ಸಿದ್ದರಾಮಯ್ಯ ಸಿಎಂ ಆಗಬೇಕಾದರೆ ಮೊದಲು ಡಿಕೆಶಿ ಬೆಂಬಲ ಪಡೆಯಲಿ: ಮುಖ್ಯಮಂತ್ರಿ ಬೊಮ್ಮಾಯಿ

Update: 2022-11-15 12:11 GMT

ಚಿಕ್ಕಮಗಳೂರು, ನವೆಂಬರ್ 15: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮೊದಲು ಡಿ.ಕೆ.ಶಿವಕುಮಾರ್ ಅವರ ಬೆಂಬಲ ಮೊದಲು ಪಡೆಯಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ಅವರು ಇಂದು ಕಡೂರು ತಾಲೂಕಿನಲ್ಲಿ ಚಿಕ್ಕಮಗಳೂರು ಬಿಜೆಪಿ ಹಮ್ಮಿಕೊಂಡಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು.

''ನಾನು ಮುಖ್ಯಮಂತ್ರಿಯಾಗಬೇಕಾದರೆ ಜನರು ಕಾಂಗ್ರೆಸ್ಸಿಗೆ ಮತ ಹಾಕಬೇಕೆಂದು ಸಿದ್ದರಾಮಯ್ಯ ಹೇಳಿದ್ದಾರೆ.  ಜನರು ಇರಲಿ, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಹಿರಂಗವಾಗಿ ಹೇಳಲಿ. ಡಿ.ಕೆ.ಶಿವಕುಮಾರ್ ಬೆಂಬಲ ಪಡೆಯಲು ಸಾಧ್ಯವಿಲ್ಲದಿದ್ದವರು ಜನರ ಬೆಂಬಲ ಹೇಗೆ ಕೇಳುತ್ತಾರೆ'' ಎಂದು ವಾಗ್ದಾಳಿ ನಡೆಸಿದರು.

''ಅನ್ನಭಾಗ್ಯ ಯೋಜನೆಗೆ ಕನ್ನ ಹಾಕಿರುವುದನ್ನು ಜನ ಮರೆತಿಲ್ಲ''

2013 ರಲ್ಲಿಯೂ  ಮುಖ್ಯಮಂತ್ರಿಯಾಗಲು ಅವಕಾಶ ಕೊಡಿ ಎಂದು ಕೇಳಿದಾಗ  ಜನ ಆಶೀರ್ವಾದ ಮಾಡಿ ಮುಖ್ಯಮಂತ್ರಿಯೂ ಆದರು.  ಆಶೀರ್ವಾದ ಮಾಡಿದ ಜನಗಳಿಗೆ ಭಾಗ್ಯಗಳನ್ನು ಘೋಷಿಸಿ, ಕೇವಲ ಪುಸ್ತಕದಲ್ಲಿಟ್ಟು ಜನರಿಗೆ ಯಾವುದೂ ಕೂಡ ತಲುಪಲಿಲ್ಲ. 2018 ರಲ್ಲಿ ಜನರು  ವಿರೋಧ ಪಕ್ಷದಲ್ಲಿ ಕೂಡಿಸಿದರು. ನಿಮ್ಮ ಕಾಲದಲ್ಲಿ ಅನ್ನಕ್ಕೆ ಕನ್ನ ಹಾಕಿದ್ದನ್ನು ಜನ ಮರೆತಿಲ್ಲ. ಅನ್ನಭಾಗ್ಯ ಯೋಜನೆಗೆ ಕನ್ನ ಹಾಕಿರುವುದನ್ನು ಮರೆತಿಲ್ಲ. ನಿಮ್ಮ ಕಾಲದಲ್ಲಿ ನೀರಾವರಿಯಲ್ಲಿ ಶೇ 100 ರಷ್ಟು ಪರ್ಸೆಂಟೇಜ್ ಪಡೆದಿರುವುದನ್ನು, ಹಾಸ್ಟಲ್‍ಗಳಿಗೆ ನೀಡಬೇಕಿದ್ದ ದಿಂಬು, ಹಾಸಿಗೆಯಲ್ಲಿ ಬಿಡಿಎ,  ಭ್ರಷ್ಟಾಚಾರ ಮಾಡಿರುವುದನ್ನು,  ಧರ್ಮವನ್ನು ಒಡೆಯುವ ಪ್ರಯತ್ನವನ್ನು,  ಸಾಮಾಜಿಕ ಸಾಮರಸ್ಯ ಹಾಳು ಮಾಡಿ 20 ಕ್ಕಿಂತ ಹೆಚ್ಚು ಬಿಜೆಪಿ ಮತ್ತು ಹಿಂದೂ ಸಂಘಟನೆಯ ಯುವಕರ ಕೊಲೆಯಾಗಿದ್ದನ್ನು  ಜನ ಮರೆತಿಲ್ಲ. ಯಾರ ಉದ್ಧಾರಕ್ಕಾಗಿ ಅವರನ್ನು ಮುಖ್ಯಮಂತ್ರಿ ಮಾಡಬೇಕು ಕರ್ನಾಟಕದ ಜನ ಜಾಗೃತರಾಗಿದ್ದಾರೆ ಎಂದರು.

ಅಧಿಕಾರಕ್ಕಾಗಿ ರಾಜಕಾರಣ  ಮಾಡುವ ಕಾಂಗ್ರೆಸ್

ಎಸ್.ಸಿ.ಪಿ/ಟಿಎಸ್.ಪಿ ಯೋಜನೆಯಡಿ ಅನುದಾನ ಮೀಸಲಿಟ್ಟು ಒಂದು ವರ್ಷವಾದರೂ ಕಾಂಗ್ರೆಸ್ ಖರ್ಚು ಮಾಡಲಿಲ್ಲ. ಯಾರಿಗೂ  ಅವರ ಅನುದಾನ ಮುಟ್ಟಲಿಲ್ಲ.  ಇವರನ್ನು ಮತ್ತೊಮ್ಮೆ   ಯಾರ ಹಿತಕ್ಕಾಗಿ ಆಯ್ಕೆ ಮಾಡಬೇಕು. ಅಧಿಕಾರಕ್ಕಾಗಿ ರಾಜಕಾರಣ  ಮಾಡುವುದು ಕಾಂಗ್ರೆಸ್. ಭಾರತೀಯ ಜನತಾ ಪಕ್ಷ ಜನರ ರಾಜಕಾರಣ ಮಾಡುತ್ತದೆ. ಜನ ತೀರ್ಮಾನ ಮಾಡಿದ್ದಾರೆ.  ಜನಸಂಕಲ್ಪ ಯಾತ್ರೆ ಬರುವ ದಿನಗಳಲ್ಲಿ ವಿಜಯ ಸಂಕಲ್ಪ ಯಾತ್ರೆಯಾಗುವುದರಲ್ಲಿ ಸಂದೇಹವಿಲ್ಲ ಎಂದರು. ಜನರ ಸಲುವಾಗಿ ರಾಜಕಾರಣ ಮಾಡುವವರಿಗೆ ಜನ ಬೆಂಬಲ ನೀಡಲು ತೀರ್ಮಾನಿಸಿದ್ದಾರೆ. ನಾನು ಎನ್ನುವವರಿಗೆ ಜನ ಮನ್ನಣೆ ನೀಡುವುದಿಲ್ಲ ಎಂದರು.

ಮಾಧ್ಯ್ಯಮದವರು ಜನರನ್ನು ತೋರಿಸಿ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಹಳದಿ ಕಣ್ಣು.  ಮಾಧ್ಯಮದವರು/ ಕ್ಯಾಮರಾಮನ್‍ಗಳು ಜನಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ನೆರೆದಿರುವ ಜನರನ್ನು ತೋರಿಸಬೇಕು.  ಸಿದ್ದರಾಮಯ್ಯ ಆತ್ಮವಂಚನೆಯ ಭಾಷಣ ಮಾಡುತ್ತಾರೆ ಎಂದರು.

ಪ್ರಜಾಪ್ರಭುತ್ವದಲ್ಲಿ ಜನರ ಸಂಕಲ್ಪವನ್ನು ಯಾವುದೇ ಶಕ್ತಿ ತಡೆಯಲು ಸಾಧ್ಯವಿಲ್ಲ.  ಜನಶಕ್ತಿಯ ಮುಂದೆ ಯಾವುದೇ ಶಕ್ತಿ ನಿಲ್ಲುವುದಿಲ್ಲ ಎಂದು ತೋರಿಸಿಕೊಟ್ಟಿದ್ದೀರಿ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,  ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ , ಶಾಸಕ ಬೆಳ್ಳಿ ಪ್ರಕಾಶ್, ಮೊದಲಾದವರು ಉಪಸ್ಥಿತರಿದ್ದರು.

Similar News