ಚುನಾವಣಾ ಆಯುಕ್ತರ ನೇಮಕಕ್ಕೆ ‘ಕೊಲಿಜಿಯಂ’ ವ್ಯವಸ್ಥೆ ಅಗತ್ಯ: ದಿನೇಶ್ ಗುಂಡೂರಾವ್

Update: 2022-11-24 12:08 GMT

ಬೆಂಗಳೂರು, ನ. 24: ‘ಸುಪ್ರೀಂ ಕೋರ್ಟ್ ಕೇಂದ್ರ ಚುನಾವಣಾ ಆಯೋಗ ದುರ್ಬಲ ಸಂಸ್ಥೆ ಎಂಬ ಅಭಿಪ್ರಾಯಪಟ್ಟಿದೆ. ಆಯೋಗದ ಇತ್ತೀಚಿನ ಕಾರ್ಯವೈಖರಿ ಗಮನಿಸಿದರೆ ಅದು ಸತ್ಯ ಕೂಡ. ಸಿಇಸಿ ಹೆಸರಿಗೆ ಮಾತ್ರ ಸಾಂವಿಧಾನಿಕ ಸಂಸ್ಥೆ. ಆದರೆ ಈ ಸರಕಾರದ ಅವಧಿಯಲ್ಲಿ ಹಲ್ಲಿಲ್ಲದ ಹಾವು. ಸಿಇಸಿ ಇತ್ತೀಚೆಗೆ ಯಾವ ವಿಚಾರದಲ್ಲಿ ನಿಷ್ಪಕ್ಷಪಾತವಾಗಿ ಹಾಗೂ ನಿಷ್ಟೂರವಾಗಿ ನಡೆದುಕೊಂಡಿದೆ?’ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.

ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಕೇಂದ್ರ ಸಚಿವ ಸಂಪುಟ ತಮಗೆ ಯಾರು ಅತಿಹೆಚ್ಚು ನಿಷ್ಟರೋ, ಯಾರು ತಮ್ಮ ಮಾತು ಚಾಚೂ ತಪ್ಪದೆ ಪಾಲಿಸುತ್ತಾರೋ ಅಂತಹ ಜಿ ಹುಝೂರ್ ಮನಃಸ್ಥಿತಿಯವರನ್ನು ಚುನಾವಣಾ ಆಯೋಗದ ಆಯುಕ್ತರನ್ನಾಗಿ ನೇಮಿಸುತ್ತದೆ. ಅಂತಹ ಆಯುಕ್ತರು ತಮಗೆ ಹುದ್ದೆ ಕಲ್ಪಿಸಿದ ಸರಕಾರಕ್ಕೆ ಮುಜುರೆ ಸಲ್ಲಿಸುವುದು ಬಿಟ್ಟು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಲು ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿದ್ದಾರೆ.

‘ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡುವ ಕೊಲಿಜಿಯಂ ವ್ಯವಸ್ಥೆಯಂತೆ ಚುನಾವಣಾ ಆಯೋಗಕ್ಕೆ ಆಯುಕ್ತರನ್ನು ನೇಮಕ ಮಾಡಬೇಕು. ಇಲ್ಲವೇ ಕರ್ನಾಟಕದಲ್ಲಿ ಲೋಕಾಯುಕ್ತರ ನೇಮಕದ ಮಾನದಂಡದಂತೆ ಆಯುಕ್ತರನ್ನು ನೇಮಿಸಬೇಕು. ಹಾಗಾದಾಗ ಮಾತ್ರ ಆಯೋಗ ಸಮರ್ಥವಾಗಿ ಮತ್ತು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯ’ ಎಂದು ಅವರು ಪ್ರತಿಪಾದಿಸಿದ್ದಾರೆ.

Similar News