧಿಕಾರ ನೀಡುವುದಿಲ್ಲ. ನಮ್ಮ ಸರಕಾರದಲ್ಲಿ ಭ್ರಷ್ಟಚಾರ ನಡೆಸಿದ್ದರೇ ಸಾಕ್ಷಿ ಏನಿದೆ. ಚುನಾವಣೆ ಸಂದರ್ಭದಲ್ಲಿ ಆರೋಪ ಮಾಡುವುದು ಸಾಮಾನ್ಯ, ಆಧಾರ ರಹಿತ ಆರೋಪವನ್ನು ಜನರು ಒಪ್ಪುವುದಿಲ್ಲ ಎಂದರು.

ಕಸ್ತೂರಿ ರಂಗನ್ ವರದಿ ಬಗ್ಗೆ ಸಂಸದರು ಬಾಯಿ ಬಿಡುತ್ತಿಲ್ಲ ಎಂಬ ಮಧುಬಂಗಾರಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಶೋಭಾ ಕರಂದ್ಲಾಜೆ, ಕಸ್ತೂರಿ ರಂಗನ್ ವರದಿ ಕಾಂಗ್ರೆಸ್‍ನ ಕೂಸು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವರದಿಯಿಂದ ರೈತರಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಉತ್ತಮ ನಿರ್ಧಾರ ತಗೆದುಕೊಂಡಿದ್ದಾರೆ. ವರದಿ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ಇದ್ದು, ರೈತರು, ಜನವಸತಿಗೆ ತೊಂದರೆಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು. 

ವಿದ್ಯುತ್ ಖಾಸಗೀಕರಣ ಸಂಬಂಧ ಮಧುಬಂಗಾರಪ್ಪ ಆರೋಪಕ್ಕೆ ಪ್ರತಿಕ್ರಿಯಿಸಿ, ಆ ರೀತಿಯ ಯಾವುದೇ ಸುತ್ತೋಲೆ ಬಂದಿಲ್ಲ, ಚುನಾವಣೆ ಸಂದರ್ಭದಲ್ಲಿ ಆರೋಪ ಹೊರಿಸಿ ಜನರನ್ನು ಗೊಂದಲಕ್ಕೆ ಈಡು ಮಾಡಬೇಕು ಎಂಬ ಉದ್ದೇಶ ಅವರಲ್ಲಿದ್ದು, ಉಚಿತ ವಿದ್ಯುತ್ ನೀಡಿರುವುದು ಬಿಜೆಪಿ ಸರಕಾರದ ಸಾಧನೆ, ಕಾಂಗ್ರೆಸ್ ಮುಖಂಡರು ಏನನ್ನು ಮಾಡಿಲ್ಲ, ಆದರೆ ಆರೋಪ ಮಾಡುತ್ತಾರೆಂದು ಟೀಕಿಸಿದರು.

Similar News