ಸಂಸದ ಪ್ರತಾಪ್ ಸಿಂಹನ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು ಹೀಗೆ...

ಗುಂಬಝ್ ಮಾದರಿಯಲ್ಲಿರುವ ಬಸ್ ನಿಲ್ದಾಣ ತೆರವು ವಿಚಾರ

Update: 2022-11-15 07:28 GMT

ಮೈಸೂರು: ಗುಂಬಝ್ ಮಾದರಿಯಲ್ಲಿದೆ ಎಂದು ಬಸ್ ನಿಲ್ದಾಣ ತೆರವು ಮಾಡುತ್ತೇನೆ ಎನ್ನುವ ಸಂಸದ ಪತಾಪ ಸಿಂಹನಿಗೆ ಗುಂಬಝ್ ಮಾದರಿಯಲ್ಲಿರುವ ಕಟ್ಟಡಗಳನ್ನು ಒಡೆಯಲು ಸಾಧ್ಯವೇ?, ಎರಡು ಬಾರಿ ಸಂಸದನಾದವನಿಗೆ ಸಾಮಾನ್ಯ ಜ್ಞಾನ ಎಂಬುದು ಇರಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಮಾಧ್ದವರೊಂದಿಗೆ ಮಾತನಾಡಿದ ಅವರು, ಗುಂಬಝ್ ಮಾದರಿಯಲ್ಲಿದೆ ಎಂದು ಸರ್ಕಾರ ಕಟ್ಟಿಸಿರುವ ಬಸ್ ನಿಲ್ದಾಣ ಒಡೆಯುತ್ತೇನೆ ಎನ್ನಲು ಸಂಸದ ಪ್ರತಾಪ್ ಸಿಂಹ ಏನು ಸ್ವಂತ ಹಣದಿಂದ ಕಟ್ಟಿಸಿರುವುದಲ್ಲ, ಇಂಜಿನಿಯರ್ ಗಳು ಯಾವ ಮಾದರಿಯಲ್ಲಿ ಇರಬೇಕು ಎಂದು ತೀರ್ಮಾನ ಮಾಡಿ ಕಟ್ಟಿಸಿದ್ದಾರೆ. ಅದನ್ನು ಬುಲ್ಡೋಜರ್ ತಂದು ಹೊಡೆಸುತ್ತೇನೆ ಎಂದರೆ ಏನು ಪ್ರತಾಪ್ ಸಿಂಹ ಸ್ವಂತ ಹಣದಿಂದ ಕಟ್ಟಿಸಿದ್ದಾನೆಯೇ? ಎಂದು ಪ್ರಶ್ನಿಸಿದರು.

ನಮ್ಮ ದೇಶವನ್ನು 600 ವರ್ಷಗಳ ಕಾಲ ಮೊಘಲರು ಆಡಳಿತ ನಡೆಸಿದ್ದರು. ಆಗ ಇವರೆಲ್ಲ ಎಲ್ಲಿಗೆ ಹೋಗಿದ್ದರು. ಹಾಗಾದರೆ ಗುಂಬಝ್ ಮಾದರಿಯಲ್ಲಿರುವ ಕಟ್ಡಗಳನ್ನು ಇವರು ಹೊಡೆಸಲು ಸಾಧ್ಯವೆ?  ಸುಮ್ಮನೆ ಇತಿಹಾಸ ತಿರುಚುವ ಕೆಲಸ ಮಾಡಬಾರದು. ಚುನಾವಣೆ ದೃಷ್ಟಿ ಇಟ್ಟುಕೊಂಡು ಮತ ಬ್ಯಾಂಕ್ ಕ್ರೂಢಿಕರಿಸಲು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಅವರು, ಜನ ಬುದ್ಧಿವಂತರಿದ್ದಾರೆ. ಇವರು ಎಷ್ಟೇ ನಾಟಕ ಆಡಿದರು ಬುದ್ಧಿ ಕಲಿಸಲಿದ್ದಾರೆ ಎಂದರು.

ಸಿದ್ದರಾಮಯ್ಯ ಅವರನ್ನು ಜೆಡಿಎಸ್, ಬಿಜೆಪಿ ಪಕ್ಷದವರು ಸೋಲಿಸಬೇಕಿಲ್ಲ, ಕಾಂಗ್ರೆಸ್ ನವರೆ ಸೋಲಿಸುತ್ತಾರೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅದಕೆಲ್ಲಾ ನಾನು ಉತ್ತರ ಕೊಡುವುದಿಲ್ಲ, ನಾನು 8 ಬಾರಿ ಗೆದ್ದಿದ್ದೇನೆ. ಹಾಗದರೆ ಇವರು ಬಂದು ನನ್ನ ಗೆಲ್ಲಿಸಿದ್ದಾರಾ?. ತೀರ್ಮಾನ ಮಾಡೋದು ಜನರು ಎಂದು ಹೇಳಿದರು.

Similar News