ವಾಣಿವಿಲಾಸ ಜಲಾಶಯ ಕಾಲುವೆಗಳ ಆಧುನೀಕರಣಕ್ಕೆ 738 ಕೋಟಿ ರೂ.: ಮುಖ್ಯಮಂತ್ರಿ ಬೊಮ್ಮಾಯಿ

Update: 2022-11-22 17:20 GMT

ಚಿತ್ರದುರ್ಗ, ನ.22: ವಾಣಿವಿಲಾಸ ಸಾಗರ ಜಲಾಶಯದ ಕಾಲುವೆಗಳು ಮುಚ್ಚಿಹೋಗಿದ್ದು, ಅವುಗಳ ಆಧುನೀಕರಣಕ್ಕಾಗಿ 738 ಕೋಟಿ ರೂ.ಗಳನ್ನು ನೀಡಲಾಗಿದೆ. ಕಾಲುವೆಗಳನ್ನು ನವೀಕರಣಗೊಳಿಸುವ ಮೂಲಕ ರೈತರ ಕೃಷಿಗೆ ಸಹಕರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಂಗಳವಾರ ಹಿರಿಯೂರಿನಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಜನ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಾಣಿ ವಿಲಾಸ ಸಾಗರ ಜಲಾಶಯದ ನಿರ್ವಹಣೆ ಯೋಜನೆಯಡಿ 20 ಕೋಟಿ ರೂ. ನೀಡಲಾಗಿದ್ದು, ಜಲಾಶಯವನ್ನು ಇನ್ನಷ್ಟು ಗಟ್ಟಿಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ವಾಣಿ ವಿಲಾಸ ಸಾಗರ  ಜಲಾಶಯ ಪ್ರವಾಸಿ ಆಕರ್ಷಣೆಯಾಗಿದ್ದು, ಸುಂದರ ಉದ್ಯಾನವನ್ನು ನಿರ್ಮಿಸಲು ಸರಕಾರ ಅನುಮತಿ ನೀಡಲಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ 5 ಟಿಎಂಸಿ ನೀರನ್ನು ಖಾಯಂ ಆಗಿ ಒದಗಿಸಲು ಆದೇಶ ನೀಡಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಭದ್ರಾ ಮೇಲ್ದಂಡೆ ಯೋಜನೆ: ಈ ಭಾಗದ ಜನರು 2007 ಹಾಗೂ 2008ರಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 580 ದಿನಗಳ ಸುದೀರ್ಘ ಹೋರಾಟ ನಡೆಸಿದ್ದರು. ಹಿಂದಿನ ಸರಕಾರಗಳು ಈ ಹೋರಾಟವನನ್ನು ನಿರ್ಲಕ್ಷಿಸಿದ್ದರು. ಯಡಿಯೂರಪ್ಪ ಸರಕಾರದಲ್ಲಿ ನಾನು ನೀರಾವರಿ ಸಚಿವನಾಗಿದ್ದಾಗ ಭದ್ರಾ ಮೇಲ್ದಂಡೆ ಯೋಜನೆಗೆ ಅನುಮತಿ ಕೊಡಿಸಿ, ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಿಸಲಾಯಿತು ಎಂದು ಅವರು ಹೇಳಿದರು.

ಜಿಲ್ಲೆಯ ಜನರಿಗೆ ಭದ್ರಾ ಮೇಲ್ದಂಡೆಯಿಂದಲೂ ನೀರು ಒದಗಿಸುವ ಹಾಗೂ ವಾಣಿವಿಲಾಸ ಸಾಗರಕ್ಕೆ ನೀರು ಬಿಡಿಸುವ ಭರವಸೆಯನ್ನು ಈಡೇರಿಸಲಾಗಿದೆ. ರಾಜ್ಯದಲ್ಲಿ ನಿಸರ್ಗದ, ಜಲದ ಹಾಗೂ ಜನರ ಸಂಪನ್ಮೂಲಗಳಿದ್ದು, ಸ್ಪಷ್ಟವಾದ ಅಭಿವೃದ್ಧಿಯ ಹಾದಿಯಲ್ಲಿ ನಡೆಯಲು ದಿಟ್ಟ ನಾಯಕತ್ವ ಬೇಕಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ನೀರಾವರಿ ಸೌಲಭ್ಯ ಒದಗಿಸಲು ಬದ್ಧ: ಈ ಪ್ರದೇಶದಲ್ಲಿ ಸುಮಾರು 500 ಕೋಟಿಗಿಂತಲೂ ಹೆಚ್ಚಿನ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಯುಜಿಡಿ ಯೋಜನೆಯಡಿ 208 ಕೋಟಿ ರೂ. ನಿಗದಿಪಡಿಸಿದ್ದು, ಮೊದಲನೇ ಹಂತದಲ್ಲಿ 104 ಕೋಟಿ ರೂ.ಗಳನ್ನು ಮಂಜೂರಾತಿ ನೀಡಲಾಗಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ, ಹಿರಿಯೂರು, ಹೊಸದುರ್ಗ, ಚಳ್ಳಕೆರೆ ಸೇರಿದಂತೆ ಎಲ್ಲ ತಾಲೂಕುಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸಲು ಸರಕಾರ ಬದ್ಧವಾಗಿದೆ ಎಂದು ಅವರು ಹೇಳಿದರು. 

ಹನಿ ನೀರಾವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದ್ದು, 1 ಲಕ್ಷ ಹೆಕ್ಟೆರ್ ಪ್ರದೇಶಕ್ಕೆ ನೀರಾವರಿ ಒದಗಿಸಲಾಗುವುದು. ಈ ಭಾಗದಲ್ಲಿ ಇಸ್ರೋ, ಐಐಟಿ ಇದೆ. ಇಸ್ರೋ ಸಂಸ್ಥೆ ಮರು ಬಳಕೆಯಾಗಬಹುದಾದ ರಾಕೆಟ್ ಲ್ಯಾಂಡಿಂಗ್ ಪ್ರಯೋಗವನ್ನು ಚಳ್ಳಕೆರೆಯ ಘಟಕದಲ್ಲಿ ನಡೆಸಲು ಕ್ರಮ ಕೈಗೊಳ್ಳುತ್ತಿದೆ. ಇಸ್ರೋ ಘಟಕದ ಸ್ಥಾಪನೆಗೆ ಭೂಮಿಯನ್ನು ಯಡಿಯೂರಪ್ಪನವರ ಸರಕಾರ ನೀಡಿದೆ ಎಂದು ಅವರು ಹೇಳಿದರು.

ಚಿತ್ರದುರ್ಗದಲ್ಲಿ 1000 ಎಕರೆಯ ಇಂಡಸ್ಟ್ರಿಯಲ್ ಟೌನ್‍ಶಿಪ್: ಚಿತ್ರದುರ್ಗದಲ್ಲಿ 1000 ಎಕರೆಯ ಇಂಡಸ್ಟ್ರಿಯಲ್ ಟೌನ್‍ಶಿಪ್ ಮಾಡಲು ಸ್ಥಳವನ್ನು ಗುರುತಿಸಲಾಗಿದೆ. ಈ ಕಾಮಗಾರಿಯನ್ನು ಮುಂದಿನ ಜನವರಿಯಲ್ಲಿ ಪ್ರಾರಂಭಿಸಲಾಗುವುದು. ಈ ಯೋಜನೆಯಿಂದ ಆರ್ಥಿಕ ಬದಲಾವಣೆ, ಕೈಗಾರಿಕಾ ಅಭಿವೃದ್ಧಿ, ಯುವಕರಿಗೆ ಉದ್ಯೋಗ ಕಲ್ಪಿಸಿದಂತಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.

ಚಿತ್ರದುರ್ಗದ ಮೂಲಕ ತುಮಕೂರು–ದಾವಣಗೆರೆ ರೈಲು ಯೋಜನೆಗೆ ಬೇಕಾದ ಅನುದಾನವನ್ನು ಒದಗಿಸಲಾಗುತ್ತಿದ್ದು, ಮುಂದಿನ ಮಾರ್ಚ್ ಒಳಗೆ ಯೋಜನೆಗೆ ಅಡಿಗಲ್ಲು ಹಾಕಲಾಗುವುದು. ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಬೇಡಿಕೆ ಇದೆ. ನೀರಾವರಿ ಹೆಚ್ಚಿಸಿ, ಕಬ್ಬು ಬೆಳೆದು ಸಕ್ಕರೆ ಉತ್ಪಾದನೆ, ಎಥನಾಲ್  ಉತ್ಪಾದನೆಯಿಂದ ರೈತರಿಗೆ ಅನುಕೂಲವಾಗುತ್ತದೆ. ತಜ್ಞರ ಸಮಿತಿಯನ್ನು ಈ ಪ್ರದೇಶಕ್ಕೆ ಕಳುಹಿಸಿ, ಅವರ ಅಭಿಪ್ರಾಯದಂತೆ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

Similar News