ಭ್ರಷ್ಟಾಚಾರ ಮುಚ್ಚಿಕೊಳ್ಳಲು ಬಿಜೆಪಿಯಿಂದ ಪ್ರತಿಮೆ ರಾಜಕೀಯ: ಡಿ.ಕೆ.ಶಿವಕುಮಾರ್

Update: 2022-11-12 12:22 GMT

ಬೆಂಗಳೂರು, ನ.12: ಚುನಾವಣೆ ಸಮಯದಲ್ಲಿ ಟ್ರಬಲ್ ಇಂಜಿನ್ ಬಿಜೆಪಿ ಸರಕಾರ ತನ್ನ ಭ್ರಷ್ಟಾಚಾರ , ಹಗರಣ, ಕರ್ತವ್ಯಲೋಪಗಳನ್ನು ಮುಚ್ಚಿಕೊಳ್ಳಲು ಮಹನೀಯರ ಪ್ರತಿಮೆಯ ವಿಚಾರ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಗಾರಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಬಿಜೆಪಿಯ ಭ್ರಷ್ಟಾಚಾರದ ಸಾಧನೆ ಹಾಗೂ ಅಸಲಿಯತ್ತು ಈಗಾಗಲೇ ರಾಜ್ಯದ ಜನರ ಮುಂದೆ ಬಯಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿ ಅವರಿಂದ ಕೆಂಪೇಗೌಡರ ಪ್ರತಿಮೆ ಅನಾವರಣ, ಸಂತ ಕನಕದಾಸರು, ವಾಲ್ಮೀಕಿ ಮಹರ್ಷಿಗಳ ಪ್ರತಿಮೆಗಳಿಗೆ ಮಾಲೆ ಹಾಕಿಸಿದ್ದರಿಂದ ಈ ಮಹನೀಯರ ಸಮುದಾಯದವರ ಹೊಟ್ಟೆ ತುಂಬುವುದಿಲ್ಲ, ಅವರ ಸಮಸ್ಯೆ ಬಗೆಹರಿಯುವುದಿಲ್ಲ, ಕಣ್ಣೀರು ಕೊನೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ ರೈತರ ಆದಾಯ ಡಬಲ್ ಆಗಲಿಲ್ಲ. ಬದಲಿಗೆ ವೆಚ್ಚ ತ್ರಿಬಲ್ ಆಗಿದೆ. ಕೋವಿಡ್ ಸಂತ್ರಸ್ತರಿಗೆ ನೀಡಿದ ಪರಿಹಾರದ ಭರವಸೆ ಇನ್ನೂ ಈಡೇರಿಲ್ಲ. ಅಚ್ಚೇ ದಿನ್‍ಗಾಗಿ ಎದುರು ನೋಡುತ್ತಿದ್ದ ಬಡವರ ಕಷ್ಟ ಇನ್ನೂ ನೀಗಿಲ್ಲ. ಬಿಜೆಪಿಗರೇ ಪ್ರತಿಮೆ ರಾಜಕೀಯ ಬಿಡಿ. ಪ್ರಗತಿ ಎಲ್ಲಿದೆ ತೋರಿಸಿ? ಎಂದು ಶಿವಕುಮಾರ್ ಸವಾಲು ಹಾಕಿದ್ದಾರೆ.

Similar News