ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಗೆ ತಿರುಗುಬಾಣವಾಗಲಿದೆ: ಸಿಎಂ ಬೊಮ್ಮಾಯಿ

ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ ಆರೋಪ

Update: 2022-11-20 05:52 GMT

 ಚುನಾವಣಾ ಆಯೋಗದ ನಿಯಮಾವಳನ್ನು ಗಾಳಿಗೆ ತೂರಿ ಕಾಂಗ್ರೆಸ್ ಸರ್ಕಾರ ಚಿಲುಮೆ ಸಂಸ್ಥೆಗೆ ಆದೇಶವನ್ನು ನೀಡಿದ್ದು, ತನಿಖೆಯ ಮೂಲಕ ಎಲ್ಲ ಸತ್ಯಗಳು ಹೊರಬರಲಿದೆ. ಕಾಂಗ್ರೆಸ್ ಅವರ ಆರೋಪ ನಿರಾಧಾರ. ಈ ಪ್ರಕರಣ ಅವರಿಗೇ ತಿರುಗುಬಾಣವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕಾವೇರಿ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ಹದ್ದುಮೀರಿ ಅಧಿಕಾರ ದುರುಪಯೋಗ ಮಾಡಿಕೊಂಡಿದೆ:
ಸಿದ್ದರಾಮಯ್ಯ ಅವರ ಸರ್ಕಾರ 2013 ರಿಂದಲೂ ತನಿಖೆಯಾಗಬೇಕು ಎಂದು ಸೂಚನೆ ನೀಡಲಾಗಿದೆ. 2013 ರಿಂದ ಯಾವ ಆದೇಶಗಳನ್ನು ನೀಡಿದ್ದಾರೆ ಎಂಬ ಎಲ್ಲ ಸ್ಪಷ್ಟವಾದ ಸತ್ಯಗಳು  ಹೊರಗೆ ಬರಲಿ ಎಂಬ ಉದ್ದೇಶದಿಂದ ತನಿಖೆಗೆ ಆದೇಶ ನೀಡಲಾಗಿದೆ. ಯಾವ ಉದ್ದೇಶದಿಂದ ಚಿಲುಮೆ ಸಂಸ್ಥೆಗೆ ಆದೇಶ ನೀಡಿರುವ ಸತ್ಯಾಸತ್ಯತೆ ಜನರಿಗೆ ಗೊತ್ತಾಗಬೇಕು. ನಮ್ಮ ಸರ್ಕಾರದ ಆದೇಶದಲ್ಲಿ ಮತದಾನದ ಜಾಗೃತಿ ಮೂಡಿಸುವ ಕಾರ್ಯಕ್ಕೆ ಆದೇಶ ನೀಡಲಾಗಿದ್ದು, ಚಿಲುಮೆ ಸಂಸ್ಥೆಗೆ ಯಾವುದೇ ರಾಜಕೀಯ ಪಕ್ಷದ ಜೊತೆ ಸಂಬಂಧವಿರಬಾರದು ಎಂಬ ಷರತ್ತನ್ನು ವಿಧಿಸಲಾಗಿದೆ. ಆದರೆ ಸಿದ್ದರಾಮಯ್ಯ ಅವರು ನೀಡಿರುವ ಆದೇಶದಲ್ಲಿ ಚುನಾವಣಾ ಆಯೋಗ ನಿರ್ವಹಿಸಬೇಕಾ ಮತ ಪರಿಷ್ಕರಣೆಯ ಕಾರ್ಯವನ್ನೇ ಸಂಸ್ಥೆಗೆ  ನೀಡಿದ್ದಾರೆ. ಚುನಾವಣಾ ಆಯೋಗ ನಿರ್ವಹಿಸಬೇಕಾದ ಕಾರ್ಯವನ್ನು ಖಾಸಗಿ ಸಂಸ್ಥೆಗೆ ವಹಿಸಿರುವುದು ಅಕ್ಷಮ್ಯ ಅಪರಾಧ. ಅವರ ಅವಧಿಯಲ್ಲಿ ತಹಶೀಲ್ದಾರ ರವರಿಗೆ  ಬಿಎಲ್ ಓಗಳ ನೇಮಕ ಮಾಡುವ ಆದೇಶವನ್ನೂ ನೀಡಿದ್ದಾರೆ. ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಹದ್ದುಮೀರಿ ಅಧಿಕಾರದ ದುರುಪಯೋಗ ಮಾಡಲಾಗಿದೆ ಎಂದರು.

ಸರ್ಕಾರದ ಮೇಲೆ ರಾಜಕೀಯ ಪ್ರೇರಿತ ಆರೋಪ
ಮತದಾರರ ಪರಿಷ್ಕರಣೆಯ ಕಾರ್ಯದಲ್ಲಿ ಮತದಾರರ ಹೆಸರನ್ನು ಸೇರಿಸುವುದು ಹಾಗೂ ಕೈಬಿಡುವುದು ಚುನಾವಣಾ ಆಯೋಗದ ಕೆಲಸವೇ ಹೊರತು ಸರ್ಕಾರದ್ದಲ್ಲ. ನಮ್ಮ ಸರ್ಕಾರದ ಮೇಲೆ ರಾಜಕೀಯ ಪ್ರೇರಿತವಾಗಿ ಆರೋಪ ಹೊರಿಸಲಾಗುತ್ತಿದೆ ಎಂದರು.

ತನಿಖೆಯಿಂದ ಸಂಪೂರ್ಣ ಸತ್ಯ ಹೊರಬರಲಿದೆ:
ಮತದಾರರ ವಿವರ ಪಡೆಯಲು ಏಜೆನ್ಸಿಯಾಗಿ ಸಚಿವರು ಬಳಸಿಕೊಂಡಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಯಿಸಿ, ಎಲ್ಲಾ ಪಕ್ಷಗಳು ಸಂಸ್ಥೆಗಳನ್ನು ಏಜೆನ್ಸಿಯಾಗಿ ಬಳಸಿಕೊಳ್ಳುತ್ತಾರೆ. ರಾಜಕೀಯ ಪಕ್ಷಗಳು ಸಮೀಕ್ಷೆಯನ್ನು ಮಾಡಿಸುತ್ತದೆ. ಇಲ್ಲಿ ಸರ್ಕಾರ ಯಾವ ರೀತಿಯ ಆದೇಶವನ್ನು ನೀಡಿದೆ ಎಂಬುದಷ್ಟೇ ಮುಖ್ಯ. ನಮ್ಮ ಸರ್ಕಾರದ ಆದೇಶದಲ್ಲಿ ರಾಜಕೀಯ ಪಕ್ಷಗಳೊಂದಿಗೆ ಸಂಬಂಧವಿರಬಾರದು ಎಂಬ ಷರತ್ತು ವಿಧಿಸಲಾಗಿದೆ. ಅವರ ಆದೇಶದಲ್ಲಿ ಈ ಷರತ್ತನ್ನು ವಿಧಿಸಿಯೇ ಇಲ್ಲ ಮತ್ತು ಬಿಎಲ್ಓ ನೇಮಕಾತಿಗೂ ಅನುಮತಿಯನ್ನು ಕಾನೂನುಬಾಹಿರವಾಗಿ ನೀಡಿದ್ದಾರೆ. ಉನ್ನತ ಮಟ್ಟದ ತನಿಖೆ ಮಾಡಿಸಲಾಗುತ್ತದೆಯೇ ಎಂಬುದಕ್ಕೆ ಪ್ರತಿಕ್ರಯಿಸಿ, ಈ ಮೊದಲು ಕೇವಲ 2022ರದ್ದು ತನಿಖೆ ಮಾಡಿಸಲು ಸೂಚಿಸಲಾಗಿತ್ತು. ಆದರೆ ಈಗ 2013 ರಿಂದ ತನಿಖೆ ಮಾಡಿಸಲು ಸೂಚಿಸಲಾಗಿದ್ದು, ಎಲ್ಲ ಸತ್ಯಗಳೂ ಹೊರಬರಲಿದೆ ಎಂದರು.

ಮತದಾರರ ಹೆಸರನ್ನು ಕೈಬಿಟ್ಟಿರುವ ಆರೋಪ ನಿರಾಧಾರ:
ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ಕಾಂಗ್ರೆಸ್ ನವರ ಆರೋಪವಾಗಿದೆ. 27 ಲಕ್ಷ ಮತದಾರರನ್ನು ಕೈಬಿಡಲಾಗಿದೆ ಎಂಬು ಶುದ್ಧ ಸುಳ್ಳು. ಶಿವಾಜಿನಗರ ಕ್ಷೇತ್ರದಲ್ಲಿ ಕೇವಲ 15000 ಹೆಸರನ್ನು ಹಾಗೂ ಕೆ.ಆರ್.ಪುರ, ಮಹಾದೇವಪುರಗಳಲ್ಲಿ ಕೇವಲ 45 ರಿಂದ 47 ಸಾವಿರ ಹೆಸರುಗಳನ್ನು ಕೈಬಿಡಲಾಗಿದೆ. ಆದ್ದರಿಂದ ಈ ಆರೋಪ ನಿರಾಧಾರ ಎಂದರು.

ನಕಲಿ ಮತದಾರರನ್ನು ತೆಗೆದರೆ ನ್ಯಾಯಸಮ್ಮತವಾದ ಚುನಾವಣೆ ಸಾಧ್ಯ:
ಈ ಬಾರಿ ಚುನಾವಣಾ ಆಯೋಗವು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ  ಎರಡು ಪ್ರದೇಶದಲ್ಲಿ ಇರುವ ವೋಟರ್ ಐಡಿಗಳನ್ನು ತೆಗೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಈ ರೀತಿ ನಕಲಿ ಮತದಾರರನ್ನು ತೆಗೆದರೆ ಮಾತ್ರ ನ್ಯಾಯಸಮ್ಮತವಾದ ಚುನಾವಣೆ ನಡೆಸಲು ಸಾಧ್ಯ. ಬೇರೆ ಪ್ರದೇಶದಲ್ಲಿದ್ದವರನ್ನು ಬೇರೆ ಯಾವುದೇ ಪ್ರದೇಶಕ್ಕೆ ಸೇರಿಸಿ ಮತ ಹಾಕಿಸುವ ಕಾಂಗ್ರೆಸ್ ನವರ ತಂತ್ರ ಬಂದ್ ಆಗಲಿದೆ ಎಂಬ ಆತಂಕದಿಂದ ಈ ರೀತಿ ಹುಲ್ಲೆಬ್ಬಿಸಿದ್ದಾರೆ ಎಂದರು.

ಕೇಂದ್ರ ಚುನಾವಣಾ ಆಯೋಗಕ್ಕೂ ಕಾಂಗ್ರೆಸ್ ದೂರು ನೀಡಲಿದೆ ಎಂಬುದಕ್ಕೆ ಉತ್ತರಿಸಿ, ಅವರು ಯಾರಿಗೆ ಬೇಕಾದರೂ ದೂರು ನೀಡಲಿ, ನ್ಯಾಯ ಹಾಗೂ ಸತ್ಯ ಖಂಡಿತ ಹೊರಬರಲಿದೆ ಹಾಗೂ ಅವರು ಎಬ್ಬಿಸಿರುವ ಈ ಪ್ರಕರಣ ಅವರಿಗೆ ತಿರುಗುಬಾಣವಾಗಲಿದೆ ಎಂದು ತಿಳಿಸಿದರು

Similar News