ಎಚ್.ಡಿ.ಕೋಟೆ | ಬೆಳೆ ಸಾಲ ನಿರಾಕರಣೆ ಆರೋಪ: ಬ್ಯಾಂಕ್‌ನಲ್ಲೇ ಕೀಟನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದ ರೈತ ಸಾವು

Update: 2022-11-23 16:26 GMT

ಮೈಸೂರು, ನ.23: ಬೆಳೆ ಸಾಲ ನಿರಾಕರಿಸಿದರೆಂದು ಆರೋಪಿಸಿ ಬ್ಯಾಂಕಿನಲ್ಲೇ ಕೀಟನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದ ನಿಂಗೇಗೌಡ (73 ವರ್ಷ) ಎಂಬ ರೈತ ಎರಡು ದಿನಗಳಿಂದ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಬೆಳಿಗ್ಗೆ ಮೃತಪಟ್ಟ ಘಟನೆ ವರದಿಯಾಗಿದೆ. 

ಒಂದು ತಿಂಗಳ ಹಿಂದೆ ಬೆಳೆ ಸಾಲ ಕೋರಿ ಹೊಸಹೊಳಲು ಗ್ರಾಮದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್‍ನಲ್ಲಿ ಕಬ್ಬಿನ ಬೆಳೆ ಸಾಲಕ್ಕೆ ಮೃತ ನಿಂಗೇಗೌಡರು ಅರ್ಜಿ ಸಲ್ಲಿಸಿದ್ದರು. ತನ್ನ ಸಾಲದ ಅರ್ಜಿ ಬಗ್ಗೆ ವ್ಯವಸ್ಥಾಪಕರಲ್ಲಿ ವಿಚಾರಣೆ ಮಾಡಿದಾಗ ಸಿಬಿಲ್ ರೇಟ್ ಕಡಿಮೆ ಇದೆ ನಿಮಗೆ ಸಾಲ ಕೊಡಲು ಆಗುವುದಿಲ್ಲ ಎಂದು ಬ್ಯಾಂಕ್ ವ್ಯವಸ್ಥಾಪಕರು ಹೇಳಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತ ರೈತ ನಿಂಗೇಗೌಡ ಬ್ಯಾಂಕಿನೊಳಗೆ ಕೀಟನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದರು.

ನಿಂಗೇಗೌಡ ಅವರ ಮಗ ಮಹದೇವ ಎಂಬವರು ವಿಷಯ ತಿಳಿದು ತನ್ನ ತಂದೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಎರಡು ದಿನದ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನನ್ನ ತಂದೆಯ ಸಾವಿಗೆ ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕರು ನೇರ ಹೊಣೆ ಎಂದು ಮಹದೇವ ರವರು ಆರೋಪಿಸಿದ್ದು,  ಅಂತರಸಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೃತರ ಶವವನ್ನು ಮೈಸೂರು ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ ಮರಣೋತ್ತರ ಪರೀಕ್ಷೆ ನಂತರ ಕುಟುಂಬಸ್ಥರಿಗೆ ನೀಡಲಾಗಿದ್ದು,  ರೈತ ಹೋರಾಟಗಾರರು, ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ. 

Similar News