ಸದಾಶಿವ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಿದರೆ, ಚುನಾವಣೆ ಬಹಿಷ್ಕಾರ: ಬಂಜಾರ ಸಮುದಾಯ ಎಚ್ಚರಿಕೆ

Update: 2022-11-22 12:49 GMT

ಬೆಂಗಳೂರು, ನ.22: ಸದಾಶಿವಾ ಆಯೋಗ ವರದಿಯ ಶಿಪಾರಸ್ಸುಗಳನ್ನು ಜಾರಿ ಮಾಡುವ ಕುರಿತು ಚರ್ಚೆಗಳು ನಡೆಯುತ್ತಿದ್ದು, ಒಂದು ವೇಳೆ ವರದಿಯ ಶಿಫಾರಸುಗಳನ್ನು ಜಾರಿಗೊಳಿಸಿದರೆ ಮುಂಬರುವ ವಿಧಾನಸಭಾ ಚುನಾವಣೆಯನ್ನೇ ಬಹಿಷ್ಕರಿಸಲಾಗುತ್ತದೆ ಕರ್ನಾಟಕ ರಾಜ್ಯ ಬಂಜಾರ ವಿದ್ಯಾರ್ಥಿ ಸಂಘವು ಎಚ್ಚರಿಕೆ ನೀಡಿದೆ. 

ಮಂಗಳವಾರ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಗಿರೀಶ್ ಡಿ.ಎಸ್, ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಕೆಲವು ರಾಜಕೀಯ ಪಕ್ಷಗಳು ಚುನಾವಣಾ ದೃಷ್ಟಿಯಿಂದ ಸದಾಶಿವ ಆಯೋಗ ವರದಿ ಜಾರಿಯಾಗಬೇಕೆಂದು ಹೇಳಿಕೆ ನೀಡುತ್ತಿದ್ದಾರೆ. ರಾಜ್ಯದ 30 ಲಕ್ಷಕ್ಕೂ ಅಧಿಕ ಜನಸಂಖ್ಯೆಯುಳ್ಳ ಬಂಜಾರ ಸಮುದಾಯ ಇದನ್ನು ವಿರೋಧಿಸುತ್ತದೆ ಎಂದರು.

ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ದಿನನಿತ್ಯ ಆಗುತ್ತಿರುವ ಬೆಳವಣಿಗೆಗಳು ರಾಜಕೀಯ ಪ್ರೇರಿತವಾಗಿದೆ. ಪರಿಶಿಷ್ಟ ಜಾತಿಗಳನ್ನು ಒಡೆಯಲು ನಡೆಸಲಾಗುತ್ತಿರುವ ಅತೀ ದೊಡ್ಡ ಷಡ್ಯಂತ್ರ ಇದಾಗಿದೆ. ಸದಾಶಿವ ಆಯೋಗ ವರದಿ ಅವೈಜ್ಞಾನಿಕ ಹಾಗೂ ಸಂವಿಧಾನ ವಿರೋಧಿಯಾಗಿದೆ. ಒಳಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂಬುದನ್ನು ವಿವಿಧ ನ್ಯಾಯಾಲಯಗಳು ಸ್ಪಷ್ಟಪಡಿಸಿವೆ. ಹಾಗಾಗಿ ರಾಜ್ಯ ಸರಕಾರ ಈ ಆಯೋಗದ ವರದಿಯನ್ನು ತಿರಸ್ಕರಿಸಬೇಕು ಎಂದು ಅವರು ಆಗ್ರಹಿಸಿದರು.

ಸದಾಶಿವ ಆಯೋಗ ವರದಿ ಜಾರಿಯಾಗುವುದೆಂದು ರಾಜ್ಯದಲ್ಲಿರುವ ಬಂಜಾರ, ಭೋವಿ, ಕೊರಚ, ಕೊರಮ ಹಾಗೂ ಇನ್ನಿತರೆ ಪರಿಶಿಷ್ಟ ಜಾತಿಯ ಸಮುದಾಯಗಳು ಆತಂಕದ ಸ್ಥಿತಿಯಲ್ಲಿವೆ. ಬಡತನ, ಅನಕ್ಷರತೆ, ನಿರುದ್ಯೋಗ, ವಲಸೆ, ದಬ್ಬಾಳಿಕೆ, ಅತ್ಯಾಚಾರ, ಸರಕಾರಿ ಸೌಲಭ್ಯ ಮತ್ತು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವುದು ಸೇರಿದಂತೆ ಸಾಕಷ್ಟು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ ಸರಕಾರ ಇವರ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೆಚ್.ಡಿ. ಕುಮಾರಸ್ವಾಮಿ, ಬಿಜಿಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಸಚಿವ ಗೋವಿಂದ ಕಾರಜೋಳ ಸೇರಿ ರಾಜಕೀಯ ಮುಖಂಡರು ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು, ಎಡ ಸಮುದಾಯದ ಮತವನ್ನು ಓಲೈಸುವ ಸಲುವಾಗಿ ಸದಾಶಿವ ಆಯೋಗ ವರದಿ ಜಾರಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಇದಕ್ಕೆ ರಾಜ್ಯದ ಸಮಸ್ತ ಬಂಜಾರ ಸಮುದಾಯದ ವಿರೋಧವಿದೆ ಎಂದು ಅವರು ಸ್ಪಷ್ಟಪಡಿಸಿದರು. 

''2005ರಲ್ಲಿ ರಚನೆ ಆದ ಸದಾಶಿವ ಆಯೋಗ 2012ರಲ್ಲಿ ಡಿ.ವಿ.ಸದಾನಂದಗೌಡ ನೇತೃತ್ವದ ಬಿಜೆಪಿ ಸರಕಾರ ಇದ್ದಾಗ ವರದಿ ಸಲ್ಲಿಕೆಯಾಗಿದೆ. ವರದಿ ಸಲ್ಲಿಕೆಯಾಗಿ ಈಗಾಗಲೇ 10 ವರ್ಷಗಳು ಕಳೆದಿದ್ದು, ಈಗ ವರದಿಯ ಶಿಪಾರಸ್ಸುಗಳನ್ನು ಜಾರಿಗೊಳಿಸಬೇಕು ಎನ್ನುವುದು ಅಪ್ರಸ್ತುತ ಹಾಗೂ ಅರ್ಥಹೀನವಾಗಿದೆ. ಕೇಂದ್ರ ಸರಕಾರದ ಜಾತಿಗಣತಿ ಅಂಕಿ-ಅಂಶ ಹಾಗೂ ಸದಾಶಿವ ಆಯೋಗ ವರದಿ ಅಂಕಿ-ಅಂಶಗಳಿಗೆ ಸಾಕಷ್ಟು ವ್ಯತ್ಯಾಸವಿದೆ. ಹಾಗಾಗಿ ಸರಕಾರ ಮತ್ತೊಂದು ಜಾತಿಗಣತಿ ಮಾಡಿ, ಸ್ಪಷ್ಟ ವರದಿ ನೀಡಬೇಕು.''

- ಮಂಜುನಾಥ್ ಜೆ. ಕರ್ನಾಟಕ ರಾಜ್ಯ ಬಂಜಾರ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ

-------------------------------

''ಒಳಮೀಸಲಾತಿ ಹೋರಾಟ ನೆಪದಲ್ಲಿ ಬಂಜಾರ ಸಮಾಜದ ಆರಾಧ್ಯದೈವ ಕುಲಗುರು ಸಂತ ಶ್ರೀ ಸೇವಾಲಾಲ್ ಮಹಾರಾಜರನ್ನು ಹಾಗೂ ಸಚಿವ ಪ್ರಭು ಚವ್ಹಾಣ್‍ರನ್ನು ಮಾದಿಗ ದಂಡೋರ ಸಮಿತಿಯವರು ಏಕ ವಚನದಲ್ಲಿ ನಿಂಧಿಸುವುದು ಅಕ್ಷಮ್ಯ ಅಪರಾಧವಾಗಿದೆ. ಮಾದಿಗ ದಂಡೋರ ಸಮಿತಿಯವರು ಪ್ರಜಾಸತ್ತಾತ್ಮಕವಾಗಿ ಹೋರಾಟ ಮಾಡುವುದು ಬಿಟ್ಟು ಬಂಜಾರ ಸಮುದಾಯದವರ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ''

- ಕೆ.ಡಿ. ನಾಯ್ಕ್, ಕರ್ನಾಟಕ ಬಂಜಾರ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ

Similar News