ಶಾಸಕ ಎಂ.ಪಿ.ಕುಮಾರಸ್ವಾಮಿ ಮೇಲಿನ ಹಲ್ಲೆ ಬಿಜೆಪಿಯ 'ಬಿ' ಟೀಮ್‍ನ ಕೃತ್ಯ: ಕೆಪಿಸಿಸಿ ವಕ್ತಾರ ಎಚ್.ಎಚ್. ದೇವರಾಜ್ ಆರೋಪ

Update: 2022-11-22 11:58 GMT

ಚಿಕ್ಕಮಗಳೂರು, ನ.22: ಕಾಡಾನೆ ದಾಳಿಯಿಂದ ರವಿವಾರ ಮೃತಪಟ್ಟ ಘಟನಾ ಸ್ಥಳಕ್ಕೆ ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಭೇಟಿ ನೀಡಿದ್ದ ಸಂದರ್ಭದಲ್ಲಿ ಉದ್ರಿಕ್ತ ಜನರು ನಡೆಸಿದ್ದರೆನ್ನಲಾದ ದಾಂಧಲೆಯ ಹಿಂದೆ ಮೂಡಿಗೆರೆಯಲ್ಲಿ ಶಾಸಕರ ವಿರುದ್ಧ ಕಾರ್ಯನಿರ್ವಹಿಸುತ್ತಿರುವ ಬಿಜೆಪಿಯ ಬಿ ಟೀಮ್‍ನ ಕೃತ್ಯವಾಗಿದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಆರೋಪಿಸಿದ್ದಾರೆ.

ಮಂಗಳವಾರ ನಗರದಲ್ಲಿ ಕಾಂಗ್ರೆಸ್, ಸಿಪಿಐ, ಜೆಡಿಎಸ್ ಪಕ್ಷಗಳ ವತಿಯಿಂದ ಕರೆಯಲಾಗಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಮೂಡಿಗೆರೆ ತಾಲೂಕಿನ ಕುಂದೂರು ಹುಲ್ಲೇಮನೆ ಗ್ರಾಮದಲ್ಲಿ ರವಿವಾರ ಬೆಳಗ್ಗೆ ಕಾಡಾನೆ ದಾಳಿಯಿಂದ ಶೋಭಾ ಎಂಬ ಮಹಿಳೆ ಮೃತಪಟ್ಟಿದ್ದು, ಈ ಘಟನಾ ಸ್ಥಳಕ್ಕೆ ಶಾಸಕ ಕುಮಾರಸ್ವಾಮಿ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಉದ್ರಿಕ್ತರಾಗಿದ್ದ ಜನರ ಗುಂಪೊಂದು ಶಾಸಕರನ್ನು ಅಟ್ಟಾಡಿಸಿ ದಾಂಧಲೆ ನಡೆಸಿದ್ದಾರೆ. ಈ ವೇಳೆ ಶಾಸಕರ ಮೇಲೆ ಹಲ್ಲೆಯನ್ನೂ ಮಾಡಲಾಗಿದೆ ಎಂದು ಸ್ವತಃ ಶಾಸಕರೇ ಹೇಳಿಕೆ ನೀಡಿರುವುದು ದುರಾದೃಷ್ಟಕರ. ಸ್ಥಳದಲ್ಲಿದ್ದ ಗ್ರಾಮಸ್ಥರ ಪ್ರಕಾರ ಶಾಸಕರ ಮೇಲೆ ಸ್ಥಳೀಯ ಗ್ರಾಮಸ್ಥರು ಯಾರೂ ಹಲ್ಲೆ ಮಾಡಿಲ್ಲ. ಒಂದು ವೇಳೆ ಹಲ್ಲೆ ನಡೆದಿದ್ದರೆ ಅದು ಮೂಡಿಗೆರೆ ಕ್ಷೇತ್ರದಲ್ಲಿ ಶಾಸಕ ಕುಮಾರಸ್ವಾಮಿ ವಿರುದ್ಧ ಕಾರ್ಯನಿರ್ವಹಿಸುತ್ತಿರುವ ಬಿಜೆಪಿಯ ಬಿ ಟೀಮ್‍ನ ಕೃತ್ಯವಾಗಿದೆ'' ಎಂದು ಅವರು ಆರೋಪಿಸಿದರು.

''ರವಿವಾರ ಕಾಡಾನೆ ದಾಳಿ ನಡೆದ ಗ್ರಾಮಕ್ಕೆ ಬಿಜೆಪಿ ಮುಖಂಡರು ಭೇಟಿ ನೀಡಿದ್ದರು. ಮೂಡಿಗೆರೆ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ದೀಪಕ್ ದೊಡ್ಡಯ್ಯ ಅವರೂ ಇದ್ದರು. ಘಟನೆ ಸಂಬಂಧ ಸ್ವತಃ ಶಾಸಕ ಕುಮಾರಸ್ವಾಮಿ ಅವರು ದೀಪಕ್ ದೊಡ್ಡಯ್ಯ ಅವರ ಮೇಲೆ ಶಂಕೆ ವ್ಯಕ್ತಪಡಿಸಿರುವುದರಿಂದ ಶಾಸಕರನ್ನು ಅಟ್ಟಾಡಿಸಿದ ಘಟನೆಯಲ್ಲಿ ಬಿಜೆಪಿಯ ಬಿ ಟೀಮ್ ಕೆಲಸ ಮಾಡಿರುವುದು ಸ್ಪಷ್ಟ. ಘಟನೆ ಹಿಂದೆ ಕಾಣದ ಕೈಗಳು ಕೆಲಸ ಮಾಡಿದ್ದು, ಈ ಸಂಬಂಧ ಸಮಗ್ರ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಬೇಕು'' ಎಂದು ದೇವರಾಜ್ ಆಗ್ರಹಿಸಿದರು.

''ಘಟನಾ ಸ್ಥಳದಲ್ಲಿದ್ದ ಜನರು ಕಾಡಾನೆ ದಾಳಿಯಿಂದ ಮಹಿಳೆ ಮೃತಪಟ್ಟಿದ್ದರಿಂದ ಆಕ್ರೋಶಿತರಾಗಿದ್ದು ನಿಜ, ಅಧಿಕಾರಿಗಳನ್ನು ತರಾಟೆಗೆ ಪಡೆದದ್ದೂ ನಿಜ, ಆದರೆ ಯಾರ ಮೇಲೂ ಸ್ಥಳೀಯ ಗ್ರಾಮಸ್ಥರು ಹಲ್ಲೆ ಮಾಡಿಲ್ಲ. ಗ್ರಾಮಕ್ಕೆ ತಡವಾಗಿ ಬಂದ ಶಾಸಕರ ವಿರುದ್ಧವೂ ಜನರು ಆಕ್ರೋಶಗೊಂಡಿದ್ದರಾದರೂ ಸ್ಥಳೀಯರ್ಯಾರೂ ಹಲ್ಲೆ ಮಾಡಿಲ್ಲ ಎಂದು ಗ್ರಾಮಸ್ಥರೇ ತಿಳಿಸಿದ್ದಾರೆ. ಘಟನೆ ಸಂದರ್ಭ ಗ್ರಾಮಕ್ಕೆ ಬಂದಿದ್ದ ಹೊರಗಿನ ವ್ಯಕ್ತಿಗಳು ಈ ದಾಂಧಲೆ ನಡೆಸಿದ್ದಾರೆ. ಗ್ರಾಮಕ್ಕೆ ಹೊರಗಿನಿಂದ ಬಂದಿದ್ದವರು ಯಾರು? ಅವರೆಲ್ಲರೂ ಬಿಜೆಪಿ ಪಕ್ಷದ ಕಾರ್ಯಕರ್ತರಾ ಎಂಬುದನ್ನೂ ಪತ್ತೆ ಮಾಡಬೇಕು ಎಂದ ಅವರು, ಘಟನೆ ಸಂಬಂಧ ಪೊಲೀಸರು 8 ಮಂದಿಯನ್ನು ಬಂಧಿಸಿದ್ದು, ಬಂದನಕ್ಕೊಳಗಾದವರು ಅಮಾಯಕರಾಗಿದ್ದಾರೆ. ಪೊಲೀಸರು ಅಮಾಯಕರನ್ನು ಬಿಡುಗಡೆ ಮಾಡಿ ಸಂಚು ಮಾಡಿ ದಾಂಧಲೆ ಸೃಷ್ಟಿಸಿದವರನ್ನು ಬಂಧಿಸಬೇಕು'' ಎಂದರು. 

ಸಿಪಿಐ ಪಕ್ಷದ ರಾಧಾ ಸುಂದರೇಶ್ ಮಾತನಾಡಿ, ''ಜಿಲ್ಲೆಯಲ್ಲಿ ಕಾಡು ಪ್ರಾಣಿಗಳು-ಮಾನವ ಸಂಘರ್ಷಕ್ಕೆ ಸರಕಾರ ಹಾಗೂ ಅರಣ್ಯ ಇಲಾಖೆ ಕಾರಣ, ಕಾಡಿನಲ್ಲಿ ಅರಣ್ಯ ಇಲಾಖೆ ಕಾಡು ಪ್ರಾಣಿಗಳಿಗೆ ಬೇಕಾದ ಬಿದಿರು, ಹಣ್ಣು ಹಂಪಲಿನ ಮರಗಿಡಗಳನ್ನು ಬೆಳೆಸದೇ ಅಕೇಶಿಯಾ, ನೀಲಗಿರಿಯಂತಹ ಮರಗಳನ್ನು ಬೆಳೆಸುತ್ತಿರುವುದರಿಂದ ಪ್ರಾಣಿಗಳಿಗೆ ಆಹಾರ ಸಿಗದೇ ಪ್ರಾಣಿಗಳು ನಾಡಿನತ್ತ ಆಹಾರಕ್ಕಾಗಿ ಬರುತ್ತಿವೆ. ಇದನ್ನು ಮರೆಮಾಚಲು ಸರಕಾರ ರೈತರ ಮೇಲೆ ಗೂಬೆ ಕೂರಿಸುತ್ತಾ ರೈತರು, ಬೆಳೆಗಾರರು ಅರಣ್ಯ ಒತ್ತುವರಿ ಮಾಡಿರುವುದರಿಂದ ಪ್ರಾಣಿಗಳು ನಾಡಿನತ್ತ ಬರುತ್ತಿವೆ ಎಂದು ಅಪಪ್ರಚಾರ ಮಾಡುತ್ತಿದೆ. ಸರಕಾರ ಉಪಯೋಗವಿಲ್ಲದ ಮರಗಳನ್ನು ಬೆಳೆಸುವ ನೀತಿ ಕೈಬಿಟ್ಟು ಕಾಡು ಪ್ರಾಣಿಗಳಿಗೆ ಆಹಾರ ನೀಡುವ ಮರಗಿಡಗಳನ್ನು ಬೆಳೆಸಲು ನೀತಿ ರೂಪಿಸಬೇಕು'' ಎಂದು ಆಗ್ರಹಿಸಿದರು. 

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಮಂಜಪ್ಪ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

''ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಕಾಡಾನೆ ಹಾವಳಿಯಿಂದಾಗಿ ರೈತರು ಬೆಳೆ ಕಳೆದುಕೊಳ್ಳುತ್ತಿರುವುದಲ್ಲದೇ ಪ್ರಾಣವನ್ನೂ ಕಳೆದುಕೊಳ್ಳುತ್ತಿದ್ದಾರೆ. ಕಾಡಾನೆ ದಾಳಿಯಿಂದ ಒಂದೇ ವರ್ಷದಲ್ಲಿ 6ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಸಾವು ನೋವುಗಳು ಸಂಭವಿಸುತ್ತಿದ್ದರೂ ರಾಜ್ಯ ಸರಕಾರ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಸರಕಾರ ಇದುವರೆಗೂ ಶಾಶ್ವತ ಯೋಜನೆ ರೂಪಿಸುವಲ್ಲಿ ವಿಫಲವಾಗಿದೆ. ಇದಕ್ಕೆ ಬಿಜೆಪಿಯ ಶಾಸಕ ಸಿ.ಟಿ.ರವಿ. ಕೇಂದ್ರ ಮಂತ್ರಿ ಶೋಭಾ ಕರಂದ್ಲಾಜೆ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಗಳ ನಿರ್ಲಕ್ಷ್ಯ ಕಾರಣ. ಸರಕರ ಇನ್ನಾದರೂ ಶಾಶ್ವತ ಯೋಜನೆ ಜಾರಿ ಮಾಡದಿದ್ದಲ್ಲಿ ಜನರ ಆಕ್ರೋಶಕ್ಕೆ ಸರಕಾರ ಗುರಿಯಾಗಲಿದೆ. ಹುಲ್ಲೇಮನೆ ಘಟನೆ ಸಂಬಂಧ ಮೃತ ಮಹಿಳೆಯ ಕುಟುಂಬಕ್ಕೆ ಸರಕಾರ 50 ಲಕ್ಷ ರೂ. ಪರಿಹಾರ ನೀಡಬೇಕು. ಮಹಿಳೆಯ ಮಗನಿಗೆ ಸರಕಾರಿ ಕೆಲಸ ನೀಡಬೇಕು''

- ಎಚ್.ಎಚ್.ದೇವರಾಜ್

Similar News