ನನಗೆ ಹೆಚ್ಚು ವರ್ಷ ಬದುಕಿ, ಹೆಚ್ಚು ಹೆಚ್ಚು ಜನರ ಸೇವೆ ಮಾಡಬೇಕೆಂಬ ಆಸೆ: ಸಿದ್ದರಾಮಯ್ಯ

''ಎಲ್ಲಿ ಬೇಕಾದರೂ ಸ್ಪರ್ಧೆ ಮಾಡುತ್ತೇನೆ ಎನ್ನುವವನೇ ನಿಜವಾದ ನಾಯಕ''

Update: 2022-11-14 11:39 GMT

ಮೈಸೂರು: 'ರಾಜ್ಯದ 224 ಕ್ಷೇತ್ರಗಳಲ್ಲಿ ಎಲ್ಲಿ ಬೇಕಾದರೂ ಸ್ಪರ್ಧೆ ಮಾಡುತ್ತೇನೆ ಎನ್ನುವವನೇ ನಿಜವಾದ ನಾಯಕ, ಹಾಗಾಗಿ ನಾನು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡುತ್ತೇನೆ' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ತಮ್ಮ ಸ್ಪರ್ಧೆಯ ಬಗ್ಗೆ ಟೀಕೆ ಮಾಡುವವರಿಗೆ ತಿರುಗೇಟು ನೀಡಿದ್ದಾರೆ. 

ನಗರದ ರಿಂಗ್ ರಸ್ತೆಯಲ್ಲಿ ಸೋಮವಾರ ಖಾಸಗಿ ಆಸ್ಪತ್ರೆ ಉದ್ಘಾಟಿಸಿ,  ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

''ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡುವ ಅವಕಾಶ ಇದೆ. 224 ಕ್ಷೇತ್ರಗಳಲ್ಲಿ ಎಲ್ಲಿ ಬೇಕಾದರೂ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎನ್ನುವವನೇ ನಿಜವಾದ ನಾಯಕ. ಹಾಗಾಗಿ ನಾನು  ಜನರು ಬಯಸಿದ ಕಡೆ ಸ್ಪರ್ಧೆ ಮಾಡುತ್ತೇನೆ'' ಎಂದು ಹೇಳಿದರು.

''ನನಗೆ ಹೆಚ್ಚು ವರ್ಷ ಬದುಕಬೇಕು ಎಂಬ ಆಸೆ ಇದೆ. ಬದುಕಿ ಹೆಚ್ಚು ಹೆಚ್ಚು ಜನರ ಸೇವೆ ಮಾಡಬೇಕು ಎಂಬುದು ನನ್ನ ಆಸೆ.  ಆದರೆ ನಾನು ಎಷ್ಟು ವರ್ಷ ಬದುಕಿರುತ್ತೇನೆ ಎಂಬುದು ಗೊತ್ತಿಲ್ಲ, ಬದುಕಿರುವಷ್ಟು ದಿನ ಜನರ ಸೇವೆ ಮಾಡುತ್ತೇನೆ. ಹೆಚ್ವು ವರ್ಷ ಬದುಕಬೇಕು ಎಂಬ ಆಸೆಯಂತೂ ಇದೆ'' ಎಂದು ಹೇಳಿದರು.

''ನನಗೆ ಕೋಲಾರದಿಂದ ಸ್ಪರ್ಧೆ ಮಾಡಿ ಎಂದು ಜನರು ಬಯಸಿದರೆ ಕೋಲಾರದಲ್ಲಿ, ವರುಣಾದವರು ಬಯಸಿದರೆ ವರುಣಾದಲ್ಲಿ ಸ್ಪರ್ಧಿಸುತ್ತೇನೆ. ಮುಖ್ಯವಾಗಿ ನಮ್ಮ ಹೈಕಮಾಂಡ್ ಸೂಚಿಸಿದ ಕಡೆ ಸ್ಪರ್ಧೆ ಮಾಡುತ್ತೇನೆ'' ಎಂದು ಸ್ಪಷ್ಟಪಡುಸಿದರು.

Similar News