ದಾವಣಗೆರೆ: ಗರ್ಭಿಣಿ ಪತ್ನಿಯನ್ನು ಹತ್ಯೆಗೈದು ಮೃತದೇಹವನ್ನು ಕಾಡಿನಲ್ಲಿ ಹೂತಿಟ್ಟಿದ್ದ ಪತಿ!

Update: 2022-11-21 17:12 GMT

ಚನ್ನಗಿರಿ(ದಾವಣಗೆರೆ), ನ.21: ಗರ್ಭಿಣಿ ಪತ್ನಿಯನ್ನು ಹತ್ಯೆಗೈದು ಆಕೆಯ ಮೃತದೇಹವನ್ನು ಕಾಡಿನಲ್ಲಿ ಹೂತಿಟ್ಟಿದ್ದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿರುವುದು ತಾಲೂಕಿನ ಉಬ್ರಾಣಿ ಹೋಬಳಿಯ ಗಂಗಗೊಂಡನಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ. 

ದಾವಣಗೆರೆ ತಾಲೂಕಿನ ಐಗೂರು ಗ್ರಾಮದ ಲೋಕೇಶಪ್ಪ ಹಾಗೂ ರತ್ನಮ್ಮ ದಂಪತಿಯ ಪುತ್ರಿ ಚಂದ್ರಕಲಾ ಅಲಿಯಾಸ್ ರಶ್ಮಿ (21) ಮೃತ ಯುವತಿಯಾಗಿದ್ದು, ಗಂಗಗೊಂಡನಹಳ್ಳಿ ಗ್ರಾಮದ ಮೋಹನ್ ಕುಮಾರ್ (25) ಪತ್ನಿಯನ್ನು ಹತ್ಯೆಗೈದಿರುವ ಆರೋಪಿ ಎಂದು ತಿಳಿದು ಬಂದಿದೆ.

ಆರೋಪಿ ಮೋಹನ್ ಕುಮಾರ್,  ಮಗಳಿಗೆ ವರದಕ್ಷಿಣೆ ಕಿರುಕಳ ಹಾಗೂ ಶೀಲ ಶಂಕಿಸಿ ಹಿಂಸೆ ನೀಡುತ್ತಿದ್ದ ಎಂದು  ಮೃತ ರೇಷ್ಮಾ ಪೋಷಕರು ಆರೋಪಿಸಿದ್ದಾರೆ. 

ಕಳೆದ ಕೆಲ ದಿನಗಳಿಂದ ರೇಷ್ಮಾ ನಾಪತ್ತೆಯಾಗಿದ್ದು, ಈ ಸಂಬಂಧ ರೇಷ್ಮಾ ಪತಿ ವಿರುದ್ಧ ರೇಷ್ಮಾ ಅವರ ತಂದೆ ಪೊಲೀಸ್ ದೂರು ನೀಡಿದ್ದರು. ಈ ದೂರಿನ ಮೇರೆಗೆ  ಆರೋಪಿಯನ್ನು ಬಂಧಿಸಿರುವ ಪೊಲೀಸರು,  ಒಂದೂವರೆ ತಿಂಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 

ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದ ಆರೋಪಿ: ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ ಆರೋಪಿ ಪತಿಯು, ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಹುಣಸಘಟ್ಟ ಕಾಡಿನಲ್ಲಿ ಗುಂಡಿ ತೆಗೆದು ಶವವನ್ನು ಹೂತ್ತಿಟ್ಟಿದ್ದಾನೆ. ಆ ಬಳಿಕ ‘ರೇಷ್ಮಾ  ಕಾಣೆಯಾಗಿದ್ದಾಳೆ’ ಎಂದು ಆಕೆಯ ಪೋಷಕರಿಗೆ ತಿಳಿಸಿದ್ದೂ ಅಲ್ಲದೇ, ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪತ್ನಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದ ಎನ್ನಲಾಗಿದೆ.

Similar News