ಮಡಿಕೇರಿ: ನಾಪತ್ತೆಯಾದ ವ್ಯಕ್ತಿಯ ಮೃತದೇಹ ರೈಲ್ವೇ ಹಳಿಯಲ್ಲಿ ಪತ್ತೆ

Update: 2022-11-14 18:50 GMT

ಮಡಿಕೇರಿ ನ.14 : ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ವಿರಾಜಪೇಟೆ ತಾಲೂಕಿನ ಕಾಕೋಟುಪರಂಬುವಿನ ವ್ಯಕ್ತಿಯೊಬ್ಬರ ಮೃತದೇಹ ಮೈಸೂರು ರೈಲ್ವೇ ಹಳಿಯಲ್ಲಿ ಪತ್ತೆಯಾಗಿರುವುದು ವರದಿಯಾಗಿದೆ. 

ಕಾಕೋಟುಪರಂಬು ಗ್ರಾಮದ ನಿವಾಸಿ ಮೇವಡ ಪ್ರಕಾಶ್(51) ಎಂಬುವವರೇ ಸಾವನ್ನಪ್ಪಿರುವ ವ್ಯಕ್ತಿ ಎಂದು ತಿಳಿದು ಬಂದಿದ್ದು,  ಇವರು ನಾಪತ್ತೆಯಾಗಿರುವ ಬಗ್ಗೆ ಇದೇ ನ.11ರಂದು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈ ನಡುವೆ ಮೈಸೂರು ರೈಲ್ವೆ ನಿಲ್ದಾಣ ಮತ್ತು ಎಂಎನ್‍ಜಿಟಿ ನಿಲ್ದಾಣದ ನಡುವೆ ನ.12 ರಂದು ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ವ್ಯಕ್ತಿಯ ಗುರುತು ಪತ್ತೆಗೆ ಅಲ್ಲಿನ ಪೊಲೀಸ್ ಠಾಣೆ ಪ್ರಕಟನೆ ಹೊರಡಿಸಿತ್ತು. ಇದರ ಆಧಾರದಲ್ಲಿ ರೈಲ್ವೆ ಗಾಡಿಗೆ ಸಿಲುಕಿ ಮೃತಪಟ್ಟ ವ್ಯಕ್ತಿ ಕಾಕೋಟುಪರಂಬು ಗ್ರಾಮದ ಪ್ರಕಾಶ್ ಎಂದು ಗುರುತಿಸಲಾಗಿದೆ.

  ಘಟನೆಗೆ ಸಂಬಂಧಿಸಿದಂತೆ ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Similar News