ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹರಿಸುವಲ್ಲಿ ಸಿಎಂ ಬೊಮ್ಮಾಯಿ ಧಮ್ಮು, ತಾಕತ್ತು ಪ್ರದರ್ಶಿಸಲಿ: ಮಧು ಬಂಗಾರಪ್ಪ

Update: 2022-11-26 13:25 GMT

ಶಿವಮೊಗ್ಗ, ನ.26: ''ಧಮ್ಮು, ತಾಕತ್ತಿನ ಬಗ್ಗೆ ಹೇಳಿಕೆ ನೀಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶರಾವತಿ ಸಂತ್ರಸ್ತರ ಸಮಸ್ಯೆ ಪರಿಹರಿಸುವ ವಿಚಾದರಲ್ಲಿ ಯಾಕೆ ಧಮ್ಮು, ತಾಕತ್ತು ಪ್ರದರ್ಶಿಸುತ್ತಿಲ್ಲ'' ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶರಾವತಿ ಮುಳುಗಡೆ ಸಂತ್ರಸ್ಥರ ಸಮಸ್ಯೆ ಬಗೆಹರಿಸುವ ಕುರಿತು ವಿಶ್ವಾಸ ವ್ಯಕ್ತಪಡಿಲ್ಲ. ಕೇವಲ ಆಶ್ವಾಸ ಕೊಟ್ಟಿದ್ದಾರೆ. ಜಿಲ್ಲಾಧಿಕಾರಿ ಅವರಿಗೆ ವರದಿ ಕೇಳಿದ್ದೇನೆ. ಬಳಿಕ ಕೇಂದ್ರ ಸರ್ಕಾರದ  ಬಳಿ ಚರ್ಚೆ ಮಾಡುವುದಾಗಿ ಹೇಳಿದ್ದಾರೆ.ಇದು ಶರಾವತಿ ಮುಳುಗಡೆ ಸಂತ್ರಸ್ತರ ಗೊಂದಲಕ್ಕೆ ಕಾರಣವಾಗಿದೆ ಎಂದು ದೂರಿದರು.

''ಗಡುವು ಮುಕ್ತಾಯ''

15 ದಿನದಲ್ಲಿ ಶರಾವತಿ ಸಂತ್ರಸ್ಥರ ಸಮಸ್ಯೆ ಬಗೆಹರಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಭರವಸೆ ನೀಡಿದ್ದರು.ಆದರೆ  ಅವರು ಕೇಳಿದ 15 ದಿನದ ಗಡುವು ಶನಿವಾರಕ್ಕೆ ಪೂರ್ಣಗೊಂಡಿದೆ.ಇನ್ನು ಯಾವ ತೀರ್ಮಾನ ಕೈಗೊಳ್ಳುತ್ತಾರೆ ನೋಡಬೇಕಿದೆ.ಅಲ್ಲದೇ ಒಂದೇ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಒಂದು ರೀತಿ ಹೇಳಿದರೆ ಸಂಸದರು ಇನ್ನೊಂದು ರೀತಿ ಹೇಳಿಕೆ ನೀಡಿ ಇನ್ನಷ್ಟು  ಗೊಂದಲ ಮಾಡಿದ್ದಾರೆ ಎಂದರು.

ಹೈಕೋರ್ಟ್ ಸೂಡೂರು ಹಾಗೂ ಕೂಡಿ ಎರಡು ಸರ್ವೇ ನಂಬರ್ಗಳಲ್ಲಿ ಡಿನೋಟಿಫೀಕೇಶನ್ ವಜಾ ಮಾಡಿದರೆ ರಾಜ್ಯ ಸರ್ಕಾರ ಎಲ್ಲಾ 56 ನೋಟಿಫೀಕೇಶನ್‌ಗಳನ್ನು ವಜಾ ಮಾಡಿದೆ. ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸುವ ಮೂಲಕ ನ್ಯಾಯಲಯಕ್ಕೆ ಸಂತ್ರಸ್ಥರ ಪರಿಸ್ಥಿತಿ ಮನವರಿಕೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಲವಾಗಿದೆ ಎಂದರು.

ಜನಾಕ್ರೋಶ ಹೋರಾಟಕ್ಕೆ ಸಜ್ಜು

ಶರಾವತಿ ಮುಳುಗಡೆ ಸಂತ್ರಸ್ತರಿಗೆ ಕಾನೂನು ಬದ್ಧವಾಗಿ ಭೂ ಹಕ್ಕು ನೀಡುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಹಾಗೂ ಮುಳುಗಡೆ ಸಂತ್ರಸ್ತರ ಕಾಂಗ್ರೆಸ್ ಜಾಗೃತಾ ಸಮಿತಿ ವತಿಯಿಂದ ನ.28 ರಂದು ಆಯನೂರಿನಿಂದ ಜನಾಕ್ರೋಶ ಪಾದಯಾತ್ರೆ ಹಾಗೂ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮಧು ಬಂಗಾರಪ್ಪ ತಿಳಿಸಿದರು.ಪಾದಯಾತ್ರೆಯಲ್ಲಿ ಭಾಗಿಯಾಗುವ ರೈತರಿಗೆ  ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ. ಪಾದಯಾತ್ರೆಯು ಆಯನೂರಿನಿಂದ ಖಾಸಗಿ ಬಸ್ ನಿಲ್ದಾಣಕ್ಕೆ ಆಗಮಿಸಲಿದೆ. ಅಲ್ಲಿಂದ ಅಮೀರ್ ಅಹಮದ್ ಸರ್ಕಲ್, ಗೋಪಿ ಸರ್ಕಲ್ ಮೂಲಕ ಎನ್‌ಇಎಸ್ ಮೈದಾನ ತಲುಪಲಿದೆ. ಸಂಜೆ 4 ಗಂಟೆಗೆ ಎನ್‌ಇಎಸ್ ಮೈದಾನದಲ್ಲಿ ಸಮಾವೇಶ ನಡೆಸಲಾಗುತ್ತದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿ ಹಲವರು ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಮಾಜಿ ಶಾಸಕರಾದ ಗೋಪಾಲಕೃಷ್ಣ ಬೇಳೂರು, ಕೆ.ಬಿ. ಪ್ರಸನ್ನಕುಮಾರ್, ಆರ್. ಪ್ರಸನ್ನಕುಮಾರ್, ಹೆಚ್.ಎಂ. ಚಂದ್ರಶೇಖರಪ್ಪ, ಪ್ರಮುಖರಾದ ಕಲಗೋಡು ರತ್ನಾಕರ್, ಎನ್. ರಮೇಶ್, ಇಸ್ಮಾಯಿಲ್ ಖಾನ್, ಎಸ್.ಪಿ. ದಿನೇಶ್, ಬಲದೇವ ಕೃಷ್ಣ, ಡಾ. ಶ್ರೀನಿವಾಸ್ ಕರಿಯಣ್ಣ, ಇಕ್ಕೇರಿ ರಮೇಶ್, ದೀಪಕ್ ಸಿಂಗ್, ಮಂಜುನಾಥ ಬಾಬು, ಜಿ.ಡಿ ಮಂಜುನಾಥ್ ಮೊದಲಾದವರು ಇದ್ದರು.

Similar News