JDS ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಸಿದ್ಧ, ನಮ್ಮ ಮನೆಯ ಜ್ಯೋತಿಷಿ ರೇವಣ್ಣ ಈಗ ಬೇಡ ಅಂದ್ರು: ಕುಮಾರಸ್ವಾಮಿ

Update: 2022-11-18 14:18 GMT

ಮೈಸೂರು, ನ. 18: 'ಮುಂದಿನ ವಿಧಾನಸಭೆ ಚುನಾವಣೆಗೆ ಜೆಡಿಎಸ್‌ ಪಕ್ಷದ ಮೊದಲ ಅಭ್ಯರ್ಥಿಗಳ ಪಟ್ಟಿ ಈಗಾಗಲೆ ಸಿದ್ಧವಾಗಿದೆ, ಆದರೆ ನಮ್ಮ ಮನೆಯಲ್ಲಿ ಜ್ಯೋತಿಷಿಗಳಿದ್ದಾರೆ. ಇವತ್ತಿನ ದಿನ ಸರಿಯಿಲ್ಲ ಎಂದು ರೇವಣ್ಣ ಹೇಳಿದ್ದಾರೆ. ಆದ್ದರಿಂದ ಬಿಡುಗಡೆ ಮಾಡುತ್ತಿಲ್ಲ' ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಕೋಲಾರದ ಮುಳಬಾಗಿಲಿನಲ್ಲಿ ಪಂಚರತ್ನ ರಥಯಾತ್ರೆಯ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಅವರು, ''ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರ ಕುತಂತ್ರದಿಂದ ನಮ್ಮ‌ ಅಭ್ಯರ್ಥಿಗಳು ಸೋತಿದ್ದಾರೆ.  ಇಲ್ಲವಾದಲ್ಲಿ 75 ಸ್ಥಾನಗಳು ಬರುತ್ತಿತ್ತು.  ಕರ್ನಾಟಕ‌ ರಾಜ್ಯದಲ್ಲಿ ನಡೆಯುತ್ತಿರುವ ಸರ್ಕಾರ, ಬಿಜೆಪಿಯವರು ಮತ್ತೆ ಸಿದ್ದರಾಮಯ್ಯನವರದ್ದು.  ನಾಚಿಕೆಯಾಗಬೇಕು ನಿಮಗೆ.  ಯಾರ ಮನೆ ಬಾಗಿಲಿಗೂ ಅಧಿಕಾರಕ್ಕಾಗಿ ಹೋಗಿಲ್ಲ. ನಮ್ಮ‌ಶಕ್ತಿ ನೋಡಿ ನಮ್ಮ‌ ಮನೆ ಬಾಗಿಲು ತಳ್ಳುತ್ತಾರೆ‌. ಇಂತಹ ದರಿದ್ರ ಸರ್ಕಾರ, ಈ ನಾಡಿನ ಜೊತೆ ಚೆಲ್ಲಾಟ ಆಡುತ್ತಿರುವುದಕ್ಕೆ ಕಾಂಗ್ರೆಸ್ ಕಾರಣ'' ಎಂದು ಕಿಡಿಕಾರಿದ್ದಾರೆ. 

''ಪಕ್ಷದ ಮೊದಲ ಅಭ್ಯರ್ಥಿಗಳ ಪಟ್ಟಿ  ಬಿಡುಗಡೆ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತ ಸಮಯ ನೋಡಿಕೊಂಡು ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷರ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು'' ಎಂದು ತಿಳಿಸಿದ್ದಾರೆ.

Similar News